ತೆಲಂಗಾಣ ಬಿಜೆಪಿ ಅಧ್ಯಕ್ಷ ಸಂಜಯ್‌ ಬಂಡಿಯನ್ನು ಸೆರೆ ಹಿಡಿಯಲಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾತ್ರೋರಾತ್ರಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದು, ಭಾರಿ ಹೈಡ್ರಾಮಾ ವರದಿಯಾಗಿದೆ. ಇದನ್ನು ಸೇಡಿನ ಕ್ರಮ ಎಂದು ಬಿಜೆಪಿ ಟೀಕೆ ಮಾಡಿದೆ. 

ಹೈದರಾಬಾದ್‌ (ಏಪ್ರಿಲ್ 6, 2023): ತೆಲಂಗಾಣದಲ್ಲಿ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ ಮತ್ತು ನಡುವಿನ ರಾಜಕೀಯ ದ್ವೇಷ ಮುಗಿಲು ಮುಟ್ಟಿರುವ ಹೊತ್ತಿನಲ್ಲೇ, ಮಂಗಳವಾರ ರಾತ್ರೋರಾತ್ರಿ ನಡೆದ ಬೆಳವಣಿಗೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಬಂಡಿ ಸಂಜಯ್‌ ಕುಮಾರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಡಿ ಸಂಜಯ್‌ ಅವರನ್ನು ಪ್ರಕರಣದ ಮುಖ್ಯ ಆರೋಪಿ ಎಂದು ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಬುಧವಾರ ಬಂಡಿ ಸಂಜಯ್‌ ಕುಮಾರ್‌ ಸೇರಿದಂತೆ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಮೂವರನ್ನೂ ಏಪ್ರಿಲ್‌ 19ರವರೆಗೂ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

Add Asianetnews Kannada as a Preferred SourcegooglePreferred

ಈ ನಡುವೆ ಸರ್ಕಾರದ ಕ್ರಮ ಬಿಜೆಪಿ (BJP) ಕೆಂಗಣ್ಣಿಗೆ ಗುರಿಯಾಗಿದ್ದು, ‘ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ (K Chandrasekhar Rao) ಅವರ ಸೇಡಿನ ರಾಜಕೀಯ (Politics) ಇದು’ ಎಂದು ಅರೋಪಿಸಿದೆ.

ಇದನ್ನು ಓದಿ: From the India Gate: ಮಲಯಾಳಂ ನಟನ ಇನ್ನೋಸೆಂಟ್‌ ರಾಜಕೀಯ; ತೆಲಂಗಾಣದಲ್ಲಿ ಉಪ್ಪಿನಕಾಯಿಯಾದ ‘ಕಮಲ’..!

ಮಂಗಳವಾರ ರಾಜ್ಯದಲ್ಲಿ ಎಸ್‌ಎಸ್‌ಸಿ (SSC) ಹಿಂದಿ ಪರೀಕ್ಷೆ (Hindi Exam) ನಡೆದಿತ್ತು. ಪರೀಕ್ಷೆ ವೇಳೆ ವಿದ್ಯಾರ್ಥಿಯೊಬ್ಬನ (Student) ಪ್ರಶ್ನೆಪತ್ರಿಕೆಯ ಫೋಟೋ ತೆಗೆದಿದ್ದ 16 ವರ್ಷದ ಬಾಲಕನೊಬ್ಬ ಅದನ್ನು ವಾಟ್ಸಾಪ್‌ನಲ್ಲಿ ಶೇರ್‌ ಮಾಡಿದ್ದ. ಒಂದು ಪ್ರತಿಯನ್ನು ಬಂಡಿ ಸಂಜಯ್‌ ಅವರಿಗೂ ಕಳಿಸಿದ್ದ. ಬಂಡಿ ಆಪ್ತ ಬಿಜೆಪಿ ಮುಖಂಡನೊಬ್ಬ ಕೂಡ ಪ್ರಶ್ನೆಪತ್ರಿಕೆ ಶೇರ್‌ ಮಾಡಿದ್ದ. ಹೀಗಾಗಿ ಈ ಸೋರಿಕೆ ಹಗರಣದ ಹಿಂದೆ ಬಂಡಿ ಅವರ ಕೈವಾಡ ಇರಬಹುದು ಎಂಬ ಗುಮಾನಿ ಹಿನ್ನೆಲೆಯಲ್ಲಿ, ಅವರನ್ನು ರಾತ್ರೋರಾತ್ರಿ ಪೊಲೀಸರು ಮನೆಯಿಂದ ಎಳೆದುಕೊಂಡು ಹೋಗಿದ್ದಾರೆ.

ಕಳಂಕದ ಯತ್ನ:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾರಂಗಲ್‌ ಪೊಲೀಸ್‌ ಆಯುಕ್ತ ರಂಗನಾಥ್‌, ‘ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ರಾಜ್ಯ ಸರ್ಕಾರಕ್ಕೆ ಕಳಂಕ ತರುವ, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಹುಟ್ಟಿಸುವ ಉದ್ದೇಶವನ್ನು ಆರೋಪಿಗಳು ಹೊಂದಿದ್ದರು. ಪ್ರಮುಖ ಆರೋಪಿಗಳಾದ ಸಂಜಯ್‌ ಮತ್ತು ಬಿಜೆಪಿ ಕಾರ್ಯಕರ್ತನ ನಡುವಿನ ವಾಟ್ಸಾಪ್‌ ಸಂದೇಶಗಳು ಇದಕ್ಕೆ ಸ್ಪಷ್ಟಸಾಕ್ಷಿ. ಸಂಜಯ್‌ ಕುಮಾರ್‌ ಮಾತ್ರವಲ್ಲದೆ ಇತರೆ ಹಲವು ಬಿಜೆಪಿ ನಾಯಕರು ಮತ್ತು ಸಚಿವರ ಮೊಬೈಲ್‌ಗಳಿಗೂ ಸೋರಿಕೆಯಾದ ಪ್ರಶ್ನೆ ಪತ್ರಿಕೆ ರವಾನೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಯ್ಯೋ ಪಾಪ..! 3 ತಿಂಗಳ ಕಂದಮ್ಮನನ್ನು ಕೊಂದು ನೇಣು ಬಿಗಿದುಕೊಂಡ ದಂಪತಿ