ಬಾಲ್ಯದಲ್ಲಿ ಪೋಷಕರಿಂದ ದೂರಾಗಿದ್ದ ಬಾಲಕನೋರ್ವ ಬರೋಬ್ಬರಿ 20 ವರ್ಷಗಳ ಬಳಿಕ ಮರಳಿ ಗೂಡು ಸೇರಿದ್ದು, ಇದರಿಂದ ಪೋಷಕರು ಫುಲ್ ಖುಷಿಯಾಗಿದ್ದಾರೆ. 

ತೆಲಂಗಾಣ: ಬಾಲ್ಯದಲ್ಲಿ ಪೋಷಕರಿಂದ ದೂರಾಗಿದ್ದ ಬಾಲಕನೋರ್ವ ಬರೋಬ್ಬರಿ 20 ವರ್ಷಗಳ ಬಳಿಕ ಮರಳಿ ಗೂಡು ಸೇರಿದ್ದು, ಇದರಿಂದ ಪೋಷಕರು ಫುಲ್ ಖುಷಿಯಾಗಿದ್ದಾರೆ. ಉತ್ತರಪ್ರದೇಶದ ಗಾಜಿಪುರದ ಮಹೇಂದರ್ ಬಿಂದ್ ಎಂಬಾತನೇ 20 ವರ್ಷಗಳ ಬಳಿಕ ಮರಳಿ ಪೋಷಕರನ್ನು ಸೇರಿದ ಯುವಕ. ಈತ 20 ವರ್ಷಗಳ ಹಿಂದೆ ಪೋಷಕರೊಂದಿಗೆ ಮುಂಬೈನಲ್ಲಿರುವ ಸಂಬಂಧಿಗಳ ಮನೆಗೆ ಹೋಗುವ ವೇಳೆ ಪೋಷಕರ ಕೈ ತಪ್ಪಿ ದೂರಾಗಿದ್ದ. ಇದಾದ ನಂತರ ಮಹೇಂದರ್ ಬಿಂದ್ ಪೋಷಕರು ಆತನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದರೂ ತಪ್ಪಿಸಿಕೊಂಡ ಮಗ ಮಾತ್ರ ಮರಳಿ ಬಂದಿರಲಿಲ್ಲ. 

Add Asianetnews Kannada as a Preferred SourcegooglePreferred

ಇತ್ತ ಬಾಲ್ಯದಲ್ಲೇ ಪೋಷಕರಿಂದ ತಪ್ಪಿಸಿಕೊಂಡ ಬಾಲಕ ಪಡಬಾರದ ಕಷ್ಟಗಳನ್ನು ಪಟ್ಟಿದ್ದು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವ ಸಾಗಿಸುತ್ತಿದ್ದ. ಈ ಮಧ್ಯೆ ಉತ್ತರಪ್ರದೇಶದ ಶಿವಕುಮಾರ್ ಎಂಬುವವರು ತೆಲಂಗಾಣದ (Telangana) ಮಂಚರ್ಯಾಲದ ಬೆಳಂಪಲ್ಲಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅವರು ಇತ್ತೀಚೆಗೆ ಮುಂಬೈಗೆ ಹೋಗಿದ್ದರು. ಈ ವೇಳೆ ಶಿವಕುಮಾರ್‌ಗೆ ಮಹೇಂದರ್ ಬಿಂದ್ ಸಿಕ್ಕಿದ್ದು, ಶಿವಕುಮಾರ್ ಜೊತೆ ಮಹೇಂದರ್ ತನ್ನೆಲ್ಲಾ ಕಷ್ಟಗಳನ್ನು ಹೇಳಿಕೊಂಡಿದ್ದಾನೆ.

ಕೊರೋನಾದಿಂದಾಗಿ 22 ವರ್ಷ ಬಳಿಕ ಒಂದಾದ ತಾಯಿ, ಮಗ!

ತಾನು ಉತ್ತರಪ್ರದೇಶದ (Uttar Pradesh) ಹಾಜಿಪುರ ನಿವಾಸಿಯಾಗಿದ್ದು, ಬಾಲ್ಯದಲ್ಲಿ ಮುಂಬೈಗೆ ಸಂಬಂಧಿಕರ ಭೇಟಿಗೆ ಬಂದಿದ್ದ ವೇಳೆ ಪೋಷಕರಿಂದ ತಪ್ಪಿ ಹೋಗಿದ್ದಾಗಿ ಶಿವಕುಮಾರ್‌ಗೆ ಮಹೇಂದರ್ ಬಿಂದ್ ಹೇಳಿದ್ದಾನೆ. ಇದಾದ ನಂತರ ಶಿವಕುಮಾರ್, ಮಹೇಂದರ್ ಬಿಂದ್‌ನನ್ನು (Mahendar bind) ತಾನು ಕೆಲಸ ಮಾಡುವ ತೆಲಂಗಾಣದ ಬೆಳ್ಳಂಪಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ನಂತರ ಉತ್ತರಪ್ರದೇಶ ಪೊಲೀಸರಿಗೆ ಮಹೇಂದರ್ ಬಿಂದ್ ಬಗ್ಗೆ ಶಿವಕುಮಾರ್ ಮಾಹಿತಿ ನೀಡಿದ್ದಾನೆ. ಈ ವೇಳೆ ಹಳೇ ನಾಪತ್ತೆ ಫೈಲುಗಳನ್ನೆಲ್ಲಾ ತೆಗೆದ ಪೊಲೀಸರು ಮಹೇಂದರ್ ಬಿಂದ್‌ನ ಪೋಷಕರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಯುವಕನ ಪೋಷಕರಾದ ಸಂತ್ರಾ ಬಿಂದ್ ಹಾಗೂ ಮುನ್ನಾ ಬಿಂದ್‌ನನ್ನು ಪೊಲೀಸರು ಕರೆಸಿದ್ದು, ತಮ್ಮ ಪುತ್ರ ತೆಲಂಗಾಣದಲ್ಲಿರುವ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ.

ಕೂಡ್ಲಿಗಿ: ಹೆತ್ತವರ ಮಡಿಲಿಗೆ ಬಾಲಕಿ ಸೇರಿಸಿದ ವಾಟ್ಸಾಪ್‌

ಕೂಡಲೇ ಪೋಷಕರು ಮಗನನ್ನು ನೋಡುವ ತವಕದಲ್ಲಿ ತೆಲಂಗಾಣಕ್ಕೆ ರೈಲೇರಿದ್ದು, ಗುರುವಾರ ಬೆಳಗ್ಗೆ 20 ವರ್ಷಗಳಿಂದ ತಮ್ಮಿಂದ ದೂರಾಗಿದ್ದ ಮಗನನ್ನು ಭೇಟಿ ಮಾಡಿ ಬಿಗಿದಪ್ಪಿಕೊಂಡಿದ್ದಾರೆ. ಅಲ್ಲದೇ ಈತನ ಪತ್ತೆಗೆ ಕಾರಣವಾದ ಶಿವಕುಮಾರ್ ಯಾದವ್‌ಗೆ ಧನ್ಯವಾದ ಸಲ್ಲಿಸಿ ಮಗನನ್ನು ಕರೆದುಕೊಂಡು ತಮ್ಮೂರಿನ ರೈಲೇರಿದ್ದಾರೆ.