Asianet Suvarna News Asianet Suvarna News

ನೆಹರೂ ಮೆಮೋರಿಯಲ್ ಮ್ಯೂಸಿಯಂ ಮರುನಾಮಕರಣ; ಇದು ಸಣ್ಣತನ: ಕಾಂಗ್ರೆಸ್‌ ಟೀಕೆ

ನವದೆಹಲಿಯ ತೀನ್‌ ಮೂರ್ತಿ ಭವನದಲ್ಲಿರುವ ದಿ ನೆಹರೂ ಮೆಮೋರಿಯಲ್‌ ಮ್ಯೂಸಿಯಂ ಆಂಡ್‌ ಲೈಬ್ರೆರಿ ಸೊಸೈಟಿಯನ್ನು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಸ್ಮಾರಕ ಮ್ಯೂಸಿಯಂ ಆಂಡ್‌ ಲೈಬ್ರೆರಿ ಸೊಸೈಟಿ ಎಂದು ಮರು ನಾಮಕರಣ ಮಾಡಿದೆ. 
 

Teen Murti Bhavan Nehru Memorial Museum renamed Congress says pettiness san
Author
First Published Jun 16, 2023, 6:16 PM IST | Last Updated Jun 16, 2023, 6:16 PM IST

ನವದೆಹಲಿ (ಜೂ.16): ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ, ನವದೆಹಲಿಯ ತೀನ್‌ ಮೂರ್ತಿ ಭವನದಲ್ಲಿರುವ ನೆಹರೂ ಮೆಮೋರಿಯಲ್‌ ಮ್ಯೂಸಿಯಂ ಆಂಡ್‌ ಲೈಬ್ರೆರಿಯನ್ನು ಮರುನಾಮಕರಣ ಮಾಡುವ ತೀರ್ಮಾನ ಮಾಡಿದೆ. ಇದನ್ನು ಇನ್ನು ಮುಂದೆ ಪ್ರಧಾನಮಂತ್ರಿ ಮೆಮೋರಿಯಲ್‌ ಮ್ಯೂಸಿಯಂ ಆಂಡ್‌ ಲೈಬ್ರೆರಿ ಸೊಸೈಟಿ ಎಂದು ಕರೆಯಲಾಗುತ್ತದೆ. ಇದರ ಬೆನ್ನಲ್ಲಿಯೇ ಕಾಂಗ್ರೆಸ್‌ ಪಕ್ಷ ಟೀಕಾಪ್ರಹಾರ ಮಾಡಿದ್ದು,ಕೇಂದ್ರ ಸರ್ಕಾರದ ಸಣ್ಣತನ ಇದರಲ್ಲಿ ಕಾಣುತ್ತಿದೆ ಎಂದು ಟೀಕಿಸಿದೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಧಿಕೃತ ನಿವಾಸವಾಗಿದ್ದ ತೀನ್ ಮೂರ್ತಿ ಭವನದ ಆವರಣದಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಉದ್ಘಾಟಿಸಿದ ಸುಮಾರು ಒಂದು ವರ್ಷದ ನಂತರ ಸೊಸೈಟಿಯನ್ನು ಮರುನಾಮಕರಣ ಮಾಡುವ ನಿರ್ಧಾರ ಮಾಡಲಾಗಿದೆ. ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯ (ಎನ್‌ಎಂಎಂಎಲ್) ವಿಶೇಷ ಸಭೆಯಲ್ಲಿ ಅದರ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಶುಕ್ರವಾರ ತಿಳಿಸಿದೆ.

ಸೊಸೈಟಿಯ ಉಪಾಧ್ಯಕ್ಷರಾಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು ಎಂದು ತಿಳಿಸಲಾಗಿದೆ. ಸಭೆಯ ಬಳಿಕ ತಮ್ಮ ಭಾಷಣದಲ್ಲಿ ಮಾತನಾಡಿದ ರಾಜನಾಥ್‌ ಸಿಂಗ್‌ "ಹೆಸರಿನ ಬದಲಾವಣೆಯ ಪ್ರಸ್ತಾಪವನ್ನು ಎಲ್ಲರೂ ಸ್ವಾಗತಿಸಿದರು", ಏಕೆಂದರೆ ಸಂಸ್ಥೆಯು ಜವಾಹರಲಾಲ್ ನೆಹರು ಅವರಿಂದ ನರೇಂದ್ರ ಮೋದಿಯವರವರೆಗಿನ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಗಳನ್ನು ಮತ್ತು ಅವರು ಎದುರಿಸುತ್ತಿರುವ ವಿವಿಧ ಸವಾಲುಗಳಿಗೆ ಅವರ ಪ್ರತಿಕ್ರಿಯೆಗಳನ್ನು ತನ್ನ ಹೊಸ ರೂಪದಲ್ಲಿ ಪ್ರದರ್ಶಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಸ್ಥಾನ ಎನ್ನುವುದು ಪ್ರಮುಖ ಸ್ಥಾನ. ದೇಶದ ವಿಭಿನ್ನ ಪ್ರಧಾನಮಂತ್ರಿಗಳನ್ನು ಕಾಮನಬಿಲ್ಲಿನ ರೀತಿ ವಿವರಿಸಬಹುದು. ಅದೇ ಕಾರಣಕ್ಕಾಗಿ ಈ ಸಂಸ್ಥೆಗೆ ಹೊಸ ಹೆಸರನ್ನು ನೀಡಲಾಗಿದೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಹಿಂದಿನ ಎಲ್ಲಾ ಪ್ರಧಾನಮಂತ್ರಿಗಳಿಗೂ ಇಲ್ಲಿ ಗೌರವ ನೀಡಲಾಗಿದೆ' ಎನ್‌ಎಂಎಂಎಲ್ ತಿಳಿಸಿದೆ.

ಇನ್ನು ಕಾಂಗ್ರೆಸ್‌ ಪಕ್ಷ ಇದನ್ನು ಸೇಡಿನ ಕ್ರಮ ಎಂದು ಹೇಳಿದ್ದು, ಕಟ್ಟಡಗಳಿಗೆ ಇರುವ ಹೆಸರನ್ನು ಬದಲಾವಣೆ ಮಾಡಿದ ತಕ್ಷಣ ನೆಹರು ಹಾಕಿಕೊಟ್ಟ ಪರಂಪರೆ ಅಳಿಸಿ ಹೋಗೋದಿಲ್ಲ ಎಂದಿದೆ. ಕಾಂಗ್ರೆಸ್‌ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಇದನ್ನು ಟೀಕಿಸಿ ಟ್ವೀಟ್‌ ಮಾಡಿದ್ದು, ' ಸಣ್ಣತನ ಮತ್ತು ಸೇಡಿಗೆ ಯಾವುದಾದರೂ ಹೆಸರಿದ್ದರೆ ಅದು ಮೋದಿ ಮಾತ್ರ. ಕಳೆದ 59 ವರ್ಷಗಳವರೆಗೂ ಎನ್‌ಎಂಎಂಎಲ್‌ ಜಾಗತಿಕ ಹೆಗ್ಗುರುತಾಗಿ ಮಾತ್ರವಲ್ಲದೇ, ಪುಸ್ತಕಗಳ ಹಾಗೂ ಇತಿಹಾಸಗಳಿಗೆ ನೆಲೆಯಾಗಿತ್ತು. ಆದರೆ, ಇದು ಇಂದಿನಿಂದ ಪ್ರಧಾನಮಂತ್ರಿ ಮ್ಯೂಸಿಯಂ ಮತ್ತು ಸೊಸೈಟಿ ಎಂದು ಕರೆದುಕೊಳ್ಳಲಿದೆ' ಎಂದು ಬರೆದಿದ್ದಾರೆ.

ಸೆಂಗೋಲ್‌ ಅಲ್ಲ ಅದು 'ಬೋಗಸ್‌', ಕಾಂಗ್ರೆಸ್‌ ಮಾತಿಗೆ ಕಿಡಿಕಿಡಿಯಾದ ಬಿಜೆಪಿ!

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಮಾತನಾಡಿದ್ದು,  ತೀನ್ ಮೂರ್ತಿ ಭವನವು ಭಾರತದ ಭವಿಷ್ಯವನ್ನು ರೂಪಿಸಿದ ಐತಿಹಾಸಿಕ ಸ್ಮಾರಕವಾಗಿದೆ. "ಸ್ವಾತಂತ್ರ್ಯೋತ್ತರ ಭಾರತದ ವೈಭವದ ಶಿಲ್ಪಿ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು. ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಬದಲಾಯಿಸುವ ಮೂಲಕ ಅವರ ಪರಂಪರೆಯನ್ನು ಅಳಿಸಿಹಾಕುವುದು ಸಣ್ಣತನದ ಕೆಲಸ. ಇದು ಪ್ರಸ್ತುತ ಆಡಳಿತದ ಘನತೆಯನ್ನು ಇನ್ನಷ್ಟು ಕುಗ್ಗಿಸುತ್ತದೆ" ಎಂದು ವೇಣುಗೋಪಾಲ್ ಟ್ವೀಟ್‌ ಮಾಡಿದ್ದಾರೆ.

ಸೆಂಗೋಲ್‌ ಪತ್ತೆಗೆ 2 ವರ್ಷ ಶೋಧ ನಡೆಸಿದ್ದ ಪ್ರಧಾನಿ ಕಚೇರಿ: ಬೆಳಕಿಗೆ ಬಂದಿದ್ದು ಹೀಗೆ ನೋಡಿ..

"ಭಾರತದ ಪ್ರತಿಯೊಂದು ಯಶಸ್ಸನ್ನು ನೆಹರೂ ಜಿಯವರ ದೃಷ್ಟಿಕೋನದ ತಳಹದಿಯ ಮೇಲೆ ಸಾಧಿಸಲಾಗುತ್ತದೆ. ಅದು ಭಾರತಕ್ಕೆ ತಿಳಿದಿದೆ ಮತ್ತು ಮ್ಯೂಸಿಯಂನಿಂದ ಅವರ ಹೆಸರನ್ನು ತೆಗೆದುಹಾಕುವುದರಿಂದ ಪ್ರತಿ ಭಾರತೀಯರ ಹೃದಯದಲ್ಲಿ ನೆಹರೂ ಜಿ ಅವರಗೌರವಾನ್ವಿತ ಸ್ಥಾನಮಾನವನ್ನು ಬದಲಾಯಿಸುವುದಿಲ್ಲ" ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios