Pegasus Case Report: ಪೆಗಾಸಸ್‌ ಸುಪ್ರೀಂ ಕೋರ್ಟ್‌ ರಚಿಸಿದ್ದ ಟೆಕ್ನಿಕಲ್‌ ತಂಡದ ವರದಿ ಸಲ್ಲಿಕೆಯಾಗಿದ್ದು ಕೇಂದ್ರ ಸರ್ಕಾರ ವಿಚಾರಣೆ ವೇಳೆ ಸಹಕಾರ ನೀಡಿಲ್ಲ ಎಂದು ಆರೋಪಿಸಿದೆ. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ನಾಲ್ಕು ವಾರಗಳಿಗೆ ಮುಂದೂಡಿದೆ.

ನವದೆಹಲಿ: ಪೆಗಾಸಸ್‌ ಸ್ಪೈವೇರ್‌ ಪ್ರಕರಣದಲ್ಲಿ 29 ಮೊಬೈಲ್‌ ಫೋನ್‌ಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ಅದರಲ್ಲಿ ಐದು ಫೋನ್‌ಗಳಲ್ಲಿ ಮಾಲ್ವೇರ್‌ ಪತ್ತೆಯಾಗಿದೆ. ಆದರೆ ಪೆಗಾಸಸ್‌ ಮೂಲಕ ಫೋನ್‌ಗಳ ಕದ್ದಾಲಿಕೆ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಆದರೆ ಪ್ರಕರಣದ ವಿಚಾರಣೆಗೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೊಂಚವೂ ಸಹಕಾರ ನೀಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಗುರುವಾರ ಮಾತನಾಡಿದ ಕೋರ್ಟ್‌ ಕೇಂದ್ರ ಸರ್ಕಾರ ವಿಚಾರಣೆಗೆ ಬೇಕಾದ ಸಹಕಾರವನ್ನು ನೀಡಿಲ್ಲ ಎಂದು ಆರೋಪಿಸಿದೆ. 

ಸುಪ್ರೀಂ ಕೋರ್ಟ್‌ ಟೆಕ್ನಿಕಲ್‌ ತಂಡವೊಂದನ್ನು ರಚನೆ ಮಾಡಿ ಪೆಗಾಸಸ್ ಪ್ರಕರಣದ ತನಿಖೆಯನ್ನು ಸಮಿತಿಗೆ ನೀಡಿತ್ತು. ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ಫೋನ್‌ಗಳನ್ನು ಕದ್ದಾಲಿಕೆ ಮಾಡಿರುವ ಆರೋಪದ ಮೇಲೆ ಈ ಸಮಿತಿಯನ್ನು ರಚನೆ ಮಾಡಲಾಗಿತ್ತು. 

ನಿವೃತ್ತ ನ್ಯಾಯಮೂರ್ತಿಗಳಾದ ಆರ್‌ ವಿ ರವೀಂದ್ರನ್‌, ಸೂರ್ಯ ಕಾಂತ್‌ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿ ಒಟ್ಟೂ ಮೂರು ಭಾಗಗಳಲ್ಲಿ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಎರಡು ಭಾಗ ಟೆಕ್ನಿಕಲ್ ತಂಡ ನೀಡಿದ್ದರೆ ಇನ್ನೊಂದು ಭಾಗವನ್ನು ಮೇಲ್ವಿಚಾರಣಾ ಸಮಿತಿ ನೀಡಿದೆ. ಅದರಲ್ಲಿ ಹೇಳಿರುವ ಪ್ರಕಾರ, "ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಕಟ್ಟುನಿಟ್ಟಿನ ಖಾಸಗಿತನ ರಕ್ಷಣೆಗಾಗಿ ಸೈಬರ್‌ ಸೆಕ್ಯುರಿಟಿ ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತರಬೇಕು," ಎಂದು ನಿರ್ದೇಶಿಸಿದೆ. 

ವರದಿ ಕೋರ್ಟ್‌ಗೆ ಸಲ್ಲಿಕೆಯಾದ ಬಳಿಕ ಮಾತನಾಡಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು, ಮೇಲ್ವಿಚಾರಣಾ ಸಮಿತಿ ನೀಡಿರುವ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್‌ ವೆಬ್‌ಸೈಟಿನಲ್ಲಿ ಹಾಕಲಾಗುವುದು ಎಂದಿದ್ದಾರೆ. ಈ ಮೂಲಕ ಸಾರ್ವಜನಿಕರಿಗೂ ಈ ನಿರ್ದೇಶನಗಳು ಸಿಗಲಿವೆ ಎಂದು ಅವರು ಹೇಳಿದ್ದಾರೆ. ಮೊದಲೆರಡು ವರದಿಗಳನ್ನೂ ಬಹಿರಂಗಪಡಿಸುವಂತೆ ಮನವಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಪರಿಶೀಲಿಸುವುದಾಗಿ ರಮಣ ಅವರು ತಿಳಿಸಿದರು. "ಸಂಪೂರ್ಣ ವರದಿಯನ್ನು ಓದುವ ಮುನ್ನ ಯಾವುದೇ ರೀತಿಯ ಹೇಳಿಕೆಗಳನ್ನು ನಾವು ಕೊಡುವುದಿಲ್ಲ," ಎಂದು ರಮಣ ಅವರ ತಿಳಿಸಿದರು. ನಾಲ್ಕು ವಾರಗಳ ಕಾಲಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ. 

ಕಳೆದ ವರ್ಷ ದೇಶದಲ್ಲಿ ಭಾರಿ ವಿವಾದ ಹುಟ್ಟುಹಾಕಿದ್ದ ಪೆಗಾಸಸ್‌ (Pegasus ) ಗೂಢಚರ್ಯೆಗೆ ಸಂಬಂಧಿಸಿದಂತೆ ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್‌’ (New York Times) ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಭಾರಿ ಸಂಚಲನ ಹುಟ್ಟುಹಾಕಿತ್ತು. ಅದರಲ್ಲಿ ಇಸ್ರೇಲ್‌ನಿಂದ (Israel )ಭಾರತ ಸರ್ಕಾರ (central government) ಪೆಗಾಸಸ್‌ ಸ್ಪೈವೇರ್‌ ಖರೀದಿಸಿದ್ದು ನಿಜ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಪೆಗಾಸಸ್‌ ಕೇಸ್‌: ವಿಸ್ತೃತ ಪ್ರಮಾಣ ಪತ್ರ ಸಲ್ಲಿಕೆಗೆ ಕೇಂದ್ರ ಸರ್ಕಾರ ನಕಾರ!

2017ರಲ್ಲಿ ಭಾರತ ಸರ್ಕಾರ ಮತ್ತು ಇಸ್ರೇಲ್‌ ನಡುವೆ ಸುಮಾರು 15000 ಕೋಟಿ ರು. ಮೊತ್ತದ ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ವಿಚಕ್ಷಣ ಉಪಕರಣಗಳ ಖರೀದಿ ವ್ಯವಹಾರ ನಡೆದಿತ್ತು. ಅದರಲ್ಲಿ ಎನ್‌ಎಸ್‌ಒ (NSO) ಕಂಪನಿಯಿಂದ ಪೆಗಾಸಸ್‌ ಗೂಢಚರ್ಯೆ ಉಪಕರಣ ಖರೀದಿ ಮತ್ತು ಕ್ಷಿಪಣಿ ವ್ಯವಸ್ಥೆಯ ಖರೀದಿ ಪ್ರಮುಖವಾಗಿದ್ದವು ಎಂದು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ‘ದಿ ಬ್ಯಾಟಲ್‌ ಫಾರ್‌ ದಿ ವಲ್ಡ್‌$್ರ್ಸ ಮೋಸ್ಟ್‌ ಪವರ್‌ಫುಲ್‌ ಸೈಬರ್‌ವೆಪನ್‌’ (ಜಗತ್ತಿನ ಅತ್ಯಂತ ಶಕ್ತಿಶಾಲಿ ಸೈಬರ್‌ ಅಸ್ತ್ರಕ್ಕಾಗಿನ ಸಮರ) ಎಂಬ ವರದಿಯಲ್ಲಿ ತಿಳಿಸಲಾಗಿತ್ತು.
ಕಳೆದ ವರ್ಷ ಕೂಡ ಸಂಸತ್‌ ಕಲಾಪಕ್ಕೆ ಮುನ್ನಾ ದಿನಗಳಲ್ಲಿ ಇಂಥದ್ದೊಂದು ವರದಿ ಪ್ರಕಟವಾಗಿ ಇಡೀ ಅಧಿವೇಶನವನ್ನೇ ಬಲಿ ಪಡೆದಿತ್ತು. ಈಗಲೂ ಬಜೆಟ್‌ ಅಧಿವೇಶನಕ್ಕೆ ಮುನ್ನವೇ ಮತ್ತೆ ಅಂಥದ್ದೇ ವರದಿ ಪ್ರಕಟವಾಗಿರುವುದು ಸಾಕಷ್ಟುಕುತೂಹಲ ಮೂಡಿಸಿತ್ತು.

ಈ ನಡುವೆ ಅಮೆರಿಕದ ವರದಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ‘ಕೇಂದ್ರ ಸರ್ಕಾರ ಸಂಸತ್ತಿನ ದಿಕ್ಕು ತಪ್ಪಿಸಿದೆ, ಸುಪ್ರೀಂಕೋರ್ಟ್‌ ಅನ್ನು ವಂಚಿಸಿದೆ, ಪ್ರಜಾಪ್ರಭುತ್ವವನ್ನು ಹೈಜಾಕ್‌ ಮಾಡಿದೆ ಮತ್ತು ದೇಶದ್ರೋಹದ ಕೆಲಸದಲ್ಲಿ ತೊಡಗಿಸಿಕೊಂಡಿದೆ’ ಎಂದು ಕಿಡಿಕಾರಿದ್ದವು. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ವಿ.ಕೆ.ಸಿಂಗ್‌ (Gen V K Singh), ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆಯನ್ನು ಸುಪಾರಿ ಮೀಡಿಯಾ ಎಂದು ಟೀಕಿಸಿದ್ದವು.

ಇದನ್ನೂ ಓದಿ: ಪೆಗಾಸಸ್‌: ಸ್ವತಂತ್ರ ತನಿಖೆ ಕೋರಿದ್ದ ಅರ್ಜಿ ಬಗ್ಗೆ ಇಂದು ಸುಪ್ರೀಂ ತೀರ್ಪು!

ಇಸ್ರೇಲ್‌ನ ಪೆಗಾಸಸ್‌ ಸಾಫ್ಟ್‌ವೇರ್‌ ಬಳಸಿ ಭಾರತ ಸರ್ಕಾರ ಕೆಲ ಮಂತ್ರಿಗಳು, ಪ್ರಮುಖ ರಾಜಕಾರಣಿಗಳು, ಗಣ್ಯರು ಹಾಗೂ ಪತ್ರಕರ್ತರ ಫೋನ್‌ಗಳನ್ನು ಕದ್ದಾಲಿಸಿದೆ ಎಂದು ಕಳೆದ ವರ್ಷ ಆರೋಪ ಕೇಳಿಬಂದಿತ್ತು. ಇದು ದೊಡ್ಡ ವಿವಾದವಾದಾಗ ಕೇಂದ್ರ ಗೃಹ ಸಚಿವಾಲಯವು ತಾನು ಇಂಥ ಯಾವುದೇ ಸ್ಪೈವೇರ್‌ ಖರೀದಿಸಿಲ್ಲ ಎಂದಿತ್ತು. ನಂತರ ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಈ ವೇಳೆ ತನ್ನ ಯಾವುದೇ ತನಿಖಾ ಸಂಸ್ಥೆಗಳು ಸ್ಪೈವೇರ್‌ ಬಳಸಿದ್ದವೇ? ಇಲ್ಲವೇ ಎಂಬುದನ್ನು ತಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅಂಥ ಯಾವುದೇ ಹೇಳಿಕೆ ದೇಶದ ಭದ್ರತೆಗೆ ಧಕ್ಕೆ ತರಬಲ್ಲದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಬಳಿಕ ಇಡೀ ಪ್ರಕರಣದ ಮೇಲೆ ಬೆಳಕು ಚೆಲ್ಲಲು ಸುಪ್ರೀಂಕೋರ್ಟ್‌ ಸಮಿತಿಯೊಂದನ್ನು ರಚಿಸಿತ್ತು.

ಇದನ್ನೂ ಓದಿ: Report on Pegasus :ಮತ್ತೆ ಭುಗಿಲೆದ್ದ ಪೆಗಾಸಸ್‌ ವಿವಾದ!

ಮೋದಿ-ನೆತನ್ಯಾಹು ಬೆಚ್ಚಗಿನ ಭೇಟಿ: 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಸ್ರೇಲ್‌ಗೆ ಭೇಟಿ ನೀಡಿದ್ದರು. ಅವರು ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ. ಆಗ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (benjamin netanyahu) ಜೊತೆ ಸಮುದ್ರದ ದಂಡೆಯಲ್ಲಿ ಬರಿಗಾಲಿನಲ್ಲಿ ನಡೆದಿದ್ದರು. ಅಂತಹ ಭಾವನಾತ್ಮಕ ಭೇಟಿಗೆ ಕಾರಣಗಳಿದ್ದವು. ಅವರ ನಡುವೆ ಭರ್ಜರಿ 15000 ಕೋಟಿ ರು. ಮೊತ್ತದ ರಕ್ಷಣಾ ವ್ಯವಹಾರ ಅಂತಿಮಗೊಂಡಿತ್ತು. ಅದರಲ್ಲಿ ಪೆಗಾಸಸ್‌ ಖರೀದಿ ಕೂಡ ಸೇರಿತ್ತು. ಕೆಲ ತಿಂಗಳ ನಂತರ ನೆತನ್ಯಾಹು ಭಾರತಕ್ಕೆ ಅಪರೂಪದ ಭೇಟಿ ನೀಡಿದ್ದರು. ನಂತರ 2019ರಲ್ಲಿ ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್‌ ವಿರುದ್ಧ ಇಸ್ರೇಲ್‌ನ ಪರ ಭಾರತ ಮತ ಹಾಕಿತ್ತು ಎಂದು ನ್ಯೂಯಾರ್ಕ್ ಟೈಮ್ಸ್‌ನ ವರದಿ ಹೇಳಿದ್ದು, ಈ ಎಲ್ಲ ಘಟನೆಗಳಿಗೂ ಪರಸ್ಪರ ಸಂಬಂಧವಿದೆ ಎಂಬಂತೆ ಬಿಂಬಿಸಿದ್ದವು.