100 ಕೋಟಿ ಹಫ್ತಾ ಆರೋಪ ಗಂಭೀರ: ಸುಪ್ರೀಂ|  ಹೈಕೋರ್ಟ್‌ ಮೊರೆ ಹೋಗಲು ಪರಮ್‌ಬೀರ್‌ಗೆ ಸೂಚನೆ

ನವದೆಹಲಿ(ಮಾ.25): ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರು ಮಾಸಿಕ 100 ಕೋಟಿ ಹಫ್ತಾ ವಸೂಲಿ ಮಾಡಲು ತಮಗೆ ಸೂಚಿಸಿದ್ದರು ಎಂಬ ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ಬೀರ್‌ಸಿಂಗ್‌ ಅವರ ಆರೋಪ ಗಂಭೀರವಾದುದು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

Add Asianetnews Kannada as a Preferred SourcegooglePreferred

ಮಹಾ ಸರ್ಕಾರಕ್ಕೀಗ ಪೊಲೀಸ್‌ ವರ್ಗ ದಂಧೆ ಕಂಟಕ!

ತಮ್ಮ ಈ ಆರೋಪದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಪರಮ್‌ಬೀರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾ. ಸಂಜಯ್‌ಕಿಶನ್‌ ಕೌಲ್‌ ಅವರನ್ನೊಳಗೊಂಡ ಪೀಠ ಇಂಥದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಆದರೆ ಈ ಕುರಿತ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸುವಂತೆ ಹೇಳಿ, ಅರ್ಜಿಯನ್ನು ಹಿಂದಕ್ಕೆ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಅದರ ಬೆನ್ನಲ್ಲೇ ಪರಮ್‌ಬೀರ್‌, ಸಚಿವ ದೇಶಮುಖ್‌ ವಿರುದ್ಧ ಸಿಬಿಐ ತನಿಖೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ದೇಶಮುಖ್‌ ರಾಜೀನಾಮೆ ಮಾತೇ ಇಲ್ಲ: ಪವಾರ್‌

ರಾಜ್ಯಪಾಲರಿಗೆ ಬಿಜೆಪಿ ದೂರು:

ರಾಜ್ಯದಲ್ಲಿ ಸಚಿವರಿಂದಲೇ ಸುಲಿಗೆ ನಡೆಯುತ್ತಿದೆ. ಪೊಲೀಸ್‌ ವರ್ಗಾವಣೆ ದಂಧೆ ಬೆಳಕಿಗೆ ಬಂದಿದೆ. ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಈ ಎಲ್ಲಾ ಘಟನೆಗಳು ರಾಜ್ಯದಲ್ಲಿ ಕಾನೂನು ಪರಿಸ್ಥಿತಿ ಸರಿ ಇಲ್ಲ ಎಂಬುದರ ದ್ಯೋತಕ. ಹೀಗಾಗಿ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ರಾಜ್ಯದ ಮುಖ್ಯಕಾರ್ಯದರ್ಶಿಗಳಿಂದ ವರದಿ ತರಿಸಿಕೊಳ್ಳಬೇಕು ಎಂದು ಮಹಾರಾಷ್ಟ್ರ ಬಿಜೆಪಿ ನಾಯಕರ ನಿಯೋಗವೊಂದು ಬುಧವಾರ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಇದಕ್ಕೆ ತಿರುಗೇಟು ನೀಡಿರುವ ಎನ್‌ಸಿಪಿ ನಾಯಕ ನವಾಬ್‌ ಮಲಿಕ್‌, ರಾಜ್ಯದ ಮಹಾ ಅಘಾಡಿ ಸರ್ಕಾರಕ್ಕೆ 175 ಶಾಸಕರ ಬೆಂಬಲವಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಸಿಎಂ ಠಾಕ್ರೆ ಸೂಕ್ತ ಸಮಯದಲ್ಲಿ ಮೌನ ಮುರಿಯಲಿದ್ದಾರೆ ಎಂದು ಹೇಳಿದ್ದಾರೆ.

86 ಪೊಲೀಸರ ವರ್ಗ:

ಈ ನಡುವೆ ಮುಂಬೈ ಪೊಲೀಸ್‌ ಆಯುಕ್ತರಾಗಿ ಹೇಮಂತ್‌ ನಗ್ರಾಳೆ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ 86 ಪೊಲೀಸ್‌ ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ.