yoga guru Baba Ramdev Patanjali advertisements ಯೋಗ ಗುರು ಬಾಬಾ ರಾಮ್‌ದೇವ್‌ ನೇತೃತ್ವದ ಪತಂಜಲಿ ಕಂಪನಿಯ ಮಿಸ್‌ಲೀಡಿಂಗ್‌ ಹಾಗೂ ಸುಳ್ಳು ಜಾಹೀರಾತಿನ ವಿಚಾರದಲ್ಲಿ ಆಕ್ರೋಶಗೊಂಡ ಸುಪ್ರೀಂ ಕೋರ್ಟ್‌, ಪತಂಜಲಿ ಜಾಹೀರಾತಿಗೆ ಸಂಪೂರ್ಣ ನಿಷೇಧ ಹೇರಿದೆ.

ನವದೆಹಲಿ (ಫೆ.27): ಯೋಗ ಗುರು ಬಾಬಾ ರಾಮ್‌ದೇವ್‌ ಮಾಲೀಕತ್ವದ ಪತಂಜಲಿ ಆರ್ಯುವೇದ ಕಂಪನಿಯ ದಾರಿತಪ್ಪಿಸುವ ಹಾಗೂ ಸುಳ್ಳು ಜಾಹೀರಾತಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಆಕ್ರೋಶವಾಗಿ ಮಾತನಾಡಿದೆ. ಪತಂಜಲಿ ಕಂಪನಿಯ ಜಾಹೀರಾತುಗಳಿಂದ ಇಡೀ ದೇಶವನ್ನೇ ಅವರು ದಾರಿ ತಪ್ಪಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದು ನಿಜಕ್ಕೂ ದುರಾದೃಷ್ಟದ ಸಂಗತಿ. ಕೇಂದ್ರ ಸರ್ಕಾರ ಈ ಕುರಿತಾಗಿ ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಪೀಠ ಹೇಳಿದೆ. ತಪ್ಪುದಾರಿಗೆಳೆಯುವ ಮಾಹಿತಿ ನೀಡುವ ಔಷಧಗಳ ಎಲ್ಲಾ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಜಾಹೀರಾತುಗಳನ್ನು ತಕ್ಷಣವೇ ಜಾರಿಗೆ ಬರುವಂತೆ ನಿಲ್ಲಿಸುವಂತೆ ಪೀಠವು ಕಂಪನಿಗೆ ನಿರ್ದೇಶನ ನೀಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಪತಂಜಲಿ ಆಯುರ್ವೇದ ತನ್ನ ಔಷಧಿಗಳ ಬಗ್ಗೆ ಜಾಹೀರಾತುಗಳಲ್ಲಿ "ಸುಳ್ಳು" ಮತ್ತು "ದಾರಿ ತಪ್ಪಿಸುವ" ಮಾಹಿತಿಗಳನ್ನು ನೀಡುವುದರ ವಿರುದ್ಧ ಎಚ್ಚರಿಕೆ ನೀಡಿತ್ತು.

ಈ ಗುರು ಸ್ವಾಮಿ ರಾಮ್‌ದೇವ್‌ ಬಾಬಾಗೆ ಏನಾಗಿದೆ? ಈ ದೇಶದಲ್ಲಿ ಯೋಗವನ್ನು ಪ್ರಖ್ಯಾತಿ ಮಾಡಿದಕ್ಕೆ ನಾವು ಅವರನ್ನು ಖಂಡಿತವಾಗಿಯೂ ಗೌರವಿಸುತ್ತೇವೆ. ನಾವೆಲ್ಲರೂ ಇದಕ್ಕಾಗಿ ಅವರನ್ನು ಮೆಚ್ಚಿದ್ದೇವೆ. ಹಾಗಂತ ಅವರು ನಮ್ಮ ಇನ್ನೊಂದು ವ್ಯವಸ್ಥೆಯನ್ನು ಟೀಕೆ ಮಾಡಬಾರದು. ಡಾಕ್ಟರ್‌ಗಳೆಲ್ಲಾ ಕೊಲೆಗಡುಕರೋ ಏನೋ ಎಂಬಂತೆ ದೂಷಿಸುವ ರೀತಿಯ ಜಾಹೀರಾತುಗಳನ್ನು ನೀವು ನೋಡುತ್ತಿದ್ದೀರಿ. ಬೃಹತ್ ಜಾಹೀರಾತುಗಳನ್ನು (ನೀಡಲಾಗಿದೆ)" ಎಂದು ಅಂದಿನ ಸಿಜೆಐ ಎನ್‌ವಿ ರಮಣ ನೇತೃತ್ವದ ಪೀಠ ಹೇಳಿತ್ತು. ತಪ್ಪು ದಾರಿಗೆಳೆಯುವ ವೈದ್ಯಕೀಯ ಜಾಹೀರಾತುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರದ ಪರ ಹಾಜರಾದ ವಕೀಲರಿಗೆ ಸುಪ್ರೀಂ ಕೋರ್ಟ್ ಕೇಳಿತ್ತು.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಲೋಪತಿ ಮತ್ತು ವೈದ್ಯರನ್ನು ಕಳಪೆ ಎನ್ನುವ ರೀತಿಯಲ್ಲಿ ಬಿಂಬಿಸುವ ಹಲವಾರು ಜಾಹೀರಾತುಗಳನ್ನು ಉಲ್ಲೇಖ ಮಾಡಲಾಗಿದೆ. ಆಯುರ್ವೇದ ಔಷಧಿಗಳ ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳು ಸಾರ್ವಜನಿಕರನ್ನು ದಾರಿತಪ್ಪಿಸಲು ಇಂಥ ತಪ್ಪು ದಾರಿಗೆಳೆಯುವ ಮಾಹಿತಿ ನೀಡಿವೆ ಎಂದು ಹೇಳಿದೆ. . ಆಧುನಿಕ ಔಷಧಗಳನ್ನು ಸೇವಿಸಿದರೂ ವೈದ್ಯಾಧಿಕಾರಿಗಳೇ ಸಾಯುತ್ತಿದ್ದಾರೆ ಎಂದು ಈ ಜಾಹೀರಾತುಗಳು ಹೇಳುತ್ತಿವೆ ಎಂದು ಐಎಂಎ ವಕೀಲರು ತಿಳಿಸಿದ್ದಾರೆ.

ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ 1954 ರಲ್ಲಿ ನಿರ್ದಿಷ್ಟಪಡಿಸಿದ ರೋಗಗಳು/ಅಸ್ವಸ್ಥತೆಗಳಿಗೆ ಸಂಬಂಧಿಸಿದ ತನ್ನ ಉತ್ಪನ್ನಗಳನ್ನು ಜಾಹೀರಾತು ನೀಡದಂತೆ ನ್ಯಾಯಾಲಯವು ಪತಂಜಲಿ ಆಯುರ್ವೇದವನ್ನುಈ ಕ್ಷಣದಿಂದಲೇ ನಿರ್ಬಂಧಿಸಿದೆ. ಅದರೊಂದಿಗೆ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟ ಮಾಡಿದ್ದಕ್ಕಾಗಿ ಪತಂಜಲಿ ಆಯುರ್ವೇದ ಮತ್ತು ಕಂಪನಿಯ ಎಂಡಿ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ಅನ್ನೂ ಕಳಿಸುವಂತೆ ತಿಳಿಸಿದೆ.

Add Asianetnews Kannada as a Preferred SourcegooglePreferred

830 ಕೋಟಿಗೆ ರೋಲ್ಟಾ ಇಂಡಿಯಾ ಕಂಪನಿ ಖರೀದಿಗೆ ನಿರ್ಧಾರ ಮಾಡಿದ ಬಾಬಾ ರಾಮ್‌ದೇವ್‌!

ಇಂಥ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನೀಡದೇ ಇರುವಂತೆ ಕಾಯ್ದೆಗಳೇ ಇರುವಾಗಿ ನೀವು ಎರಡು ವರ್ಷ ಕಣ್ಮುಚ್ಚಿಕೊಂಡು ಕುಳಿತಿದ್ದೀರಿ. ಸರ್ಕಾರ ಕಣ್ಣು ಮುಚ್ಚಿದೆ ಎನ್ನುವುದು ಇದರಿಂದಲೇ ಗೊತ್ತಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಪೀಠದ ನ್ಯಾಯಮೂರ್ತಿ ಅಶಾನುದ್ದೀನ್‌ ಅಮಾನುಲ್ಲಾ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆಎಂ ನಟರಾಜ್‌ ಅವರಿಗೆ ಹೇಳಿದರು. ಈ ವೇಳೆ ಮಾತನಾಡಿದ ಕೇಂದ್ರದ ಕಾನೂನು ಅಧಿಕಾರಿ, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಸ್ವೀಕರಿಸಲಾಗುವುದಿಲ್ಲ. ಆದರೆ, ನೀವು ಹೇಳಿದ ಕಾಯಿದೆಯಡಿಯಲ್ಲಿ ಕ್ರಮ ಕೈಗೊಳ್ಳುವುದು ಸಂಬಂಧಪಟ್ಟ ರಾಜ್ಯಗಳಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ. ಯೂನಿಯನ್ ತೆಗೆದುಕೊಂಡ ಕ್ರಮಗಳನ್ನು ವಿವರಿಸಿ ಅಫಿಡವಿಟ್ ಸಲ್ಲಿಸಲು ತಿಳಿಸಲಾಗಿದೆ. ಇನ್ನು ಪತಂಜಲಿ ಪರ ವಕೀಲರಿಗೆ ತಿಳಿಸಿದ ಕೋರ್ಟ್‌, 'ಈ ನ್ಯಾಯಾಲಯದ ಆದೇಶದ ನಂತರವೂ ಇಂಥ ಜಾಹೀರಾತು ನೀಡಲು ನಿಮಗೆ ಧೈರ್ಯ ಹೇಗೆ ಬಂತು. ಕೋರ್ಟ್‌ನ ಆದೇಶವಿದ್ದರೂ ತಪ್ಪು ಜಾಹೀರಾತು ನೀಡಿದ್ದೀರಿ. ಶಾಶ್ವತ ಪರಿಹಾರ ಎನ್ನುತ್ತೀರಿ. ಶಾಶ್ವತ ಪರಿಹಾರ ಎಂದರೆ ಏನು? ಇದು ಚಿಕಿತ್ಸೆಯೇ? ಇಂದು ನಾವು ಕಠಿಣ ಆದೇಶವನ್ನು ನೀಡಲಿದ್ದೇನೆ. ನೀವು ನ್ಯಾಯಾಲಯವನ್ನೇ ಕೆಣಕುವ ಕೆಲಸ ಮಾಡುತ್ತಿದ್ದೀರಿ ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ.

ಅಲೋಪತಿ ಬಗ್ಗೆ ಅಪಪ್ರಚಾರ ಮಾಡಿಲ್ಲ, ಕೋರ್ಟಿಗೆ ಪತಂಜಲಿ ಉತ್ಪನ್ನ ಬಗ್ಗೆ ಸ್ಪಷ್ಟನೆ ನೀಡುವೆ: ರಾಮದೇವ್‌