Asianet Suvarna News Asianet Suvarna News

ನೂಪುರ್ ಶರ್ಮಾರ ಬಂಧಿಸುವಂತಿಲ್ಲ : ಸುಪ್ರೀಂ ಕೋರ್ಟ್‌

ಪ್ರವಾದಿ ಮೊಹಮದ್ ಪೈಗಂಬರ್‌ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮ ವಿರುದ್ಧ ದೇಶಾದ್ಯಂತ ಎಫ್ಐಆರ್‌ ದಾಖಲು ಮಾಡಲಾಗಿತ್ತು. ಆದರೆ, ಬಂಧನಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ನೂಪುರ್‌ ಶರ್ಮಾಗೆ ನಿರಾಳ ನೀಡುವಂತ ಆದೇಶನ್ನು ಸುಪ್ರೀಂ ಕೋರ್ಟ್‌ ನೀಡಿದೆ. 
 

Supreme Court grants interim protection from arrest to Nupur Sharma san
Author
Bengaluru, First Published Jul 19, 2022, 3:29 PM IST

ನವದೆಹಲಿ (ಜುಲೈ 19): ಪ್ರವಾದಿ ಮೊಹಮದ್ ಪೈಗಂಬರ್‌ ಕುರಿತಾಗಿ ನೂಪುರ್‌ ಶರ್ಮಾ ನೀಡಿದ್ದ ಹೇಳಿಕೆ ದೇಶಾದ್ಯಂತ ವಿವಾದದ ಕಿಡಿ ಎಬ್ಬಿಸಿತ್ತು. ಇದರ ಬೆನ್ನಲ್ಲಿಯೇ ಆಕೆಯ ವಿರುದ್ಧ ದೇಶದ ವಿವಿಧ ಪ್ರದೇಶಗಳಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ಬಂಧನಕ್ಕೆ ತಡೆ ಕೋರಿ ಇತ್ತೀಚೆಗೆ ನೂಪುರ್‌ ಶರ್ಮಾ, ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು. ಇದರ ವಿಚಾರಣೆಯನ್ನು ಮಂಗಳವಾರ ನಡೆಸಿದ ಸುಪ್ರೀಂ ಕೋರ್ಟ್‌, ನೂಪುರ್‌ ಶರ್ಮಾ ಅವರ ಬಂಧನ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ. ಆಗಸ್ಟ್‌ 10ಕ್ಕೆ ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೂ ಆಕೆಯ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳುವಂತಿಲ್ಲ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ಎಫ್‌ಐಆರ್‌ಗಳನ್ನು ರದ್ದು ಮಾಡುವ ಅಥವಾ ಪರ್ಯಾಯವಾಗಿ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಶರ್ಮಾ ಅವರ ಮನವಿಯ ಮೇಲೆ ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರು ಪರ್ಯಾಯ ಪರಿಹಾರವನ್ನು ಹೇಗೆ ಪಡೆಯುತ್ತಾರೆ ಎಂಬುದನ್ನು ನ್ಯಾಯಾಲಯವು ಪರಿಶೀಲನೆ ಮಾಡುತ್ತಿದೆ. ಅಂತಹ ವಿಧಾನವನ್ನು ಅನ್ವೇಷಿಸಲು ಪ್ರತಿವಾದಿಗಳಿಗೆ ನೋಟಿಸ್ ನೀಡಿದ್ದೇವೆ. ಈ ವಿಷಯವನ್ನು 2022ರ ಆಗಸ್ಟ್ 10 ರಂದು ಪಟ್ಟಿ ಮಾಡಲಾಗಿದೆ.

 ಬಲವಂತದ ಕ್ರಮ ತೆಗೆದುಕೊಳ್ಳಬೇಡಿ: ಮುಖ್ಯ ರಿಟ್‌ನ ಪ್ರತಿಗಳನ್ನು ಸಹ ಪ್ರತಿವಾದಿಗಳಿಗೆ ನೋಟಿಸ್‌ನೊಂದಿಗೆ ರವಾನಿಸಲಾಗುತ್ತದೆ. ಈ ನಡುವೆ ಮಧ್ಯಂತರ ಕ್ರಮವಾಗಿ ನೂಪುರ್ ಶರ್ಮಾ ವಿರುದ್ಧ ಯಾವುದೇ ಬಲವಂತವನ್ನು ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸಲಾಗಿದೆ ಎಂದು ಪೀಠವು ಆದೇಶಿಸಿತು. ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ನೂಪುರ್‌ ಶರ್ಮಾ ಅವರು ಹೈಕೋರ್ಟ್‌ಗೆ ತೆರಳಲು ಅವಕಾಶ ನೀಡುವ ಆಯ್ಕೆಯನ್ನು ಅನ್ವೇಷಿಸುವುದಾಗಿ ನ್ಯಾಯಾಲಯ (Supreme Court) ಹೇಳಿದೆ. "ಅರ್ಜಿದಾರರು ತಮ್ಮ ವಿರುದ್ಧ ದಾಖಲಾದ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಈ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಅವರ ರದ್ದುಗೊಳಿಸುವ ಪ್ರಾರ್ಥನೆಯನ್ನುನವಿಯನ್ನು  226 ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವ ಮೂಲಕ ಹೈಕೋರ್ಟಿನಿಂದ ನೀಡಬಹುದಾದ್ದರಿಂದ, ಈ ನ್ಯಾಯಾಲಯವು 2022ರ ಜುಲೈ 1 ರಂದು ಪರ್ಯಾಯ ಪರಿಹಾರವನ್ನು ಪಡೆಯಲು ಅರ್ಜಿದಾರರನ್ನು ಕೆಳ ನ್ಯಾಯಾಲಯಕ್ಕೆ ಹೋಗುವಂತೆ ಸೂಚಿಸಿತ್ತು' ಎಂದು ವಿಚಾರಣೆಯ ವೇಳೆ ಹೇಳಿದೆ.

ನಾಲ್ಕು ರಾಜ್ಯಗಳಲ್ಲಿ 9 ಎಫ್‌ಐಆರ್‌: ನೂಪುರ್ ಶರ್ಮ ವಿರುದ್ಧ ನಾಲ್ಕು ರಾಜ್ಯಗಳಲ್ಲಿ ಒಟ್ಟು 9 ಎಫ್‌ಐಆರ್‌ (FIR) ದಾಖಲಾಗಿದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲೇ 5 ಎಫ್‌ಐಆರ್‌ ದಾಖಲಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ 2, ತೆಲಂಗಾಣ ಹಾಗೂ ದೆಹಲಿಯಲ್ಲಿ ತಲಾ ಒಂದು ಎಫ್‌ಐಆರ್‌ ದಾಖಲಾಗಿದೆ. ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ರಾಜ್ಯಗಳನ್ನು ಆಕೆಯ ಮನವಿಗೆ ಉತ್ತರಿಸುವಂತೆ ಕೇಳಲಾಗಿದೆ.

ಮೇ 28 ರಂದು  ಮುಂಬೈನ ಪೈಧೋನಿ ಪೊಲೀಸ್ ಠಾಣೆ, ಮೇ 30 ರಂದು ಹೈದರಾಬಾದ್‌ನ ಸೈಬರ್‌ ಸೆಲ್‌ ಪೊಲೀಸ್‌ ಠಾಣೆ, ಮಹಾರಾಷ್ಟ್ರದ ಥಾಣೆಯ ಮುಂಬ್ರಾ ಪೊಲೀಸ್‌ ಠಾಣೆ, ಥಾಣೆಯ ಭಿವಂಡಿ ಪೊಲೀಸ್‌ ಠಾಣೆ, ಮೇ 31 ರಂದು ಪುಣೆಯ ಕೊಂಧ್ವಾ ಪೊಲೀಸ್ ಠಾಣೆ, ಜೂನ್‌ 4 ರಂದು ಪಶ್ಚಿಮ ಬಂಗಾಳದ ನರ್ಕೆಲದಂಗ ಪೊಲೀಸ್ ಠಾಣೆ, ಜೂಲ್‌ 6ಕ್ಕೆ ನವದೆಹಲಿಯ ದೆಹಲಿ ಪೊಲೀಸ್ IFSO, ಜೂನ್‌ 13 ರಂದು ಮಹಾರಾಷ್ಟ್ರದ ಪ್ರಭಾನಿಯ ನಾನಾಪೇಠ ಪೊಲೀಸ್ ಠಾಣೆ ಹಾಗೂ ಪಶ್ಚಿಮ ಬಂಗಾಳದ ಕೋಲ್ಕತದ ಅಮ್ಹೆರ್ಸ್ಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ನೂಪುರ್ ಶರ್ಮಾ (Nupur Sharma) ಅವರ ವಕೀಲರು ಇಂದು ಸುಪ್ರೀಂ ಕೋರ್ಟ್‌ಗೆ ತಮ್ಮ ಜೀವಕ್ಕೆ ಹೆಚ್ಚಿನ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಆದ್ದರಿಂದ ಬೇರೆ ಯಾವುದೇ ಕಾನೂನು ಆಶ್ರಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. 

Follow Us:
Download App:
  • android
  • ios