ವಿವಾದ ಹುಟ್ಟು ಹಾಕಿದ ಸಂಭಾಜಿ ಭಿಡೆ ಕಾಲಿಗೆರಗಿದ ಸುಧಾಮೂರ್ತಿ ನಡೆ
ಬಲಪಂಥೀಯ ನಾಯಕ ಸಂಭಾಜಿ ರಾವ್ ಭಿಡೆ ಕಾಲಿಗೆರಗಿ ಸುಧಾಮೂರ್ತಿ ನಮಸ್ಕರಿಸುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಸುಧಾಮೂರ್ತಿ ಹಣೆಗೆ ಬಿಂದಿ ಇಟ್ಟಿದ್ದರಿಂದ, ಭಿಡೆ ಅವರನ್ನು ಮಾತನಾಡಿಸಿದರೇ ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಇದಕ್ಕೇನು ಕಾರಣ ಗೊತ್ತಾ?
ನವೆಂಬರ್ 7, ಸೋಮವಾರ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಬಲಪಂಥೀಯ ನಾಯಕ ಮತ್ತು ಶಿವ ಪ್ರತಿಷ್ಠಾನ ಸಂಸ್ಥಾಪಕ ಸಂಭಾಜಿ ರಾವ್ ಭಿಡೆ ಅವರನ್ನು ಲೇಖಕಿ ಮತ್ತು ಲೋಕೋಪಕಾರಿ ಸುಧಾ ಮೂರ್ತಿ ಭೇಟಿಯಾಗಿ ಆಶೀರ್ವಾದ ಪಡೆದರು. ಬಿಢೆ ಅವರ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿಯವರ ನಡೆ ಎಲ್ಲೆಡೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಕಾರಣ ಈ ಸಂಭಾಜಿ ರಾವಿ ಭಿಡೆಯವರದು ಬಹಳ ವಿವಾದಿತ ವ್ಯಕ್ತಿತ್ವ. 2018ರಲ್ಲಿ ಸಂಭವಿಸಿದ ಭೀಮಾ ಕೋರೆಗಾಂವ್ ಘರ್ಷಣೆಯಲ್ಲಿ, ಕಲ್ಲು ತೂರಾಟದ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲ್ಪಟ್ಟ ವ್ಯಕ್ತಿಗಳಲ್ಲಿ ಭಿಡೆ ಕೂಡಾ ಒಬ್ಬರಾಗಿದ್ದಾರೆ. ಕಳೆದ ವಾರ, ನವೆಂಬರ್ 2ರಂದು, ಇದೇ ಭಿಡೆ, ಮಹಿಳಾ ದೂರದರ್ಶನ ಸುದ್ದಿ ವರದಿಗಾರ್ತಿಯೊಬ್ಬರು ಹಣೆಗೆ ಬಿಂದಿ ಇಟ್ಟಿಲ್ಲ ಎಂಬ ಕಾರಣಕ್ಕೆ ಅವರೊಂದಿಗೆ ಮಾತನಾಡಲು ನಿರಾಕರಿಸಿ ವಿವಾದ ಮೈ ಮೇಲೇಳೆದುಕೊಂಡಿದ್ದರು.
ಭಿಡೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಹೊರ ಬರುವಾಗ ನಡೆದ ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಶಿಂಧೆ ಅವರೊಂದಿಗಿನ ಭೇಟಿಯ ಬಗ್ಗೆ ಪ್ರಶ್ನೆ ಕೇಳಿದ ವರದಿಗಾರ್ತಿಗೆ, ಮೊದಲು ಬಿಂದಿ ಇಡುವುದನ್ನು ಕಲಿಯಿರಿ, ಇಲ್ಲದಿದ್ದರೆ ತಾನು ಮಾತನಾಡುವುದಿಲ್ಲ. ಮಹಿಳೆ ಭಾರತ ಮಾತೆಯನ್ನು ಹೋಲುತ್ತಾಳೆ ಮತ್ತು ಅವಳು ಬಿಂದಿ ಇಟ್ಟುಕೊಳ್ಳದೆ ವಿಧವೆಯ ಹಾಗೆ ಕಾಣಿಸಿಕೊಳ್ಳಬಾರದು ಎಂದು ಭಿಡೆ ಹೇಳಿದ್ದು ಬಹು ಚರ್ಚಿತ ವಿಷಯವಾಗಿತ್ತು. ಈ ವಿಷಯವಾಗಿ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ಭಿಡೆಗೆ ನೋಟಿಸ್ ನೀಡಿತ್ತು.
ಜಾರಕಿಹೊಳಿ ಹೇಳಿಕೆ ವಿನಾಶ ಕಾಲೇ ವಿಪರೀತ ಬುದ್ದಿ; ಬಿಜೆಪಿ ಉಸ್ತುವಾರಿ ಅರುಣಸಿಂಗ್ ಖಂಡನೆ
ಇದೀಗ ಸುಧಾ ಮೂರ್ತಿ ಇದೇ ಭಿಡೆಯನ್ನು ಭೇಟಿಯಾಗಿದ್ದಲ್ಲದೆ ಅವರ ಕಾಲಿಗೆರಗಿರುವುದು ಬಹುತೇಕ ಮಹಿಳಾ ಹೋರಾಟಗಾರ್ತಿಯರು ಹಾಗೂ ಎಡ ಪಂಥದವರಲ್ಲಿ ಅಸಮಾಧಾನ ಮೂಡಿಸಿದೆ.
ಸುಧಾಮೂರ್ತಿ ಹಣೆ ತುಂಬಾ ತಿಲಕವಿಡುವ ಕಾರಣಕ್ಕೆ ಭಿಡೆ ಮಾತಾಡಿಸಿರಬೇಕು ಎಂಬ ವ್ಯಂಗ್ಯ ಎಲ್ಲೆಡೆ ಕೇಳಿ ಬರುತ್ತಿದೆ. ಸುಧಾಮೂರ್ತಿ ನಡೆಗೆ ಖಂಡನೆ ವ್ಯಕ್ತವಾಗುತ್ತಿದೆ.
ಸಭೆಯ ಕುರಿತು ಪ್ರತಿಕ್ರಿಯಿಸಿದ ಆಪ್ ನಾಯಕಿ ಪ್ರೀತಿ ಶರ್ಮಾ ಮೆನನ್, 'ಅವರು ಬಿಂದಿ ಧರಿಸಿದ್ದರು. ಸುಧಾ ಮೂರ್ತಿಯಂಥವರು ಭಿಡೆಯಂತಹ ಧರ್ಮಾಂಧರನ್ನು ಭೇಟಿಯಾದಾಗ, ಅವರು ತಮ್ಮ ನಿಜವಾದ ಬಣ್ಣವನ್ನು ಬಹಿರಂಗಪಡಿಸುತ್ತಾರೆ,' ಎಂದಿದ್ದಾರೆ.
ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು, 'ಒಂದು ಕಾಲದಲ್ಲಿ, ಅವರು ಟೆಲ್ಕೊದ ‘ಓನ್ಲಿ ಮೆನ್’ ನೀತಿಯನ್ನು ಪ್ರಶ್ನಿಸಿದ್ದರು ಮತ್ತು ಪುರುಷರ ಪ್ರಾಬಲ್ಯದ ವಿರುದ್ಧ ನಿಂತಿದ್ದರು. ಈಗ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸಿದ ವ್ಯಕ್ತಿಯಿಂದ ಆಶೀರ್ವಾದ ತೆಗೆದುಕೊಳ್ಳುತ್ತಿದ್ದಾರೆ. ವಾಟ್ ಎ ಫಾಲ್ ಮಿಸೆಸ್ ಸುಧಾ ಮೂರ್ತಿ'ಲ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೊಂದೆಡೆ ಬಲಪಂಥೀಯರು ಸುಧಾಮೂರ್ತಿಯವರ ಸಂಸ್ಕಾರದ ಪರ ಬ್ಯಾಟಿಂಗ್ ಬೀಸುತ್ತಿದ್ದಾರೆ.
Crime News: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡ್ತಿದ್ಳು ಅಂತ ಪತ್ನಿಯನ್ನೇ ಕೊಂದ ಪತಿ..!
ಭಿಡೆಯ ಇತರೆ ವಿವಾದಗಳು
2018ರಲ್ಲಿ, ಭಿಡೆ ಅವರು ತಮ್ಮ ತೋಟದಿಂದ ಮಾವಿನ ಹಣ್ಣುಗಳನ್ನು ತಿಂದ ನಂತರ ದಂಪತಿಗೆ ಗಂಡುಮಕ್ಕಳ ಆಶೀರ್ವಾದವಾಗಿದೆ ಎಂಬ ಹೇಳಿಕೆ ನೀಡಿ ಟೀಕೆಗಳನ್ನು ಎದುರಿಸಿದ್ದರು. 2008ರಲ್ಲಿ, ಅವರು ಅಶುತೋಷ್ ಗೋವಾರಿಕರ್ ಅವರ ಐತಿಹಾಸಿಕ ಚಲನಚಿತ್ರ ಜೋಧಾ ಅಕ್ಬರ್ ವಿರುದ್ಧದ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದರು. ಈ ಸಂಬಂಧ ಚಿತ್ರಮಂದಿರಗಳಿಗೆ ನುಗ್ಗಿ ಚಲನಚಿತ್ರದ ಪ್ರದರ್ಶನವನ್ನು ನಿಲ್ಲಿಸಿದ್ದಕ್ಕಾಗಿ ಅರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಒಂದು ವರ್ಷದ ನಂತರ, ಅವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಶಿವಾಜಿ ಮಹಾರಾಜರಿಂದ ಆದಿಲ್ ಷಾ ಅವರ ಸೇನಾ ಕಮಾಂಡರ್ ಅಫ್ಜಲ್ ಖಾನ್ ಅವರ ಹತ್ಯೆಯನ್ನು ಚಿತ್ರಿಸಿದ ಕಲಾವಿದನ ಅನಿಸಿಕೆಗಳ ಚಿತ್ರಣದ ಬಗ್ಗೆ ಗದ್ದಲ ಎಬ್ಬಿಸಿದ್ದರು. ಏನೇ ಆದರೂ , ಭಿಡೆ ಸಾಂಗ್ಲಿ, ಕೊಲ್ಲಾಪುರ ಮತ್ತು ಸತಾರಾದಲ್ಲಿ, ವಿಶೇಷವಾಗಿ ಯುವಜನರಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ.