ಸಂಪತ್ತು ನಿರ್ವಹಣಾ ಸಂಸ್ಥೆ 'ಡೆಸರ್ವ್' ಸಹ-ಸಂಸ್ಥಾಪಕ ಸಂದೀಪ್ ಜೆತ್ವಾನಿ, ಮೆಟ್ರೋ ನಗರಗಳಲ್ಲಿ ಆರಾಮದಾಯಕ ನಿವೃತ್ತಿ ಜೀವನಕ್ಕೆ 60ನೇ ವಯಸ್ಸಿನಲ್ಲಿ 40 ಕೋಟಿ ರೂ. ನಿಧಿ ಬೇಕು ಎಂದು ಹೇಳಿದ್ದಾರೆ.

ನವದೆಹಲಿ (ಏ.29): ನಿವೃತ್ತಿಯ ನಂತರದ ಜೀವನಕ್ಕಾಗಿ ಎಷ್ಟು ಹಣ ಉಳಿತಾಯ ಮಾಡಬೇಕು? ಈ ಪ್ರಶ್ನೆಗೆ ವ್ಯಕ್ತಿಯಿಂದ ವ್ಯಕ್ತಿಗೆ ಉತ್ತರ ಬೇರೆಯಾಗಿರಬಹುದು. ಆದರೆ, ಭಾರತದ ಮೆಟ್ರೋ ನಗರಗಳಲ್ಲಿ ಆರಾಮದಾಯಕ ಜೀವನ ನಡೆಸಲು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಹಣ ಬೇಕಾಗಬಹುದು. ಸಂಪತ್ತು ನಿರ್ವಹಣಾ ಸಂಸ್ಥೆ 'ಡೆಸರ್ವ್' (Dezerv) ಸಹ-ಸಂಸ್ಥಾಪಕ ಸಂದೀಪ್ ಜೆತ್ವಾನಿ ಇತ್ತೀಚೆಗೆ ನೀಡಿರುವ ಹೇಳಿಕೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Add Asianetnews Kannada as a Preferred SourcegooglePreferred

ಪತ್ರಕರ್ತೆ ಸೋನಿಯಾ ಶೆಣೈ ಅವರ 'ದಿ ಮನಿ ಮೈಂಡ್‌ಸೆಟ್' ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಐಐಎಂ ಬೆಂಗಳೂರು ಪದವೀಧರ ಸಂದೀಪ್ ಜೆತ್ವಾನಿ, "60ನೇ ವಯಸ್ಸಿನಲ್ಲಿ ನಿವೃತ್ತಿಯಾಗುವ ವ್ಯಕ್ತಿಗೆ 40 ಕೋಟಿ ರೂಪಾಯಿಗಳ ನಿಧಿ (Corpus) ಬೇಕಾಗುತ್ತದೆ," ಎಂದು ಹೇಳಿದ್ದಾರೆ. ಅವರ ಈ ಲೆಕ್ಕಾಚಾರದ ಹಿಂದಿನ ಪ್ರಮುಖ ಅಂಶಗಳು ಇಲ್ಲಿವೆ:

ಪ್ರಸ್ತುತ 1 ರಿಂದ 2 ಲಕ್ಷ ರೂಪಾಯಿ ಮಾಸಿಕ ವೆಚ್ಚ ಹೊಂದಿರುವ ಮಧ್ಯಮ ಗಾತ್ರದ ಕುಟುಂಬಕ್ಕೆ ಈ ಮೊತ್ತ ಸಮಂಜಸವಾಗಿದೆ. ವಿಶೇಷವೆಂದರೆ, ಈ 40 ಕೋಟಿ ರೂಪಾಯಿ ನೀವು ವಾಸಿಸುವ ಮನೆ ಮತ್ತು ಓಡಿಸುವ ಕಾರಿನ ಮೌಲ್ಯವನ್ನು ಹೊರತುಪಡಿಸಿ ಇರಬೇಕಾದ ಮೊತ್ತವಾಗಿದೆ. ಹಣದುಬ್ಬರ (Inflation), ಆರೋಗ್ಯ ವೆಚ್ಚಗಳು, ದೀರ್ಘಾಯುಷ್ಯ ಮತ್ತು ಅಸಲು ಹಣಕ್ಕೆ ಕೈ ಹಚ್ಚದೆಯೇ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದನ್ನು ಈ ಲೆಕ್ಕಾಚಾರ ಒಳಗೊಂಡಿದೆ.

ಸಂದರ್ಶನದಲ್ಲಿ ನಡೆದ ಚರ್ಚೆ

ಸಂದರ್ಶಕಿ ಸೋನಿಯಾ ಶೆಣೈ ಅವರು, "ಹೊಸದಾಗಿ ವೃತ್ತಿ ಆರಂಭಿಸುವವರಿಗೆ ಅಥವಾ ಸಾಮಾನ್ಯ ಜನರಿಗೆ 40 ಕೋಟಿ ಎಂಬುದು ಬಹಳ ದೊಡ್ಡ ಮೊತ್ತ. ಕೇವಲ 1 ಕೋಟಿ ರೂಪಾಯಿ ಮಾಡುವುದೇ ಕಷ್ಟ," ಎಂದಾಗ, ಜೆತ್ವಾನಿ ಅವರು "ಹೌದು, ಇದು ನಿಜಕ್ಕೂ ಕಷ್ಟದ ಕೆಲಸ" ಎಂದು ಒಪ್ಪಿಕೊಂಡರು. ಸೋನಿಯಾ ಶೆಣೈ ಅವರು ತಮ್ಮ ಪೋಸ್ಟ್‌ನಲ್ಲಿ, "ನನ್ನ ಪ್ರಕಾರ 1-2 ಲಕ್ಷ ರೂಪಾಯಿ ವೆಚ್ಚವಿರುವವರಿಗೆ 60ನೇ ವಯಸ್ಸಿಗೆ 10 ಕೋಟಿ ರೂಪಾಯಿ ಸಾಕು ಅಂದುಕೊಂಡಿದ್ದೆ. ಆದರೆ ಹಣದುಬ್ಬರ ಮತ್ತು ಅನಿರೀಕ್ಷಿತ ಆರೋಗ್ಯ ವೆಚ್ಚಗಳು ಈ ಮೊತ್ತವನ್ನು ನಾವು ಊಹಿಸದಷ್ಟು ಹೆಚ್ಚಿಸಬಹುದು ಎಂದು ಸಂದೀಪ್ ವಿವರಿಸಿದ್ದಾರೆ," ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. "ಭಾರತದ ಸರಾಸರಿ ಸಂಬಳಕ್ಕೆ ಹೋಲಿಸಿದರೆ 40 ಕೋಟಿ ರೂಪಾಯಿ ಎಂಬುದು ಅಸಾಧ್ಯವಾದ ಮಾತು. ಇದು ಕೇವಲ ಶೇ. 0.01 ರಷ್ಟು ಶ್ರೀಮಂತರಿಗೆ ಮಾತ್ರ ಸಾಧ್ಯ," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಇದು ತಲೆ ತಿರುಗಿಸುವಂತಹ ಅಂಕಿಅಂಶ. ಆದರೆ ನಿಮ್ಮ ವಿಡಿಯೋಗಳಿಂದ ಕಲಿಯುತ್ತಿದ್ದರೆ ಇದು ಅಸಾಧ್ಯವೇನಲ್ಲ ಎನಿಸುತ್ತದೆ," ಎಂದು ಮತ್ತೊಬ್ಬರು ಬರೆದಿದ್ದಾರೆ. "ಇದು ಕೇವಲ ಕಾಗದದ ಮೇಲಿನ ಲೆಕ್ಕಾಚಾರವೇ ಹೊರತು ಪ್ರಾಯೋಗಿಕವಾಗಿ ಎಲ್ಲರಿಗೂ ಸಿಗುವಂತದ್ದಲ್ಲ," ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.