ಶ್ರಾವಣ ಮಾಸದಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಆರಂಭಗೊಳ್ಳುತ್ತದೆ. ಹಬ್ಬಗಳು ಆರಂಭಗೊಳ್ಳುವುದು ಇದೇ ಮಾಸದಲ್ಲಿ. ಹೀಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ತೆರಳುವುದು ಸಾಮಾನ್ಯ. ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಕಾರಣ ಖತು ಶ್ಯಾಮಜಿ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ.

ರಾಜಸ್ಥಾನ(ಆ.08): ವಿಶೇಷ ಪೂಜೆ ಹಾಗೂ ಪಾರ್ಥನೆಗಾಗಿ ಖತು ಶ್ಯಾಮಜಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಆಘಾತ ಎದುರಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಕಾರಣ ರಾಜಸ್ಥಾನದ ಸಿಕಾರ್‌ನಲ್ಲಿರುವ ಖತು ಶ್ಯಾಮಜಿ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ. ಇದರಿಂದ ಮೂವರು ಭಕ್ತರು ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ದೇವಸ್ಥಾನದಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂದು(ಆ.08) ಬೆಳಗ್ಗೆ ಈ ಘಟನೆ ನಡೆದಿದೆ. ಕಳೆದೆರಡು ವರ್ಷ ಕೋವಿಡ್ ಕಾರಣದಿಂದ ಶ್ರಾವಣ ಮಾಸದಲ್ಲಿ ಖತು ಶ್ಯಾಮಜಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರಾಕರಿಸಲಾಗಿತ್ತು. ಈ ವರ್ಷ ಯಾವುದೇ ನಿರ್ಬಂಧ ಇಲ್ಲದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇದು ಐತಿಹಾಸಿಕ ದೇವಸ್ಥಾನವಾಗಿದ್ದು, ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಇಂದು ಬೆಳ್ಳಂಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಕಾರಣ ನೂಕು ನುಗ್ಗಲು ಉಂಟಾಗಿದೆ. ಇದು ಕಾಲ್ತುಳಿತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಸಿಕಾರ್ ಜಿಲ್ಲೆಯಲ್ಲಿರುವ ಪ್ರಮುಖ ದೇವಸ್ಥಾನ(Khatu Shyam temple ) ಇದಾಗಿದೆ. ಅಪಾರ ನಂಬಿಕೆ, ಶ್ರದ್ಧೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಭಕ್ತಿಯಿಂದ ನಮಿಸಿದರೆ ಕಷ್ಟಗಳು ಪರಿಹಾರವಾಗುತ್ತದೆ ಅನ್ನೋ ನಂಬಿಕೆ ಇದೆ. ಶಿಲ್ಪಕಲೆ, ಕುಸುರಿ ಕೆತ್ತನೆಗಳಿಗೆ ಈ ದೇವಸ್ಥಾನ ಅತ್ಯಂತ ಹೆಸರುವಾಸಿಯಾಗಿದೆ. ಈ ದೇವಸ್ಥಾನವನ್ನು ವಾಸ್ತುಶಿಲ್ಪದ ಅದ್ಬುತ ಎಂದು ಕರೆಯುತ್ತಾರೆ. ಈ ದೇವಸ್ಥಾನ ಸೌಂದರ್ಯ ಹಾಗೂ ವಾಸ್ತು ಶಿಲ್ಪ ವೀಕ್ಷಿಸಲು ದೇಶ ವಿದೇಶಗಳಿಂದ ಹಲವರು ಆಗಮಿಸುತ್ತಾರೆ. ಇಂದು ಬೆಳಗ್ಗೆ ಸಿಕಾರ್(Sikar Rajasthan) ಹಾಗೂ ಪಕ್ಕದ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. 

Vaishno Devi Stampede: ಮಾತಿನ ಚಕಮಕಿ, ನೋಡ ನೋಡುತ್ತಿದ್ದಂತೆ 12 ಸಾವು!

ಕಾಲ್ತುಳಿತಕ್ಕೆ ಮೃತಪಟ್ಟ ಪೈಕಿ ಮೂವರು ಮಹಿಳೆಯರಾಗಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ರಾಜಧಾನಿ ಜೈಪುರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

2022ರ ಮೇ ತಿಂಗಳಲ್ಲಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ ಹಲವರು ಆಸ್ಪತ್ರೆ ದಾಖಲಾಗಿದ್ದರು. ಇನ್ನು ಎಪ್ರಿಲ್ ತಿಂಗಳಲ್ಲಿ ಚತ್ತೀಸಘಡದ ಸುರಾಜಪುರ ಜಿಲ್ಲೆಯ ದೇವಿ ಮಂದಿರದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದ. ಎಪ್ರಿಲ್ ತಿಂಗಳ ಆರಂಭದಲ್ಲಿ ತಮಿಳುನಾಡಿನ ಮಧುರೈಯ ವಾರ್ಷಿಕ ಚಿತ್ರಿ ಹಬ್ಬದ 12ನೇ ದಿನವಾದ ಶನಿವಾರ ಕಾಲ್ತುಳಿತ ಸಂಭವಿಸಿ ಇಬ್ಬರು ಮೃತಪಟ್ಟಿದ್ದರು. ಜೊತೆಗೆ 7 ಜನರು ಗಾಯಗೊಂಡಿದ್ದರು. ದೇವರ ಮೂರ್ತಿ ವೈಗೈ ನದಿ ಪ್ರವೇಶದ ದೃಶ್ಯ ವೀಕ್ಷಿಸಲು ಮುಂಜಾನೆ 4 ಗಂಟೆಯ ವೇಳೆಗೆ ಲಕ್ಷಾಂತರ ಭಕ್ತರು ನದಿ ದಂಡೆಯಲ್ಲಿ ಸೇರಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 

ದೇಗುಲ ಹುಂಡಿ ಹಣಕ್ಕೆ ಕಾಲ್ತುಳಿತ: 7 ಭಕ್ತಾದಿಗಳ ದುರ್ಮರಣ!

ಇನ್ನು ಎಪ್ರಿಲ್ ತಿಂಗಳಲ್ಲಿ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು. ಸರ್ವದರ್ಶನ ಟಿಕೆಟ್‌ ಕೌಂಟರಿನ ಬಳಿ ನೂಕುನುಗ್ಗಲು ಉಂಟಾದ ಕಾರಣದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. 2 ದಿನಗಳಿಂದ ಉಚಿತ ದರ್ಶನದ ಟಿಕೆಟ್‌ ನೀಡಿರಲಿಲ್ಲ. ಹಾಗಾಗಿ ಹೆಚ್ಚಿನ ಭಕ್ತರು ತಿರುಮಲದಲ್ಲೇ ಉಳಿದುಕೊಂಡಿದ್ದರು. ಟಿಕೆಟ್‌ ನೀಡಲು ಆರಂಭಿಸಿದ್ದರಿಂದ ಕೌಂಟರಿನ ಬಳಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.