ಗಾಯಕ ಜುಬೀನ್ ಗರ್ಗ್ ಅವರದ್ದು ಆಕಸ್ಮಿಕ ಸಾವಲ್ಲ, ಹತ್ಯೆ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ. ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ 'ಜಾಗತಿಕ ಶಾಂತಿ ಗೌರವ' ಪ್ರದಾನ ಮಾಡಲಾಗಿದೆ. ಕೆನಡಾದಲ್ಲಿ ಖಲಿಸ್ತಾನಿಗಳು ಭಾರತದ ಧ್ವಜವನ್ನು ವಿರೂಪಗೊಳಿಸಿ ಬೆದರಿಕೆ ಒಡ್ಡಿದ್ದಾರೆ.
ಗುವಾಹಟಿ: ಸಿಂಗಾಪುರದ ಸಮುದ್ರದಲ್ಲಿ ಸೆ.9ರಂದು ಈಜುವಾಗ ನಡೆದ ಗಾಯಕ ಜುಬೀನ್ ಗರ್ಗ್ ಸಾವು, ಆಕಸ್ಮಿಕವಲ್ಲ. ಅದೊಂದು ಹತ್ಯೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮಂಗಳವಾರ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ಗರ್ಗ್ ಅವರ ಸಾವಿನ ಕುರಿತು ಹರಿದಾಡುತ್ತಿದ್ದ ವದಂತಿಗಳ ಬಗ್ಗೆ ತನಿಖೆ ನಡೆಸಿದ ವಿಶೇಷ ತನಿಖಾ ದಳ (ಎಸ್ಐಟಿ) ಪ್ರಕರಣದಲ್ಲಿ ಹತ್ಯೆಯ ಆರೋಪಗಳನ್ನು ಸೇರಿಸಿದೆ ಎಂದು ಶರ್ಮಾ ಮಾಹಿತಿ ನಿಡಿದ್ದಾರೆ. ‘ಪೊಲೀಸರೇ ಇದೊಂದು ಆಕಸ್ಮಿಕ ಸಾವಲ್ಲ, ಕೊಲೆಯಲ್ಲ ಎಂದಿದ್ದಾರೆ. ಪ್ರಕರಣದಲ್ಲಿ ಇದುವರೆಗೆ ಎಸ್ಐಟಿ 7 ಜನರನ್ನು ಬಂಧಿಸಿದೆ’ ಎಂದು ಹೇಳಿದ್ದಾರೆ.
ನೀತಾ ಅಂಬಾನಿಗೆ ‘ಜಾಗತಿಕ ಶಾಂತಿ ಗೌರವ’
ರಿಲಯನ್ಸ್ ಫೌಂಡೇಶನ್ನ ಸಂಸ್ಥಾಪಕ ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ ದಿವ್ಯಜ್ ಫೌಂಡೇಶನ್ ಕೊಡಮಾಡುವ ‘ಜಾಗತಿಕ ಶಾಂತಿ ಗೌರವ-2025’ ಅನ್ನು ಶನಿವಾರ ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ ನೀಡಿ ಗೌರವಿಸಲಾಯಿತು. 26/11ರ ದಾಳಿಗೆ 15 ವರ್ಷಗಳು ಪೂರ್ಣಗೊಂಡ ನಿಮಿತ್ತ, ಹುತಾತ್ಮ ಯೋಧರು ಮತ್ತು ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೀತಾ, ‘ಭಾರತ ಮತ್ತು ಭಾರತೀಯರು ನನ್ನ ಸ್ಪೂರ್ತಿ. ಸುಭದ್ರ, ಸುರಕ್ಷಿತ ನಾಳೆಗಾಗಿ ಬಲಿದಾನ ಮಾಡಿದ ಯೋಧರು ಮತ್ತು ಅವರ ಕುಟುಂಬದವರಿಗೆ ನಾನು ತಲೆಬಾಗಿ ನಮಿಸುತ್ತೇನೆ’ ಎಂದರು.ಬಾಲಿವುಡ್ ನಟರಾದ ಶಾರುಖ್ ಖಾನ್, ರಣವೀರ್ ಸಿಂಗ್, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಉಡುಪಿ ಭೇಟಿ ವೇಳೆ ಪ್ರಧಾನಿ ಮೋದಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಡಿಸಿ ಸೂಚನೆ
ಕೆನಡಾದಲ್ಲಿ ಭಾರತದ ಧ್ವಜ ವಿರೂಪ, ನಾಯಕರ ಕೊಲೆಗೆ ಕರೆ: ಖಲಿಸ್ತಾನಿ ಪುಂಡಾಟ
ಒಟ್ಟಾವಾ: ಕೆನಡಾದಲ್ಲಿ ಮತ್ತೆ ಪುಂಡಾಟ ಮೆರೆದಿರುವ ಖಲಿಸ್ತಾನಿಗಳು, ತ್ರಿವರ್ಣ ಧ್ವಜವನ್ನು ವಿರೂಪಗೊಳಿಸಿ, ಭಾರತಕ್ಕೆ ನೇರ ಬೆದರಿಕೆ ಒಡ್ಡಿದ್ದಾರೆ. ಜಿ-20 ಸಭೆಯಲ್ಲಿ ಭಾಗಿಯಾಗಿರುವ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ಹೊತ್ತಿನಲ್ಲೇ ಈ ಘಟನೆ ಜರುಗಿರುವುದು ಗಮನಾರ್ಹ.ಸ್ವತಂತ್ರ ಖಲಿಸ್ತಾನ ಸ್ಥಾಪನೆಗೆ ಸಂಬಂಧಿಸಿದಂತೆ, ಭಾರತದಲ್ಲಿ ನಿಷೇಧಿತ ಸಿಖ್ ಫಾರ್ ಜಸ್ಟಿಸ್ ಸಂಘಟನೆ ಆಯೋಜಿಸಿದ್ದ ಜನಾಭಿಪ್ರಾಯ ಸಂಗ್ರಹದಲ್ಲಿ ಸುಮಾರು 53,000 ಖಲಿಸ್ತಾನಿಗಳು ಭಾಗವಹಿಸಿದ್ದರು.
ಈ ವೇಳೆ ಭಾರತದ ಧ್ವಜವನ್ನು ವಿರೂಪಗೊಳಿಸಿ, ‘ಕಿಲ್ ಇಂಡಿಯಾ’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಸ್ಥಳದಲ್ಲಿ ಉಪಸ್ಥಿತರಿದ್ದ ಪೊಲೀಸರೂ ಅವರನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೇ ವೇಳೆ, ಸಂಘಟನೆಯ ಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನೂನ್ ಉಪಗ್ರಹದ ಮೂಲಕ ಸಂದೇಶ ಕಳಿಸಿದ್ದ ಸಂದೇಶವನ್ನೂ ಪ್ರದರ್ಶಿಸಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ಕುರ್ಚಿರೋಗ ಬಂದಿದೆ: ಡಿ.ವಿ.ಸದಾನಂದ ಗೌಡ ವಾಗ್ದಾಳಿ


