ಮುಸ್ಲಿಮರನ್ನು ದೇಶ ತೊರೆಯುವಂತೆ ಹೇಳುವವರು ಸ್ವತಃ ದೇಶವನ್ನು ತೊರೆಯಬೇಕು ಎಂದು ಜಾಮಿಯತ್ ಉಲಮಾ-ಇ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ ಭಾನುವಾರ ಹೇಳಿದ್ದಾರೆ
ಉತ್ತರಪ್ರದೇಶ (ಮೇ 30): ಮುಸ್ಲಿಮರನ್ನು ದೇಶ ತೊರೆಯುವಂತೆ ಹೇಳುವವರು ಸ್ವತಃ ದೇಶವನ್ನು ತೊರೆಯಬೇಕು ಎಂದು ಜಾಮಿಯತ್ ಉಲಮಾ-ಇ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ ಭಾನುವಾರ ಹೇಳಿದ್ದಾರೆ. ಸಂಘಟನೆ ಹೊರಡಿಸಿದ ಹೇಳಿಕೆಯ ಪ್ರಕಾರ, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಕೆಲವು ರಾಜ್ಯಗಳ ಯೋಜನೆಗಳಿಗೆ ಮದನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮುದಾಯದ ಜನರು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ ಅವರು, ಮುಸ್ಲಿಮರು ಧರ್ಮನಿಷ್ಠರಾಗಿರಲು ಮತ್ತು ದೃಢತೆಯನ್ನು ತೋರಿಸಲು ಕೇಳಿಕೊಂಡಿದ್ದಾರೆ.
ಮಾಜಿ ರಾಜ್ಯಸಭಾ ಸದಸ್ಯ ಮೌಲಾನಾ ಮಹಮೂದ್ ಮದನಿ ಜಮೀಯತ್ ಆಡಳಿತ ಸಮಿತಿಯ ವಾರ್ಷಿಕ ಎರಡು ದಿನಗಳ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ರಾಷ್ಟ್ರ ನಿರ್ಮಾಣದ ಬಗ್ಗೆ ಕಾಳಜಿ ವಹಿಸುವವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಅವರು ಕರೆ ನೀಡಿದ್ದಾರೆ.
"ನಾವು ಬುದ್ಧಿವಂತಿಕೆ, ಧೈರ್ಯ ಮತ್ತು ದೀರ್ಘಾವಧಿಯ ತಂತ್ರದಿಂದ ದ್ವೇಷ ಹರಡುವವರನ್ನು ಸೋಲಿಸಬೇಕು" ಎಂದು ಅವರು ಹೇಳಿದ್ದಾರೆ. "ನಾವು ಈ ದೇಶವನ್ನು ಬಿಡುವುದಿಲ್ಲ, ನಮ್ಮನ್ನು ಹೊರಗೆ ಕಳುಹಿಸಲು ಬಯಸುವವರು ಸ್ವತಃ ದೇಶ ಬಿಡಬೇಕು." ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಮಳಲಿ ಮಸೀದಿ ವಿವಾದ: ಹಿಂದೂ-ಮುಸ್ಲಿಂ ಸೌಹಾರ್ದ ಸಭೆ: ಶಾಸಕರ ಮಧ್ಯಸ್ಥಿಕೆ!
ಹೇಳಿಕೆಯ ಪ್ರಕಾರ, ಜಮಿಯತ್ ಉಲೇಮಾ-ಎ-ಹಿಂದ್ನ ಅಸ್ಸಾಂ ಘಟಕದ ಅಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರು ವಿವಿಧ ವಿಷಯಗಳ ಬಗ್ಗೆ ಸರ್ಕಾರವನ್ನು ಟೀಕಿಸಿದರು ಮತ್ತು "ಮುಸ್ಲಿಮರ ಮೌನವನ್ನು ದೌರ್ಬಲ್ಯವೆಂದು ಪರಿಗಣಿಸಬಾರದು" ಎಂದು ಹೇಳಿದ್ದಾರೆ.
ನಿರ್ಣಯ ಅಂಗೀಕಾರ: ಸಂಘಟನೆಯು ವಾರಣಾಸಿಯ ಜ್ಞಾನವಾಪಿ ಮಸೀದಿ ಪ್ರಕರಣ, ಮಥುರಾದ ಶಾಹಿ ಈದ್ಗಾ ಮಸೀದಿ ವಿವಾದ ಮತ್ತು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ನಿರ್ಣಯಗಳನ್ನು ಅಂಗೀಕರಿಸಿತು ಅಲ್ಲದೇ ಎಲ್ಲಾ ಮುಸ್ಲಿಮರು ಭಯ ಮತ್ತು ಹತಾಶೆಯನ್ನು ದೂರವಿಟ್ಟು ಅವರ ಭವಿಷ್ಯದ ಸುಧಾರಣೆಗಾಗಿ ಕೆಲಸ ಮಾಡಲು ಒತ್ತಾಯಿಸಿದೆ.
ಜ್ಞಾನವಾಪಿ ಮಸೀದಿ ಮತ್ತು ಮಥುರಾ ಈದ್ಗಾ ಪ್ರಕರಣಗಳ ನಿರ್ಣಯದಲ್ಲಿ, ಪುರಾತನ ದೇಗುಲಗಳ ಬಗ್ಗೆ ಪದೇ ಪದೇ ವಿವಾದಗಳನ್ನು ಹುಟ್ಟುಹಾಕುವ ಮೂಲಕ ದೇಶದ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಶಕ್ತಿಗಳನ್ನು ಬೆಂಬಲಿಸುವ ರಾಜಕೀಯ ಪಕ್ಷಗಳ ವರ್ತನೆಗೆ ಸಂಘಟನೆಯು ತನ್ನ ತೀವ್ರ ವಿಷಾದ ವ್ಯಕ್ತಪಡಿಸಿದೆ ಎಂದು ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: ಅಲಿಗಢ ಕಾಲೇಜು ಕ್ಯಾಂಪಸ್ ನಲ್ಲಿ ಶಿಕ್ಷಕನ ನಮಾಜ್, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಯುವ ಬಿಜೆಪಿ!
"ಹಳೆಯ ವಿವಾದಗಳನ್ನು ಜೀವಂತವಾಗಿಡಲು ಮತ್ತು ಇತಿಹಾಸದ ಆಪಾದಿತ ತಪ್ಪುಗಳನ್ನು ಸರಿಪಡಿಸುವ ಹೆಸರಿನಲ್ಲಿ ಅಭಿಯಾನಗಳನ್ನು ನಡೆಸುವುದರಿಂದ ದೇಶಕ್ಕೆ ಪ್ರಯೋಜನವಾಗುವುದಿಲ್ಲ." ಪ್ರಸ್ತುತ, ವಾರಣಾಸಿಯ ಜ್ಞಾನವಾಪಿ ಮಸೀದಿ, ಮಥುರಾದ ಐತಿಹಾಸಿಕ ಈದ್ಗಾ ಮತ್ತು ಇತರ ಮಸೀದಿಗಳ ವಿರುದ್ಧ ಇಂತಹ ಅಭಿಯಾನಗಳು ನಡೆಯುತ್ತಿವೆ, ಇದು ದೇಶದ ಶಾಂತಿ, ಘನತೆ ಮತ್ತು ಸಮಗ್ರತೆಗೆ ಧಕ್ಕೆ ತಂದಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಈ ವಿವಾದಗಳನ್ನು ಹುಟ್ಟುಹಾಕುವ ಮೂಲಕ ಕೋಮು ಘರ್ಷಣೆ ಮತ್ತು ಬಹುಸಂಖ್ಯಾತರ ಋಣಾತ್ಮಕ ರಾಜಕೀಯಕ್ಕೆ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅದು ಆರೋಪಿಸಿದೆ.
ನಿರ್ಣಯವು, "ಈ ಸಮ್ಮೇಳನವು ಇಸ್ಲಾಮಿಕ್ ಕಾನೂನುಗಳು ಮತ್ತು ಸಂಪ್ರದಾಯಗಳಲ್ಲಿ ಯಾವುದೇ ಹಸ್ತಕ್ಷೇಪವನ್ನು ಸ್ವೀಕರಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತದೆ." ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸರಕಾರ ಪ್ರಯತ್ನಿಸಿದರೆ ಸಂವಿಧಾನದ ಪರಿಧಿಯಲ್ಲಿಯೇ ವಿರೋಧಿಸಲಾಗುವುದು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಸಮಾವೇಶದಲ್ಲಿ ಹನ್ನೊಂದು ವಿಭಿನ್ನ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಸಂಘಟನೆಯ ಸುಮಾರು 2,000 ಸದಸ್ಯರು ಮತ್ತು ಇತರ ಗಣ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು.
