ಬ್ರೇಕ್‌ ಫಾಸ್ಟ್ ಮೀಟಿಂಗ್‌ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಒಗ್ಗಟ್ಟಿನ ಸಂದೇಶ ನೀಡಿದ್ದರೂ, ಬೆಂಬಲಿಗರಿಂದ ‘ಸಿಎಂ’ ಕೂಗು ಮಾತ್ರ ನಿಂತಿಲ್ಲ.

ನವದೆಹಲಿ (ಡಿ.15): ಬ್ರೇಕ್‌ ಫಾಸ್ಟ್ ಮೀಟಿಂಗ್‌ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಒಗ್ಗಟ್ಟಿನ ಸಂದೇಶ ನೀಡಿದ್ದರೂ, ಬೆಂಬಲಿಗರಿಂದ ‘ಸಿಎಂ’ ಕೂಗು ಮಾತ್ರ ನಿಂತಿಲ್ಲ. ಭಾನುವಾರ ನಡೆದ ವೋಟ್‌ ಚೋರಿ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಮತ್ತು ಡಿಕೆಶಿ ದೆಹಲಿಗೆ ಬಂದಾಗಲೂ ಬೆಂಬಲಿಗರು ತಮ್ಮ ನಾಯಕನ ಪರ ಜೈಕಾರ ಕೂಗಿದ್ದಾರೆ.

ಸಮಾವೇಶದಲ್ಲಿ ಪಾಲ್ಗೊಳ್ಳಲು ಡಿ.ಕೆ.ಶಿವಕುಮಾರ್‌ ಅವರು ಸಚಿವರು, ಶಾಸಕರೊಂದಿಗೆ ಕರ್ನಾಟಕ ಭವನಕ್ಕೆ ಆಗಮಿಸಿದಾಗ ಬೆಂಬಲಿಗರು ‘ಮುಂದಿನ ಸಿಎಂ ಡಿಕೆಶಿʼ ಎಂದು ಜೈಕಾರ ಕೂಗಿದರು. ಸುಮ್ಮನಿರುವಂತೆ ಅವರು ಬೆಂಬಲಿಗರಿಗೆ ಸೂಚಿಸಿದರೂ ಬೆಂಬಲಿಗರ ಜೈಕಾರ ಮುಂದುವರಿಯಿತು.

ಸ್ವಲ್ಪ ಸಮಯದ ಬಳಿಕ, ಬೆಂಗಳೂರಿನಿಂದ ಆಗಮಿಸಿದ ಸಿದ್ದರಾಮಯ್ಯ ಕೂಡ ಕರ್ನಾಟಕ ಭವನಕ್ಕೆ ಆಗಮಿಸಿದರು. ಈ ವೇಳೆ, ಅವರ ಬೆಂಬಲಿಗರು, ‘ಐದು ವರ್ಷವೂ ಸಿದ್ದರಾಮಯ್ಯ ಸಿಎಂ’ ಎಂದು ಘೋಷಣೆ ಕೂಗಿದರು. ಆ ಮೂಲಕ ದೆಹಲಿಯ ಕರ್ನಾಟಕ ಭವನ ಕೂಡ ಭಾನುವಾರ ಸಿದ್ದು ಮತ್ತು ಡಿಕೆಶಿ ಬೆಂಬಲಿಗರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು.

ಸೋನಿಯಾ, ರಾಗಾ ಔತಣದಲ್ಲಿ ಡಿಕೆ ಭಾಗಿ

ವೋಟ್‌ ಚೋರಿ ವಿರುದ್ಧದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಎಐಸಿಸಿ ಕಚೇರಿಯಲ್ಲಿ ಅಧಿನಾಯಕಿ ಸೋನಿಯಾ ಗಾಂಧಿ, ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಜತೆ ಔತಣಕೂಟದಲ್ಲಿ ಭಾಗಿಯಾದರು. ಆ ನಾಯಕರ ಜತೆ ಕೆಲ ಹೊತ್ತು ಮಾತನಾಡಿದರು. ಸಂಜೆ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಮಾತನಾಡಿದರು.