ಕೊರೋನಾ ಹಾವಳಿ ಮಧ್ಯೆ ಕೇರಳದಲ್ಲಿ ಅಂಥ್ರಾಕ್ಸ್ ಸ್ಫೋಟ: ತೀವ್ರ ಆತಂಕ
* ಕೆಲವೇ ದಿನದಲ್ಲಿ 5-6 ಕಾಡು ಹಂದಿಗಳ ಸಾವು
* ಇತರ ಕಾಡು ಪ್ರಾಣಿಗಳು ಹಾಗೂ ಸಾಕು ಪ್ರಾಣಿಗಳಿಗೂ ಈ ಸೋಂಕು ಹರಡುವ ಭೀತಿ
* ಆತಂಕಪಡುವ ಅಗತ್ಯವಿಲ್ಲ ಎಂದು ಕೇರಳದ ಆರೋಗ್ಯ ಇಲಾಖೆ ಅಭಯ
ತ್ರಿಶೂರ್/ತಿರುವನಂತಪುರಂ(ಜು.01): : ಕೊರೋನಾ ಹಾವಳಿಯ ನಡುವೆಯೇ ಕೇರಳದಲ್ಲಿ ಅಂಥ್ರಾಕ್ಸ್ ಬ್ಯಾಕ್ಟೀರಿಯಾ ಹರಡುತ್ತಿರುವುದು ಪತ್ತೆಯಾಗಿದ್ದು, ತೀವ್ರ ಆತಂಕ ಸೃಷ್ಟಿಸಿದೆ. ತ್ರಿಶೂರ್ ಜಿಲ್ಲೆಯ ಅತಿರಾಪಳ್ಳಿ ಕಾಡಿನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಲ್ಲಿ 5-6 ಕಾಡು ಹಂದಿಗಳು ಅಂಥ್ರಾಕ್ಸ್ ಸೋಂಕಿನಿಂದ ಸಾವನ್ನಪ್ಪಿವೆ. ಹೀಗಾಗಿ ಇತರ ಕಾಡು ಪ್ರಾಣಿಗಳು ಹಾಗೂ ಸಾಕು ಪ್ರಾಣಿಗಳಿಗೂ ಈ ಸೋಂಕು ಹರಡುವ ಭೀತಿ ವ್ಯಕ್ತವಾಗಿದೆ.
ಮಣ್ಣಿನಲ್ಲಿ ನೈಸರ್ಗಿಕವಾಗಿಯೇ ಅಂಥ್ರಾಕ್ಸ್ ಬ್ಯಾಕ್ಟೀರಿಯಾ ಇರುತ್ತದೆ. ಅದರ ಸೋಂಕು ಪ್ರಾಣಿಗಳಿಗೆ ತಗಲಿದರೆ ಸಾವು ಸಂಭವಿಸಬಹುದು. ಪ್ರಾಣಿಗಳಿಂದ ಅದು ಮನುಷ್ಯರಿಗೆ ಹರಡುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೂ ಕಾಡು ಹಂದಿಗಳು ಸಾಮೂಹಿಕವಾಗಿ ಸಾವನ್ನಪ್ಪಿರುವುದು ಕೇರಳದಲ್ಲಿ ಹಾಗೂ ನೆರೆಯ ಪ್ರದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ 1249 ಕೊರೋನಾ ಪ್ರಕರಣ ಪತ್ತೆ
‘ಅಂಥ್ರಾಕ್ಸ್ ಹರಡುತ್ತಿರುವುದರ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಅತಿರಾಪಳ್ಳಿ ಕಾಡಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆತಂಕಪಡುವ ಅಗತ್ಯವಿಲ್ಲ’ ಎಂದು ಕೇರಳದ ಆರೋಗ್ಯ ಇಲಾಖೆ ಅಭಯ ನೀಡಿದೆ. ಅಂಥ್ರಾಕ್ಸ್ ಪತ್ತೆಯಾಗಿರುವ ಅತಿರಾಪಳ್ಳಿ ಗ್ರಾಮ ಪಂಚಾಯ್ತಿ ತ್ರಿಶೂರ್ ಜಿಲ್ಲೆಯಲ್ಲಿ ಬರುತ್ತದೆ. ಸೋಂಕು ಹರಡುವುದನ್ನು ನಿಯಂತ್ರಿಸಲು ಜಿಲ್ಲಾಡಳಿತ ಎಲ್ಲಾ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.