PM Modi Security Breach: ಆಗ ಹಿಂದುಗಳು ಅಪಾಯದಲ್ಲಿದ್ರು, ಈಗ ಪ್ರಧಾನಿಗೆ ಡೇಂಜರ್ ಇದೆ ಎಂದ ದಿಗ್ವಿಜಯ್ ಸಿಂಗ್!
"ನಾನು ಜೀವಂತವಾಗಿ ಮರಳಿ ಬಂದೆ" ಎಂದ ಪ್ರಧಾನಿ ಮಾತಿಗೆ ತಿರುಗೇಟು
ರೈತರು ಜೀವಂತವಾಗಿ ಮನೆಗೆ ತೆರಳಲು ಅವರು ಅವಕಾಶ ನೀಡಿಲ್ಲ ಎಂದ ದಿಗ್ವಿಜಯ್ ಸಿಂಗ್
ಮೋದಿ ಮತ್ತು ಹಿಟ್ಲರ್ ಒಂದೇ ಎಂದ ಕಾಂಗ್ರೆಸ್ ಹಿರಿಯ ನಾಯಕ
ನವದೆಹಲಿ (ಜ.8): ಪಂಜಾಬ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರ ಭದ್ರತಾ ಲೋಪ ( Security Breach) ಪ್ರಕರಣ ರಾಜಕೀಯವಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಪಂಜಾಬ್ ನಿಂದ (Punjab) ದೆಹಲಿಗೆ (Delhi) ವಾಪಸಾಗುವ ವೇಳೆ "ನಾನು ಜೀವಂತವಾಗಿ ಮರಳಿ ಹೋಗುತ್ತಿದ್ದೇನೆ. ಇದಕ್ಕಾಗಿ ನಿಮ್ಮ ಮುಖ್ಯಮಂತ್ರಿಗೆ ಥ್ಯಾಂಕ್ಸ್ ಹೇಳ್ಬಿಡಿ" ಎಂದು ಮೋದಿ ಹೇಳಿರುವ ಮಾತನ್ನು ಹಿಡಿದುಕೊಂಡು ಕಾಂಗ್ರೆಸ್ ಮುಖಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪ್ರಧಾನಮಂತ್ರಿ ಭದ್ರತೆಯಲ್ಲಿ ಲೋಪವಾಗಿರುವುದು ಗಂಭೀರ ವಿಷಯ ಸರಿ, ಆದರೆ, ಪ್ರಧಾನಿಯಿಂದ ಇಂಥ ಮಾತುಗಳು ಬರಬಾರದು ಎಂದು ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಹಿರಿಯ ಕಾಂಗ್ರೆಸ್ ನಾಯಕ (Senior Congress leader) ದಿಗ್ವಿಜಯ್ ಸಿಂಗ್ (Digvijaya Singh), "ನರೇಂದ್ರ ಮೋದಿ ಮತ್ತು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನಡುವೆ ಯಾವ ವ್ಯತ್ಯಾಸವೂ ಇಲ್ಲ' ಎಂದು ಟೀಕೆ ಮಾಡಿದ್ದಾರೆ.
"ಮೇ ಜಿಂದಾ ಲೌಟ್ ಪಾಯಾ" ಎಂದು ಮೋದಿ ಹೇಳುತ್ತಾರೆ, ಆದರೆ ಕಳೆದೊಂದು ವರ್ಷದಿಂದ ಪ್ರತಿಭಟನೆ ಮಾಡುತ್ತಿರುವ 700 ರೈತರು ತಮ್ಮ ಮನೆಗೆ ಜೀವಂತವಾಗಿ ವಾಪಸಾಗಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದ್ವಿಗ್ವಿಜಯ್ ಸಿಂಗ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರದ ಕರಾಳ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ 700ಕ್ಕೂ ಹೆಚ್ಚು ರೈತರು ಜೀವಂತವಾಗಿ ಹಿಂತಿರುಗಲಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ ನಂತರ ದಿಗ್ವಿಜಯ್ ಸಿಂಗ್ ಈ ಮಾತನ್ನು ಹೇಳಿದ್ದಾರೆ. ಅವರೆಲ್ಲರೂ ಈಗ ನಿಮಗೆ ಥ್ಯಾಂಕ್ ಯು ಹೇಳ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ವಿವಾದಿತ ಹೇಳಿಕೆಗಳಿಂದಲೇ ಹೆಚ್ಚಾಗಿ ಸುದ್ದಿಯಾಗುವ ದಿಗ್ವಿಜಯ್ ಸಿಂಗ್, ಮೊದಲೆಲ್ಲಾ ಹಿಂದುಗಳು (Hindu ) ಅಪಾಯದಲ್ಲಿರುತ್ತಿದ್ದರು, ಈಗ ಪ್ರಧಾನಿಗೆ ಅಪಾಯವಿದೆ ಎಂದು ಟೀಕೆ ಮಾಡಿದ್ದರೆ. ಆದರೆ ನಿಜ ವಿಚಾರ ಏನೆಂದರೆ ಅಪಾಯದಲ್ಲಿರುವುದು ಪ್ರಧಾನಿಯಲ್ಲ ಪ್ರಧಾನಿಯ ಕುರ್ಚಿ ಎಂದು ಬರೆದಿದ್ದಾರೆ.
ಇನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Punjab Congress chief Navjot Singh Sidhu ) ಅವರು ಕೇವಲ 15 ನಿಮಿಷಗಳ ಕಾಯುವಿಕೆಯಿಂದ ಪ್ರಧಾನಿ "ತೊಂದರೆಗೊಂಡಿದ್ದಾರೆ" ಎಂದು ಹೇಳಿದ್ದರು ಆದರೆ ರೈತರು ಒಂದು ವರ್ಷದವರೆಗೆ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದರು ಅದನ್ನು ಕೇಳುವವರು ಯಾರಿದ್ದಾರೆ ಎಂದು ಹೇಳಿದ್ದಾರೆ.
ನಾನು ಪ್ರಧಾನಮಂತ್ರಿ ಅವರಿಗೆ ಪ್ರಶ್ನೆ ಮಾಡಲು ಬಯಸುತ್ತೇನೆ. ನಮ್ಮ ರೈತ ಸಹೋದರರು ದೆಹಲಿಯ ಗಡಿಯಲ್ಲಿ ಕಳೆದೊಂದು ವರ್ಷದಿಂದ ಪ್ರತಿಭಟನೆ ಮಾಡುತ್ತಿದ್ದರು. ಬಹುಶಃ ಅಲ್ಲಿ ಅವರು ಒಂದೂವರೆ ವರ್ಷದಿಂದ ಇದ್ದರು. ನಿಮ್ಮ ಮಾಧ್ಯಮಗಳು ಆಗ ಏನೂ ಹೇಳಿರಲಿಲ್ಲ. ಆದರೆ, ಪಂಜಾಬ್ ನಲ್ಲಿ ಕೇವಲ 15 ನಿಮಿಷ ಕಾದಿದ್ದಕ್ಕಾಗಿ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದೆ' ಎಂದು ಬರ್ನಾಲಾದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಹೇಳಿದ್ದಾರೆ. ಇನ್ನು ಭದ್ರತಾ ಉಲ್ಲಂಘನೆ ಪ್ರಕರಣವನ್ನು ರಾಜಕೀಯ ಮಾಡಬೇಡಿ ಎಂದು ಕಾಂಗ್ರೆಸ್ ಪಕ್ಷ ಬಿಜೆಪಿಗೆ ಸಲಹೆ ನೀಡಿದೆ. ಜನವರಿ 5ರ ಪಂಜಾಬ್ ಭೇಟಿಯ ವೇಳೆ ಸಂಭವಿಸಿದ ಭದ್ರತಾ ಲೋಪದಲ್ಲಿ ಪಂಜಾಬ್ ಸರ್ಕಾರದ ಪಾಲು ಎಷ್ಟಿದೆಯೋ ಪ್ರಧಾನಿ ಭದ್ರತೆಯನ್ನು ನೋಡಿಕೊಳ್ಳುವ ಎಸ್ ಪಿಜಿ ಪಾಲು ಅಷ್ಟೇ ಇದೆ ಎಂದು ಹೇಳಿದೆ.
Digvijay Singh big attack on BJP-RSS : ಗೋಮಾಂಸ ಸೇವನೆ ಬಗ್ಗೆ ಸಾವರ್ಕರ್ ಗೆ ಯಾವುದೇ ಸಮಸ್ಯೆ ಇರಲಿಲ್ಲ!
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ (Supriya Shrinate), ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಈ ವಿಷಯದಲ್ಲಿ ಪಂಜಾಬ್ ಮತ್ತು ಪಂಜಾಬಿಗಳ ಹೆಮ್ಮೆಯನ್ನು ದೂಷಿಸುವುದನ್ನು ನಿಲ್ಲಿಸಬೇಕು. 'ಪ್ರಧಾನಿ ಭದ್ರತೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಒಮ್ಮೆ ಅವರು ಹಾಗೆ ಮಾಡಿದರೆ, ಈ ಕೊಳಕು ರಾಜಕೀಯವು ತನ್ನಿಂದ ತಾನೇ ನಿಲ್ಲುತ್ತದೆ, ”ಎಂದು ಕಾಂಗ್ರೆಸ್ ನಾಯಕಿ ಹೇಳಿದರು. ಪ್ರಧಾನಮಂತ್ರಿಯವರು ಈ “ಜೀವ ಬೆದರಿಕೆ” ಬಿಟ್ಟು ಆಡಳಿತ ಮತ್ತು ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಡೆ ಗಮನ ಕೇಂದ್ರೀಕರಿಸಬೇಕು ಎಂದರು.