ರಷ್ಯಾದ ದಾಳಿಯ ಹಿನ್ನೆಲೆ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ನಾಲ್ಕು ಏರ್ ಇಂಡಿಯಾ ವಿಮಾನಗಳನ್ನು ಕಳುಹಿಸಿದೆ.   ಭಾರತೀಯರ ಭದ್ರತೆ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿಗೆ ಭರವಸೆ ನೀಡಿದ್ದಾರೆ.

ನವದೆಹಲಿ(ಫೆ.27): ರಷ್ಯಾದ (Russia) ದಾಳಿಯ ಹಿನ್ನೆಲೆ ಉಕ್ರೇನ್‌ನಲ್ಲಿ (Ukraine) ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ನಾಲ್ಕು ಏರ್ ಇಂಡಿಯಾ ವಿಮಾನಗಳನ್ನು ಕಳುಹಿಸಿದೆ. ಅವುಗಳಲ್ಲಿ ಮೂರು ರೊಮೇನಿಯನ್ (Romanian ) ರಾಜಧಾನಿ ಬುಕಾರೆಸ್ಟ್‌ಗೆ (Bucharest) ಮತ್ತು ಒಂದು ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ಗೆ (Budapest ) ಈಗಾಗಲೇ ತೆರಳಿದೆ. ಉಕ್ರೇನ್‌ನಿಂದ ಭಾರತೀಯ ನಾಗರಿಕರನ್ನು ರಸ್ತೆಯ ಮೂಲಕ ಈ ಸ್ಥಳಗಳಿಗೆ ಕರೆದುಕೊಂಡು ಬರಲಾಗುತ್ತದೆ. 

Add Asianetnews Kannada as a Preferred SourcegooglePreferred

ರಷ್ಯಾದ ಅಧ್ಯಕ್ಷ ಪುಟಿನ್ (putin) ಅವರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಭಾರತೀಯ ನಾಗರಿಕರ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ ಬಳಿಕ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯ ತುರ್ತಾಗಿ ನಡೆಯುತ್ತಿದೆ. ಉಕ್ರೇನ್‌ನಲ್ಲಿ ಭಾರತೀಯ ನಾಗರಿಕರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ರಷ್ಯಾ ಸರ್ಕಾರವು ರಷ್ಯಾದ ಪಡೆಗಳಿಗೆ ಸೂಚನೆ ನೀಡಿದೆ. ಸ್ಥಳಾಂತರಿಸಲ್ಪಟ್ಟ ಭಾರತೀಯರು ರಸ್ತೆಯ ಮೂಲಕ ಪೂರ್ವ ಯುರೋಪಿಯನ್ ರಾಜಧಾನಿಗಳನ್ನು ತಲುಪುತ್ತಿದ್ದಂತೆ, ವಿಮಾನಗಳ ಸಮಯವನ್ನು ನಿರ್ಧರಿಸಲಾಗುತ್ತದೆ.

ವರದಿಯಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಅಧಿಕಾರಿಗಳ ಸಭೆ ನಡೆಸಿ ಸಚಿವ ಸಂಪುಟ ಸಮಿತಿಯ ಜೊತೆ ಪರಿಸ್ಥಿತಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸಭೆ ಬಳಿಕ ಭಾರತ ಸರ್ಕಾರವು ನಾಲ್ಕು ಏರ್ ಇಂಡಿಯಾ ವಿಮಾನಗಳನ್ನು ಕಳುಹಿಸಲು ತೀರ್ಮಾನಿಸಿದ್ದು ಅದರ ವೆಚ್ಚವನ್ನು ಕೂಡ ಕೇಂದ್ರವೇ ಭರಿಸುತ್ತಿದೆ. ರಷ್ಯಾದ ದಾಳಿಯ ನಡುವೆ ಉಕ್ರೇನ್‌ನಲ್ಲಿ ಸಿಲುಕಿರುವ 16,000 ಭಾರತೀಯರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ಎದುರು ನೋಡುತ್ತಿದೆ. ಶುಕ್ರವಾರ ಸಂಜೆ ಸುಸೇವಾ ಗಡಿ ಮೂಲಕ ಸುಮಾರು 200 ಭಾರತೀಯ ನಾಗರಿಕರನ್ನು ರೊಮೇನಿಯಾಗೆ ವರ್ಗಾಯಿಸಲಾಯಿತು.

ಫೇಸ್‌ಬುಕ್‌ ಬೆನ್ನಲ್ಲೇ ಟ್ವಿಟರ್‌ಗೂ ನಿರ್ಬಂಧ ಹೇರಿದ ರಷ್ಯಾ,

 ಯುದ್ಧಪೀಡಿತ ಉಕ್ರೇನ್‌ನಿಂದ ಭಾರತಕ್ಕೆ 250 ಭಾರತೀಯರು: ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ 250 ಭಾರತೀಯ ಪ್ರಜೆಗಳನ್ನು ಹೊತ್ತ ಏರ್ ಇಂಡಿಯಾದ ಎರಡನೇ ಸ್ಥಳಾಂತರಿಸುವ ವಿಮಾನವು ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಭಾನುವಾರ ಮುಂಜಾನೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನ ನಿಲ್ದಾಣದಕ್ಕೆ ಬಂದಿಳಿದ ಭಾರತೀಯರಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗುಲಾಬಿಗಳನ್ನು ನೀಡುವ ಮೂಲಕ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಂಧಿಯಾ ಅವರು, ಪ್ರಧಾನಿ ನರೇಂದ್ರ ಮೋದಿಯವರು ಉಕ್ರೇನ್‌ ಅಧ್ಯಕ್ಷರು ಹಾಗು ರಷ್ಯಾ ಸರ್ಕಾರದ ಜೊತೆ ನಿರಂತರ ಮಾತುಕತೆ ನಡೆಸಿದ್ದು, ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆತರುವ ಬಗ್ಗೆ ಸಂವಾದ ನಡೆದಿದೆ. ಇದಕ್ಕೆ ಅಹರ್ನಿಶಿ ಶ್ರಮಪಟ್ಟ ಏರ್ ಇಂಡಿಯಾ ಸಿಬ್ಬಂದಿಯನ್ನು ಅಭಿನಂದಿಸಿದರು.

SWIFT ಮುಂದಿಟ್ಟುಕೊಂಡು ರಷ್ಯಾಗೆ ಬೆದರಿಕೆ,

ರಷ್ಟಾ-ಉಕ್ರೇನ್ ಮಧ್ಯೆ ಸಮರ ನಡೆಯುತ್ತಿರುವ ನಡುವಲ್ಲೂ ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ನಿನ್ನೆಯಷ್ಟೇ 219 ಭಾರತೀಯರನ್ನು ಹೊತ್ತ ಮೊದಲ ವಿಮಾನವು ಮುಂಬೈಗೆ ಶನಿವಾರ ರಾತ್ರಿ ಬಂದಿಳಿದಿತ್ತು. ಇದರಂತೆ ಎರಡನೇ ವಿಮಾನವು ಇಂದು ಬೆಳಿಗ್ಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದಿದೆ.

ಪ್ರಸ್ತುತ ಹಂಗೇರಿಯ ಬುಡಾಪೆಸ್ಟ್​ನಿಂದ 240 ಜನರನ್ನು ಹೊತ್ತಿರುವ ಮೂರನೇ ವಿಮಾನ ಭಾರತದತ್ತ ಹೊರಟಿದೆ. ಉಕ್ರೇನ್​ನಿಂದ ಭಾರತದ ನಾಗರಿಕರನ್ನು ಸ್ಥಳಾಂತರಿಸುವ ಯೋಜನೆಗೆ ‘ಆಪರೇಷನ್ ಗಂಗಾ’ ಎಂದು ಹೆಸರಿಡಲಾಗಿದೆ.

ರಾಜಧಾನಿ ಕೀವ್ ನಲ್ಲಿನ ಪರಿಸ್ಥಿತಿ ಕಾರಣ ಅಲ್ಲಿಗೆ ವಿಮಾನ ಸಂಚಾರ ನಿಂತಿದೆ. ಹಾಗಾಗಿ ಉಕ್ರೇನ್ ನಿಂದ ಪಕ್ಕದ ರೊಮೇನಿಯಾಗೆ ಭಾರತೀಯರನ್ನು ರಸ್ತೆ ಮಾರ್ಗದ ಮೂಲಕ ಕರೆಸಿಕೊಳ್ಳುತ್ತಿರುವ ಭಾರತ, ಅಲ್ಲಿಂದ ನಿನ್ನೆ ಇಂದು 250 ಜನರನ್ನು ವಿಮಾನದ ಮೂಲಕ ಕರೆತಂದಿದೆ. ಯುದ್ಧಪೀಡಿತ ಉಕ್ರೇನ್ ನಲ್ಲಿ ಭಾರತದ 15-20 ಸಾವಿರ ವಿದ್ಯಾರ್ಥಿಗಳಿದ್ದಾರೆ.