2025-2026ರ ವೇಳೆಗೆ ಎಸ್-400 ವಾಯುರಕ್ಷಣಾ ವ್ಯವಸ್ಥೆಯ ಉಳಿದ ಘಟಕಗಳನ್ನು ಭಾರತಕ್ಕೆ ತಲುಪಿಸಲು ರಷ್ಯಾ ಬದ್ಧವಾಗಿದೆ. ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ವೇಳೆ ಎಸ್‌-400 ಉತ್ತಮವಾಗಿ ಕಾರ್ಯನಿರ್ವಹಿಸಿದೆ. 

ನವದೆಹಲಿ: 2025-2026ರ ವೇಳೆಗೆ ಎಸ್-400 ವಾಯುರಕ್ಷಣಾ ವ್ಯವಸ್ಥೆಯ ಉಳಿದ ಘಟಕಗಳನ್ನು ಭಾರತಕ್ಕೆ ತಲುಪಿಸಲು ರಷ್ಯಾ ಬದ್ಧವಾಗಿದೆ ಎಂದು ಭಾರತದಲ್ಲಿನ ರಷ್ಯಾದ ಉಪರಾಯಭಾರಿ ರೋಮನ್ ಬಾಬುಷ್ಕಿನ್ ಹೇಳಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ವೇಳೆ ಎಸ್‌-400 ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಕೇಳಿದ್ದೇವೆ. ರಷ್ಯಾ ಮತ್ತು ಭಾರತ ಸಹಭಾಗಿತ್ವದ ಸುದೀರ್ಘ ಇತಿಹಾಸವನ್ನು ಹೊಂದಿವೆ. ಒಪ್ಪಂದದಂತೆ, ಉಳಿದ 2 ಎಸ್‌-400 ಘಟಕಗಳನ್ನು 2025-26ರ ವೇಳೆಗೆ ಭಾರತಕ್ಕೆ ತಲುಪಿಸಲಾಗುವುದು’ ಎಂದರು.

ಭಾರತ-ರಷ್ಯಾ ನಡುವೆ 5 ಎಸ್-400 ವ್ಯವಸ್ಥೆಗಳ ಖರೀದಿಗೆ ಒಪ್ಪಂದವಾಗಿತ್ತು. ಈ ಪೈಕಿ ಮೂರನ್ನು ಈಗಾಗಲೇ ರಷ್ಯಾ ಹಸ್ತಾಂತರಿಸಿದೆ.ಆಪರೇಷನ್ ಸಿಂದೂರದ ವೇಳೆ ಸುದರ್ಶನ ಚಕ್ರವೆಂದೇ ಖ್ಯಾತವಾಗಿರುವ ರಷ್ಯಾನಿರ್ಮಿತ ಎಸ್‌-400 ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿತ್ತು.

ಕೆನಡಾದಲ್ಲಿನ ಜಿ7 ಶೃಂಗಸಭೆಗೆ ಮೋದಿ ಗೈರು?

ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದೆಗೆಟ್ಟಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಕೆನಡಾದಲ್ಲಿ ಈ ವರ್ಷ ನಡೆಯಲಿರುವ ಜಿ7 ಶೃಂಗಸಭೆಗೆ ಗೈರಾಗುವ ಸಾಧ್ಯತೆಯಿದೆ. 6 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಪ್ರಧಾನಿ ಶೃಂಗಸಭೆಯಿಂದ ಹೊರಗುಳಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಈ ತಿಂಗಳ 15-17ರ ತನಕ ಕೆನಡಾದ ಆತಿಥ್ಯದಲ್ಲಿ ಶೃಂಗಸಭೆ ನಡೆಯಲಿದೆ. ಫ್ರಾನ್ಸ್‌, ಜರ್ಮನಿ, ಇಟಲಿ, ಬ್ರಿಟನ್, ಜಪಾನ್, ಅಮೆರಿಕ ಮತ್ತು ಕೆನಡಾ ಸದಸ್ಯತ್ವ ಹೊಂದಿರುವ ಜಿ7 ರಾಷ್ಟ್ರಗಳ ಈ ಶೃಂಗಸಭೆಯಲ್ಲಿ ಯುರೋಪ್‌ ಒಕ್ಕೂಟ, ಐಎಂಎಫ್‌, ವಿಶ್ವಬ್ಯಾಂಕ್, ವಿಶ್ವಸಂಸ್ಥೆ ಕೂಡ ಭಾಗಿಯಾಗಲಿವೆ.ಈಗಾಗಲೇ ದಕ್ಷಿಣ ಆಫ್ರಿಕಾ , ಉಕ್ರೇನ್ ಮತ್ತು ಆಸ್ಟ್ರೇಲಿಯಾ ದೇಶಗಳು ಕೆನಡಾದಿಂದ ಆಹ್ವಾನ ಸ್ವೀಕರಿಸಿವೆ. ಆದರೆ ಭಾರತಕ್ಕೆ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇನ್ನು ಮೂಲಗಳ ಪ್ರಕಾರ ಭಾರತ ಶೃಂಗಸಭೆಯಲ್ಲಿ ಭಾಗವಹಿಸಲು ಯಾವುದೇ ಆಸಕ್ತಿ ತೋರಿಸಿಲ್ಲ ಎನ್ನಲಾಗಿದ್ದು, ಎರಡು ದೇಶಗಳ ನಡುವೆ ಸಂಬಂಧ ಮೊದಲು ಸುಧಾರಿಸಬೇಕು ಎನ್ನುವ ನಿಲುವನ್ನು ಭಾರತ ವ್ಯಕ್ತಪಡಿಸಿದೆ.