ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ರೈತರಿಗೆ ನೀಡಿದ್ದ ಸಾಲದಲ್ಲಿ 2 ಲಕ್ಷ ರೂಪಾಯಿ ಮನ್ನಾ ಮಾಡಲು ಮಹಾ ಸರ್ಕಾರ ಆದೇಶ ನೀಡಿದೆ. ಈ ಆದೇಶ ಹೊರಬೀಳುತ್ತಿದ್ದಂತೆ ರೈತರ ನಿಟ್ಟುಸಿರು ಬಿಟ್ಟಿದ್ದಾರೆ. ಪರಿಣಾಮ 56 ಲಕ್ಷ ರೈತರಿಗೆ ಅನುಕೂಲವಾಗಲಿದೆ.

ಮುಂಬೈ (ಜೂ.02) ಮುಂಗಾರು ಪ್ರವೇಶಕ್ಕೆ ಕೆಲ ದಿನಗಳು ಮಾತ್ರ ಬಾಕಿ. ದೇಶದೆಲ್ಲೆಡೆ ಮಳೆ ಆರಂಭವಾಗಿದೆ. ಇದರ ನಡುವೆ ರೈತರ ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗಳು ಆರಂಭಗೊಳ್ಳುತ್ತಿದೆ. ಇದರ ಬೆನ್ನಲ್ಲೇ ರೈತರ 2 ಲಕ್ಷ ರೂಪಾಯಿ ಸಾಲ ಮನ್ನಾ ಆದೇಶ ಹೊರಬಿದ್ದಿದೆ. ಮಹಾರಾಷ್ಟ್ರ ಸರ್ಕಾರ ಈ ಮಹತ್ವದ ಆದೇಶ ನೀಡಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕ್ಯಾಬಿನೆಟ್ ರೈತರ ಸಾಲ ಮನ್ನಾಗೆ ಅನುಮೋದನೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

36,585 ಕೋಟಿ ರೂಪಾಯಿ ಸಾಲ ಮನ್ನ

ಸರ್ಕಾರದ ಲೆಕ್ಕಾಚಾರಗಳ ಪ್ರಕಾರ, ಈ ಯೋಜನೆಯು ರಾಜ್ಯದ ಒಟ್ಟು 65 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳನ್ನು ಒಳಗೊಳ್ಳಲಿದೆ. ಇದರಲ್ಲಿ ಅರ್ಹತೆ ಹೊಂದಿರುವ ಸುಮಾರು 56 ಲಕ್ಷ ರೈತರ ಒಟ್ಟು 36,585 ಕೋಟಿ ರೂಪಾಯಿ ಮೌಲ್ಯದ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

ಪ್ರೋತ್ಸಾಹ ಧನ ಕೊಡುಗೆ

ಕೇವಲ ಸಾಲಗಾರರಷ್ಟೇ ಅಲ್ಲದೆ, ಬ್ಯಾಂಕ್‌ಗಳಿಂದ ಪಡೆದ ಕೃಷಿ ಸಾಲವನ್ನು ಯಾವುದೇ ಬಾಕಿ ಉಳಿಸಿಕೊಳ್ಳದೆ ನಿಯಮಿತವಾಗಿ ಮರುಪಾವತಿ ಮಾಡಿರುವ (ಸಾಲ ಸುಸ್ತಿದಾರರಲ್ಲದ) ಪ್ರಾಮಾಣಿಕ ರೈತರಿಗೂ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಅಂತಹ ನಿಯಮಿತವಾಗಿ ಸಾಲ ಪಾವತಿಸಿದ ರೈತ ಖಾತೆದಾರರಿಗೆ ಸರ್ಕಾರದಿಂದ ತಲಾ 50,000 ರೂಪಾಯಿಗಳವರೆಗೆ ಪ್ರೋತ್ಸಾಹಧನ (Incentive) ನೀಡಲು ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ತೀರ್ಮಾನಕ್ಕೆ ಒಪ್ಪಿಗೆ ಸಿಕ್ಕಿದ್ದರೂ ಸಹ, ಸರ್ಕಾರದ ವತಿಯಿಂದ ಅಧಿಕೃತ ಸಾರ್ವಜನಿಕ ಘೋಷಣೆ ಹೊರಬಿದ್ದಿಲ್ಲ. ಮಹಾರಾಷ್ಟ್ರದಲ್ಲಿ ಸದ್ಯ ವಿಧಾನ ಪರಿಷತ್ (Legislative Council) ಚುನಾವಣೆಗಳು ನಡೆಯುತ್ತಿರುವುದರಿಂದ ರಾಜ್ಯಾದ್ಯಂತ 'ಮಾದರಿ ಚುನಾವಣಾ ನೀತಿ ಸಂಹಿತೆ' (Model Code of Conduct) ಜಾರಿಯಲ್ಲಿದೆ.

ಸರ್ಕಾರದ ಈ ತೀರ್ಮಾನವನ್ನು ರೈತ ಸಂಘಟನೆಗಳು ಮುಕ್ತಕಂಠದಿಂದ ಸ್ವಾಗತಿಸಿವೆ. ಈ ಬಗ್ಗೆ ಮಾತನಾಡಿರುವ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯದರ್ಶಿ ಅಜಿತ್ ನವಲೆ ಅವರು, "ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಈಗ ಇದರ ಶೀಘ್ರ ಜಾರಿ ಅತ್ಯಂತ ಮುಖ್ಯವಾಗಿದೆ. ಜೂನ್ ತಿಂಗಳು ಬೆಳೆ ಸಾಲ ಮರುಪಾವತಿಗೆ ಕೊನೆಯ ಅವಧಿಯಾಗಿರುವುದರಿಂದ, ಜೂನ್ ಅಂತ್ಯದೊಳಗೆ ಮನ್ನಾ ಆದ ಮೊತ್ತವನ್ನು ಬ್ಯಾಂಕ್‌ಗಳಿಗೆ ಜಮೆ ಮಾಡಬೇಕು. ಇಲ್ಲದಿದ್ದರೆ ರೈತರು ಸುಸ್ತಿದಾರರ ಪಟ್ಟಿಗೆ ಸೇರಿ ಮುಂಗಾರು ಹಂಗಾಮಿಗೆ ಹೊಸ ಸಾಲ ಪಡೆಯಲು ತೊಂದರೆಯಾಗುತ್ತದೆ" ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.