ಕೊಳದಲ್ಲಿ ಅಡಗಿದ ರೌಡಿಯ ಪತ್ತೆ ಮಾಡಿದ ಡ್ರೋನ್‌ ತಮಿಳುನಾಡಿನಲ್ಲೊಂದು ವಿಚಿತ್ರ ಘಟನೆ ಡ್ರೋನ್‌ ಸಹಾಯದಿಂದ ಆರೋಪಿಯ ಪತ್ತೆ ಮಾಡಿದ ಪೊಲೀಸರು

ಚೆನ್ನೈ(ಮಾ.18): ಮಹಾಭಾರತದಲ್ಲಿ ಭೀಮನಿಗೆ ಹೆದರಿ ಕೌರವ ರಾಜ ದುರ್ಯೋಧನ ಸರೋವರದಲ್ಲಿ ಅಡಗಿ ಕುಳಿತ ಪ್ರಸಂಗವನ್ನು ನೀವೆಲ್ಲರೂ ಕೇಳಿರಬಹುದು. ಸದ್ಯ ಈ ಘಟನೆಗೆ ಹೋಲಿಕೆಯಾಗುವಂತಹ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಯೊಬ್ಬ ಕೊಳದಲ್ಲಿ ಅವಿತು ಕುಳಿತಿದ್ದ ಈ ವೇಳೆ ಡ್ರೋನ್‌ ಸಹಾಯದಿಂದ ಆತನನ್ನು ಪತ್ತೆ ಮಾಡಿದ ಪೊಲೀಸರು ಹೆಡೆಮುರಿ ಕಟ್ಟಿ ಭೀಮನಂತೆ ಮೇಲೆ ತಂದು ಕಂಬಿಯೊಳಗೆ ಕೂರಿಸಿದ್ದಾರೆ. 

Add Asianetnews Kannada as a Preferred SourcegooglePreferred

ತಮಿಳುನಾಡಿದ ತೆಂಕಶಿ ಜಿಲ್ಲೆಯ ಜಕುಲ್ ಹಮೀದ್ (Zakul Hameed) ಎಂಬಾತನೇ ಹೀಗೆ ಪೊಲೀಸರಿಗೆ ಹೆದರಿ ಕೊಳದೊಳಗೆ ಅಡಗಿ ಕುಳಿತ ಆರೋಪಿ. ಈತನ ವಿರುದ್ಧ ವಿವಿಧ ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು. ಹೀಗಾಗಿ ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದರು. ಇದನ್ನು ತಿಳಿದ ಜಕುಲ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ತೆಂಕಶಿ ಸಮೀಪದ ಪಂಚ ನಾಯಕನ್ ಪೊತಾಯಿ ಕೊಳದ ಪ್ರದೇಶದಲ್ಲಿ ಅಡಗಿಕೊಂಡಿದ್ದ. ಅಲ್ಲದೇ ಅಲ್ಲಿ ಸ್ನಾನಕ್ಕೆ ಬಂದ ಕುರುಬ ಸಮುದಾಯದವರು ಹಾಗೂ ಮಹಿಳೆಯರನ್ನು ಬೆದರಿಸಿದ್ದ ಎನ್ನಲಾಗಿದೆ.

ಡ್ರೋನ್‌ ಚಲಾಯಿಸಲು ಇನ್ನ್ಮುಂದೆ ಪೈಲಟ್ ಲೈಸೆನ್ಸ್ ಅಗತ್ಯವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ!

ಅಲ್ಲದೇ ಇದೇ ವೇಳೆ ಮೇಕೆ ಮೇಯಿಸಲು ತೆರಳಿದ್ದ ಪೀರ್ ಮೊಹಮ್ಮದ್ (Peer Mohammad) ಎಂಬುವವರ ಮೇಲೂ ಈತ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಜಕುಲ್‌ನನ್ನು ಹಿಡಿಯಲು ಧಾವಿಸಿದ್ದಾರೆ. ಆದರೆ ಅದಾಗಲೇ ಅಲ್ಲಿಂದ ಓಡಿ ಹೋದ ಈತ ಕೆರೆ ಪ್ರದೇಶದಲ್ಲಿ ಅಡಗಿಕೊಂಡಿದ್ದ.

ಈ ವೇಳೆ ತೆಂಕಶಿ (Tenkasi) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣರಾಜ್ (Krishna Raj) ಮತ್ತು ತೆಂಕಶಿ (Tenkasi) ಉಪವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಮಣಿಮಾರನ್ (Manimaran) ಅವರ ಸೂಚನೆ ಮೇರೆಗೆ ತೆಂಕಶಿ ಪೊಲೀಸ್ ಇನ್ಸ್ ಪೆಕ್ಟರ್ ಬಾಲಮುರುಗನ್ (Balamurugan), ಜಕುಲ್‌ನನ್ನು ಬಂಧಿಸಲು ಅನುಮತಿ ಕೋರಿದ್ದಾರೆ. ಮುಖ್ಯ ನಿರೀಕ್ಷಕ ಮುತ್ತುರಾಜ್ (Muthuraj), ಮರಿಯಪ್ಪನ್(Mariappan), ಅಪರಾಧ ವಿಭಾಗದ ಅಧಿಕಾರಿ ಅರುಳ್(Arul), ಕಾರ್ತಿಕ್(Karthik), ಅಲೆಕ್ಸಾಂಡರ್(Alexander), ಪೊನ್ರಾಜ್ (Ponraj) ಮತ್ತು ಸೌಂದರಾಜ್ (Saundaraj) ಅವರು ಡ್ರೋನ್ ಕ್ಯಾಮೆರಾದೊಂದಿಗೆ ಪಂಚ ನಾಯಕನ್ ಪೊಥೈ ಎಂಬ ಕೊಳ ಇರುವ ಪ್ರದೇಶಕ್ಕೆ ತಕ್ಷಣವೇ ಬಂದಿದ್ದಾರೆ.

Kisan Drones: ಕೃಷಿಗೆ ನೆರವಾಗಲು ಬಂತು ಸ್ವದೇಶೀ ಡ್ರೋನ್‌:‌ ದೇಶವ್ಯಾಪಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ!

ಅಲ್ಲದೇ ಡ್ರೋನ್ ಕ್ಯಾಮೆರಾ ( drone camera) ಸಹಾಯದಿಂದ ಇಡೀ ಪಂಚ ನಾಯಕನ್ ಪೊತಾಯಿ (Pancha Nayakan Pothai)ಕೊಳವನ್ನು ಶೋಧಿಸಿದ್ದಾರೆ. ಆಗ ಜಕುಲ್ ಕೊಳದ ಮಧ್ಯದಲ್ಲಿ ನೀರಿರುವ ಸಸ್ಯಗಳ ನಡುವೆ ಅಡಗಿಕೊಂಡಿರುವುದು ಪತ್ತೆಯಾಗಿದೆ. ನಂತರ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಬೇರೆ ಉಪಾಯವಿಲ್ಲದ ಜಕುಲ್‌ ಹಮೀದ್ ತನ್ನ ಶಸ್ತ್ರಾಸ್ತ್ರಗಳನ್ನು ಬಿಟ್ಟು ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಡ್ರೋನ್ ಕ್ಯಾಮೆರಾ ಮೂಲಕ ಶೋಧ ನಡೆಸಿ ರೌಡಿಯನ್ನು ಬಂಧಿಸಿರುವುದು ಈ ಭಾಗದಲ್ಲಿ ಸಂಚಲನ ಮೂಡಿಸಿದ್ದು, ಪೊಲೀಸ್ ಇಲಾಖೆಯ ಇಂತಹದ್ದೊಂದು ಉಪಾಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.