ಪಾಕಿಸ್ತಾನದ ಜೊತೆಗೆ ಇನ್ನೇನಾದರೂ ಮಾತುಕತೆ ಇದೆ ಎಂದಾದಲ್ಲಿ, ಅದು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಮರಳಿಸುವ ಕುರಿತು ಮತ್ತು ಪಾಕಿಸ್ತಾನದ ನೆಲದಲ್ಲಿರುವ ಭಯೋತ್ಪಾದಕರನ್ನು ಹಸ್ತಾಂತರಿಸುವ ಕುರಿತು ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ.

ನವದೆಹಲಿ (ಮೇ.12): ಪಾಕಿಸ್ತಾನದ ಜೊತೆಗೆ ಇನ್ನೇನಾದರೂ ಮಾತುಕತೆ ಇದೆ ಎಂದಾದಲ್ಲಿ, ಅದು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಮರಳಿಸುವ ಕುರಿತು ಮತ್ತು ಪಾಕಿಸ್ತಾನದ ನೆಲದಲ್ಲಿರುವ ಭಯೋತ್ಪಾದಕರನ್ನು ಹಸ್ತಾಂತರಿಸುವ ಕುರಿತು ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಪಾಕ್‌ನೊಂದಿಗೆ ದೇಶದ ಸಂಬಂಧದ ಕುರಿತು ಸುಳಿವು ನೀಡಿದ್ದಾರೆ. ‘ಆಪರೇಷನ್ ಸಿಂದೂರ’ ಮೂಲಕ ಪಾಕಿಸ್ತಾನಕ್ಕೆ ಭಾರತ ಛಡಿಯೇಟು ಕೊಡಲು ಆರಂಭಿಸಿದ ಬಳಿಕ, ‘ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು’ ಎಂದು ಒತ್ತಾಯಿಸಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರು ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ್ದರು. ಈ ವೇಳೆ ಪ್ರತಿಕ್ರಿಯಿಸಿದ ಪ್ರಧಾನಿ, ‘ಕಾಶ್ಮೀರದ ಬಗ್ಗೆ ನಮಗೆ ಸ್ಪಷ್ಟವಾದ ನಿಲುವಿದೆ. ಪಿಒಕೆಯನ್ನು ಭಾರತಕ್ಕೆ ಹಿಂದಿರುಗಿಸಬೇಕು. ಅವರು ಉಗ್ರವಾದದ ಬಗ್ಗೆ ಮಾತನಾಡಿದರೆ, ನಾವು ಮಾತನಾಡಬಹುದು. ಅದಕ್ಕೆ ಹೊರತಾಗಿ ಮಾತನಾಡಲು ಬೇರೆ ಯಾವುದೇ ವಿಷಯವಿಲ್ಲ. ಎರಡು ದೇಶಗಳ ನಡುವೆ ಕಾಶ್ಮೀರ ವಿಷಯದಲ್ಲಿ ಮೂರನೇ ದೇಶವೊಂದು ಮಧ್ಯಸ್ಥಿಕೆ ವಹಿಸುವುದು ನಮಗೆ ಇಷ್ಟವಿಲ್ಲ. ಅದರ ಅಗತ್ಯವೂ ಇಲ್ಲ’ ಎಂದರು ಎಂದು ತಿಳಿದುಬಂದಿದೆ.

ಮಿಟ್ಟಿ ಮೇ ಮಿಲಾದೋ..: ‘ಉಗ್ರರಿಗೆ ಇನ್ನು ಸುರಕ್ಷಿತ ತಾಣಗಳಿಲ್ಲ. ಯಾರೂ ಇನ್ನು ಅಸ್ಪ್ರಶ್ಯರಲ್ಲ. ಯಾರನ್ನೇ ಆದರೂ ಹುಡುಕಿ ಹೊಡೆಯಬೇಕು. ಇನ್ನು ಮುಂದೆ ಈ ಹಿಂದೆ ಇದ್ದಂಥ ಪರಿಸ್ಥಿತಿ ಇರುವುದಿಲ್ಲ. ಯಾವುದನ್ನೂ ಇನ್ನು ಎಂದು ಮೋದಿ ಹೇಳಿದರು’ ಎಂದಿರುವ ಮೂಲಗಳು, ‘ಇತ್ತೀಚಿನ ಪಾಕ್‌ ಉಗ್ರ ನೆಲೆಗಳ ಮೇಲಿನ ದಾಳಿಗೂ ಮುನ್ನ ‘ಇನ್ಕೋ ಮಿಟ್ಟಿ ಮೇ ಮಿಲಾ ದೋ’ (ಅವರನ್ನು ಮಣ್ಣಲ್ಲಿ ಮಣ್ಣು ಮಾಡಿ’ ಎಂದು ಅವರು ಸೂಚಿಸಿದರು. ಆ ಪ್ರಕಾರ ಉಗ್ರ ತಾಣ ಧ್ವಂಸ ಮಾಡಲಾಯಿತು. ಇನ್ನು ಉಳಿದಿದ್ದು ಬಾಕಿ ಇದೆ’ ಎಂದು ಹೇಳಿವೆ.

ಆಪರೇಷನ್‌ ಸಿಂದೂರ ನಿಲ್ಲಲ್ಲ, ಗುಂಡು ಹಾರಿಸಿದರೆ ಬಾಂಬ್ ಮೂಲಕ ಉತ್ತರ ಎಂದ ಮೋದಿ

ಎಚ್ಚರದಿಂದಿರಿ: ಆಪರೇಷನ್‌ ಸಿಂದೂರದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವಾಲಯ ಮತ್ತು ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ‘ಸದಾ ಎಚ್ಚರದಿಂದಿದ್ದು, ಸ್ಪಷ್ಟ ಸಂವಹನವನ್ನು ಮುಂದುವರೆಸಿ’ ಎಂದು ಸೂಚಿಸಿದ್ದಾರೆ. ಈ ಮೂಲಕ, ‘ಪಾಕ್‌ ವಿರುದ್ಧದ ಪ್ರತೀಕಾರ ಇನ್ನೂ ಮುಗಿದಿಲ್ಲ’ ಎಂದು ಪರೋಕ್ಷವಾಗಿ ಹೇಳಿದ್ದಾರೆ. ದೇಶವು ಸೂಕ್ಷ್ಮ ಪರಿಸ್ಥಿತಿಯಲ್ಲಿರುವ ಈ ಸಮಯದಲ್ಲಿ ಜಾಗರೂಕತೆ, ಸಂಸ್ಥೆಗಳ ನಡುವಿನ ಸಮನ್ವಯ ಮತ್ತು ಸ್ಪಷ್ಟ ಸಂವಹನಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.