ಉ. ಪ್ರ ಚುನಾವಣೆಗೆ ಇನ್ನೊಂದೇ ವರ್ಷ: ಮಾಯಾವತಿಗೆ ಸಂಕಟ!
* 9 ಬಿಎಸ್ಪಿ ಶಾಸಕರು ಸಮಾಜವಾದಿ ಪಕ್ಷಕ್ಕೆ ಜಿಗಿತ?
* ಚುನಾವಣೆಗೆ 1 ವರ್ಷ ಬಾಕಿಯಿರುವಾಗಲೇ ಈ ಬೆಳವಣಿಗೆ
* ಉತ್ತರ ಪ್ರದೇಶ ರಾಜಧಾನಿ ಲಖನೌನಲ್ಲಿರುವ ಎಸ್ಪಿ ಕಚೇರಿಯಲ್ಲಿ ನಡೆದ ಸಭೆ
ಲಖನೌ(ಜೂ.16): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿರುವಾಗಲೇ, ಆಡಳಿತಾರೂಢ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಕಳೆದ ವರ್ಷವಷ್ಟೇ ಬಿಎಸ್ಪಿಯಿಂದ ಅಮಾನತು ಆಗಿದ್ದ ಐವರು ಸೇರಿದಂತೆ ಒಟ್ಟು 9 ಶಾಸಕರು ಸಮಾಜವಾದಿ ಪಕ್ಷ(ಎಸ್ಪಿ)ದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದಾರೆ. ಉತ್ತರ ಪ್ರದೇಶ ರಾಜಧಾನಿ ಲಖನೌನಲ್ಲಿರುವ ಎಸ್ಪಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಮಾತುಕತೆ ನಡೆದಿದ್ದು, ಈ ಎಲ್ಲಾ ಶಾಸಕರು ಸೈಕಲ್ ಪಕ್ಷಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ.
2017ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಪಿ 19 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಈ ಪೈಕಿ 11 ಶಾಸಕರನ್ನು ಬಿಎಸ್ಪಿ ಅಧಿನಾಯಕಿ ಮಾಯಾವತಿ ಅವರು ಉಚ್ಚಾಟನೆ ಮಾಡಿದ್ದಾರೆ. ಇನ್ನು ಓರ್ವ ಶಾಸಕ ಲೋಕಸಭೆ ಪ್ರವೇಶಿಸಿದ್ದಾರೆ. ಹೀಗಾಗಿ ಬಿಎಸ್ಪಿಯ ಶಾಸಕರ ಸಂಖ್ಯಾಬಲ ಕೇವಲ 7ಕ್ಕೆ ಸೀಮಿತವಾಗಿದೆ