ಲಾಲೂ ಪ್ರಸಾದ್ ಯಾದವ್ ಗೆ ತೀವ್ರ ಅನಾರೋಗ್ಯ, ದೆಹಲಿ ಏಮ್ಸ್ ಗೆ ವರ್ಗಾವಣೆ
ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್
ಮೇವು ಹಗರಣದಲ್ಲಿ ಅಪರಾಧಿಯಾಗಿ ಜೈಲು ಶಿಕ್ಷೆಯಲ್ಲಿರುವ ಲಾಲೂ ಪ್ರಸಾದ್
ಹೃದಯ ಹಾಗೂ ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ಲಾಲೂ ಪ್ರಸಾದ್
ರಾಂಚಿ (ಮಾ.22): ರಾಷ್ಟ್ರೀಯ ಜನತಾ ದಳ (ಆರ್ಜೆಡಿ) (RJD)ನಾಯಕ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ನಿಂದ ದೆಹಲಿಯ ಏಮ್ಸ್ಗೆ (Dehli AIIMS) ವರ್ಗಾವಣೆ ಮಾಡಲಾಗಿದೆ
"ಅವರಿಗೆ ಹೃದಯ ಮತ್ತು ಮೂತ್ರಪಿಂಡದಲ್ಲಿ ಸಮಸ್ಯೆ ಇರುವುದು ಕಂಡುಬಂದಿದೆ. ಉತ್ತಮ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ಗೆ ಕಳುಹಿಸಲಾಗುತ್ತಿದೆ. ಜೈಲಿನ ಅಧಿಕಾರಿಗಳು ನಿರ್ಧಾರದ ಬಳಿಕ ಅವರನ್ನು ವರ್ಗಾವಣೆ ಮಾಡಲಾಗಿದೆ " ಎಂದು ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (RIMS) ನಿರ್ದೇಶಕ ಕಾಮೇಶ್ವರ ಪ್ರಸಾದ್ ಹೇಳಿದ್ದಾರೆ.ಜಾರ್ಖಂಡ್ ಹೈಕೋರ್ಟ್ (Jarkhand High Court) ಮಾರ್ಚ್ 11 ರಂದು ಮೇವು ಹಗರಣ (Fodder Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದವ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 1 ರವರೆಗೆ ಮುಂದೂಡಿಕೆ ಮಾಡಿದೆ.
ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಐದನೇ ಮೇವು ಹಗರಣ ಪ್ರಕರಣದಲ್ಲಿ ಯಾದವ್ಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ₹ 60 ಲಕ್ಷ ದಂಡ ವಿಧಿಸಿತ್ತು. ಫೆಬ್ರವರಿ 15 ರಂದು ಮೇವು ಹಗರಣದ ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ಘೋಷಿಸಲಾಗಿತ್ತು. ಜಾರ್ಖಂಡ್ನ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು, ಡೊರಾಂಡಾ ಖಜಾನೆಯಿಂದ ₹ 139.35 ಕೋಟಿ ಅಕ್ರಮ ಹಿಂಪಡೆದಿದ್ದಕ್ಕಾಗಿ ಅವರನ್ನು ತಪ್ಪಿತಸ್ಥರು ಎಂದು ಘೋಷಣೆ ಮಾಡಿದೆ.
₹ 950 ಕೋಟಿ ಮೇವು ಹಗರಣ (ಐದು ಮೇವು ಹಗರಣಗಳ ಒಟ್ಟು ಹಗರಣ, ಲಾಲು ತಪ್ಪಿತಸ್ಥರೆಂದು ಸಾಬೀತಾಗಿದೆ) ಅವಿಭಜಿತ ಬಿಹಾರದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಸಾರ್ವಜನಿಕ ಹಣವನ್ನು ವಂಚನೆಯಿಂದ ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದೆ. ಜನವರಿ 1996 ರಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಚೈಬಾಸಾ ಉಪ ಆಯುಕ್ತ ಅಮಿತ್ ಖರೆ ನಡೆಸಿದ ದಾಳಿಯ ನಂತರ ಹಗರಣ ಬೆಳಕಿಗೆ ಬಂದಿತ್ತು.
ಪ್ರಕರಣದ ತನಿಖೆಗೆ ಹೆಚ್ಚಿನ ಒತ್ತಡದ ನಂತರ ಮಾರ್ಚ್ 1996 ರಲ್ಲಿ ಸಿಬಿಐ ಪಾಟ್ನಾ ಹೈಕೋರ್ಟ್ನಿಂದ ಈ ಪ್ರಕರಣವನ್ನು ಪಡೆದುಕೊಂಡು ತನಿಖೆ ನಡೆಸಿತ್ತು. ಬಿಹಾರ ಇನ್ನೂ ಅವಿಭಜಿತವಾಗಿದ್ದ ಸಮಯದಲ್ಲಿ ಸಿಬಿಐ ಈ ಪ್ರಕರಣದಲ್ಲಿ ಎಫ್ಐಆರ್ ಅನ್ನೂ ದಾಖಲು ಮಾಡಿತ್ತು. ಜೂನ್ 1997 ರಲ್ಲಿ, ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್ನಲ್ಲಿ ಲಾಲೂ ಪ್ರಸಾದ್ ಯಾದವ್ ಅವರನ್ನು ಮೊದಲ ಬಾರಿಗೆ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿತ್ತು.
ದುಮ್ಕಾ ಹಗರಣದಲ್ಲಿ ಲಾಲೂಗೆ ಜಾಮೀನು: ಶೀಘ್ರ ಬಿಡುಗಡೆ!
ಕಳೆದ ವರ್ಷ ಕೂಡ ಲಾಲೂ ಪ್ರಸಾದ್ ಯಾದವ್ ತೀವ್ರ ಅನಾರೋಗ್ಯದ ಕಾರಣದ ನೀಡಿ ದೆಹಲಿ ಏಮ್ಸ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಇತ್ತಿಚಿನ ದಿನಗಳಲ್ಲಿ ಅವರು ಜೈಲಿಗಿಂತ ಹೆಚ್ಚಾಗಿ ಆಸ್ಪತ್ರಯಲ್ಲಿಯೇ ದಿನಗಳನ್ನು ಕಳೆಯುತ್ತಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ಬಹುತೇಕ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಪ್ರಸಾದ್ ಯಾದವ್ ಕಳೆದ ವರ್ಷ ಉಸಿರಾಟದ ಕಾರಣ ನೀಡಿದ ದೆಹಲಿಗೆ ತೆರಳಿದ್ದರು. ‘ತೀವ್ರ ಅನಾರೋಗ್ಯ ಹಾಗೂ ವಯಸ್ಸಿನ ಹಿನ್ನೆಲೆಯಲ್ಲಿ ವೈದ್ಯರ ಶಿಫಾರಸಿನ ಮೇರೆಗೆ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ಲಾಲು ಅವರನ್ನು ಸ್ಥಳಾಂತರಿಸಲು ನಿರ್ಧರಿಸಲಾಯಿತು’ ಎಂದು ರಿಮ್ಸ್ ನಿರ್ದೇಶಕ ಡಾ| ಮಲೇಶ್ವರ ಪ್ರಸಾದ್ ಹೇಳಿದ್ದರು.
ಕೇವಲ ಕಿಡ್ನಿ 25% ಕಾರ್ಯ ನಿರ್ವಹಿಸುತ್ತೆ, ಲಾಲೂ ಆರೋಗ್ಯ ಯಾವಾಗ ಬೇಕಾದ್ರೂ ಕೈಕೊಡಬಹುದು!
'ಲಾಲೂರವರ ಕಿಡ್ನಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುವುದು ನಿಜ. ಕೇವಲ ಶೇ. 25ರಷ್ಟು ಕಾರ್ಯ ನಿರ್ವಹಿಸುತ್ತದೆ. ಹೀಗಿರುವಾಗ ಅವರ ಆರೋಗ್ಯ ಯಾವಾಗ ಬೇಕಾದರೂ ಹದಗೆಡಬಹುದು. ನಿಖರವಾಗಿ ಯಾವಾಗ ಎಂದು ಹೇಳುವುದು ಅಸಾಧ್ಯ. ಕಳೆದ ಇಪ್ಪತ್ತು ವರ್ಷಗಳಿಂದ ಲಾಳುರವರು ಮಧುಮೇಹ ರೋಗದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರ ಕಿಡ್ನಿಯೂ ಡ್ಯಾಮೇಜ್ ಆಗುತ್ತಿದೆ. ಹೀಗಾಗಿ ಈ ಸಮಯ ಎಚ್ಚರಿಕೆ ಕರೆಗಂಟೆ ಎನ್ನಬಹುದು. ಹೀಗಾಗಿ ಮೆಡಿಕಲ್ ಎಮರ್ಜೆನ್ಸಿ ಯಾವಾಗ ಬೇಕಾದರೂ ಎದುರಾಗಬಹುದು' ಎಂದು ರಿಮ್ಸ್ ವೈದ್ಯರು ಈಗಾಗಲೇ ತಿಳಿಸಿದ್ದಾರೆ.