Tha Kashmir Files ಚಿತ್ರ ಪ್ರದರ್ಶನಕ್ಕೆ ವಿರೋಧ, ರಾಜಸ್ಥಾನದ ಕೋಟಾದಲ್ಲಿ144 ಸೆಕ್ಷನ್ ಜಾರಿ!
- ಕಾಶ್ಮೀರ ಪಂಡಿತರ ನರಮೇಧ ಕುರಿತು ಚಿತ್ರ ದಿ ಕಾಶ್ಮೀರ ಫೈಲ್ಸ್
- ದೇಶಾದ್ಯಂತ ಅದ್ಬುತ ಯಶಸ್ಸು ಕಂಡಿರುವ ಚಿತ್ರ
- ರಾಜಸ್ಥಾನದ ಕೋಟಾದಲ್ಲಿ 144 ಸಕ್ಷೆನ್ ಜಾರಿ
ರಾಜಸ್ಥಾನ(ಮಾ.21): ಕಾಶ್ಮೀರ ಪಂಡಿತರ ನರಮೇಧ ಕುರಿತ ಬಾಲಿವುಡ್ ಚಿತ್ರ ದಿ ಕಾಶ್ಮೀರ್ ಫೈಲ್ಸ್ ದೇಶಾದ್ಯಂತ ಅತ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 1990ರಲ್ಲಿ ಕಣಿವೆ ರಾಜ್ಯದಲ್ಲಿ ನಡೆದ ಘನಘೋರ ಘಟನೆ ವಿವರಿಸುವ ಈ ಚಿತ್ರ ರಾಜಕೀಯ ಬಡಿದಾಟಕ್ಕೂ ಕಾರಣವಾಗಿದೆ. ಬಿಜೆಪಿ ಆಡಳಿತ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಇದೀಗ ಕಾಂಗ್ರೆಸ್ ಆಡಳಿತದ ರಾಜಸ್ಥಾದಲ್ಲಿ ಚಿತ್ರ ಪ್ರದರ್ಶನದಿಂದ ಎದ್ದಿರುವ ಕಾನೂನು ಸುವ್ಯವಸ್ಥೆ ಪಾಲನೆಗೆ ಇದೀಗ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ದಿ ಕಾಶ್ಮೀರ ಫೈಲ್ಸ್ ಚಿತ್ರ ಪ್ರದರ್ಶನ ಅತ್ಯಂತ ಸವಾಲಾಗಿ ಪರಿಣಮಿಸಿದೆ. ಚಿತ್ರಮಂದಿರದಲ್ಲಿ ಕ್ಕಿಕ್ಕಿರಿದು ಜನ ತುಂಬುತ್ತಿದ್ದಾರೆ. ಇತ್ತ ಚಿತ್ರ ಪ್ರದರ್ಶನಕ್ಕೆ ವಿರೋಧಗಳು ವ್ಯಕ್ತವಾಗುತ್ತಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಪಾಲನೆಗೆ ಕೋಟಾ ಜಿಲ್ಲೆಯಲ್ಲಿ ಮಾರ್ಚ್ 22 ರಿಂದ ಎಪ್ರಿಲ್ 21 ರವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಕೋಟಾ ಜಿಲ್ಲಾಧಿಕಾರಿ ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಪಂಡಿತರನ್ನು ಕಗ್ಗೊಲೆ ಮಾಡಿದವನಿಗೆ ಹಸ್ತಲಾಘವ ಮಾಡಿದ್ದರು ಅಂದಿನ ಪ್ರಧಾನಿ..!
ಕಾಶ್ಮೀರ ಫೈಲ್ಸ್ ನಿಷೇಧಿಸಿ
ದೇಶದ ಹಿಂದೂ-ಮುಸ್ಲಿಮರಲ್ಲಿ ವೈಮನಸ್ಸು ಮೂಡಿಸುವ ಉದ್ದೇಶದಿಂದ ‘ದಿ ಕಾಶ್ಮೀರ ಫೈಲ್ಸ್’ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ‘ಹಿಂದೂ-ಮುಸ್ಲಿಂ ಗೆಳೆಯರ ಬಳಗ’ ಆರೋಪಿಸಿದೆ. ಕೂಡಲೇ ಈ ಸಿನಿಮಾವನ್ನು ನಿಷೇಧಿಸಬೇಕೆಂದು ಅದು ಆಗ್ರಹಿಸಿದೆ.ಬಳಗದ ಮುಖಂಡರಾದ ಅಷ್ಪಾಕ್ ಕುಮಟಾಕರ, ಪ್ರವೀಣ ಕಟ್ಟಿಜಂಟಿ ಪತ್ರಿಕಾಗೋಷ್ಠಿ ನಡೆಸಿ, ಈ ಚಿತ್ರವನ್ನು ನಿಷೇಧಿಸಲು ಆಗ್ರಹಿಸಿ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಚಿತ್ರದ ಮೂಲಕ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟು ಕೆಲಸ ನಡೆಯುತ್ತಿದೆ. ಈ ಹಿಂದೆ ಗುಜರಾತ್ನಲ್ಲಿ ಗೋದ್ರಾ ಹತ್ಯಾಕಾಂಡ, ಪಂಜಾಬ್ನಲ್ಲಿ ಸಿಖ್ ಹತ್ಯಾಕಾಂಡ ನಡೆದಿವೆ. ಅದೇ ರೀತಿಯಲ್ಲಿ ಆತಂಕವಾದಿಗಳು ಕಾಶ್ಮೀರದ ಪಂಡಿತರ ಮೇಲೆ ಕ್ರೌರ್ಯ ಮೆರೆದಿದ್ದಾರೆ. ಇದೀಗ ಈ ಚಿತ್ರದಿಂದ ಹಿಂದೂ-ಮುಸ್ಲಿಮರ ಮಧ್ಯೆ ವೈಮನಸ್ಸು ಉಂಟು ಮಾಡುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಆ ಘಟನೆಯಿಂದ ಪಾಠ ಕಲಿಯಬೇಕು. ಮುಂದೆ ಇಂತಹ ಘಟನೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.ರಾಜ್ಯ ಸರ್ಕಾರ ಚಿತ್ರದ ತೆರಿಗೆ ಕಡಿತಗೊಳಿಸುವುದು ಸರಿಯಲ್ಲ. ಕೇಂದ್ರ ಸಚಿವರು ಉಚಿತವಾಗಿ ಚಲನಚಿತ್ರ ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದೆಲ್ಲವನ್ನು ಬಿಜೆಪಿ ಚುನಾವಣಾ ಗಿಮಿಕ್ಗಾಗಿ ಮಾಡುತ್ತಿದೆ ಎಂದು ಟೀಕಿಸಿದರು.
ಸತ್ಯ ಮರೆ ಮಾಚಿ ಸುಳ್ಳಿನ ವೈಭವೀಕರಣ, ಕಾಶ್ಮೀರ ಫೈಲ್ಸ್ ಚಿತ್ರದ ವಿರುದ್ಧ ಓಮರ್ ಅಬ್ದುಲ್ಲಾ ಆಕ್ರೋಶ!
ಕಾಶ್ಮೀರ್ ಫೈಲ್ಸ್ ಡಬ್ಗೆ ಪ್ರಯತ್ನಿಸಿದ್ದೆ: ಬಿಸಿಪಾ
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ವಿವಿಧ ಭಾಷೆಗಳಿಗೆ ಡಬ್ಬಿಂಗ್ ಮಾಡುವ ವಿಚಾರದಲ್ಲಿ ನಾನೇ ಮುಂದಾಗಿದ್ದೆ. ಈ ಕುರಿತು ಮುಂಬೈನಲ್ಲಿರುವ ನಿರ್ಮಾಪಕರನ್ನು ಸಹ ಸಂಪರ್ಕ ಮಾಡಿದ್ದೆ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.ಬಾದಾಮಿಯಲ್ಲಿ ಭಾನುವಾರ ಮಾತನಾಡಿದ ಅವರು, ಚಿತ್ರದ ನಿರ್ಮಾಪಕರೇ ವಿವಿಧ ಭಾಷೆಗೆ ಡಬ್ಬಿಂಗ್ ಮಾಡಲು ಮುಂದಾಗಿರುವ ಮಾಹಿತಿ ಬಂತು ಎನ್ನುವ ಮೂಲಕ ತಾವು ಹಿಂದೆ ಸರಿದಿದ್ದಾಗಿ ಹೇಳಿದರು.
ಸಚಿವ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ನಿರ್ಧಾರ ಮುಖ್ಯಮಂತ್ರಿಗಳದ್ದಾಗಿದ್ದು, ಯಾವ ಸ್ಥಾನವನ್ನು ಯಾರಿಗೆ ನೀಡಬೇಕು ಎನ್ನುವುದು ಅವರ ವಿವೇಚನೆಗೆ ಬಿಟ್ಟಿರುವಂತಹದು. ಪಂಚರಾಜ್ಯ ಚುನಾವಣೆಯಲ್ಲಿನ ಫಲಿತಾಂಶದ ಪರಿಣಾಮ ಕರ್ನಾಟಕದಲ್ಲಿಯೂ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ಸಚಿವ ಬಿ.ಸಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.