Asianet Suvarna News Asianet Suvarna News

ಆದಿಪುರುಷ್‌ ನೋಡೋಕೆ ಗಂಡನ ಜೊತೆ ಥಿಯೇಟರ್‌ಗೆ ಬಂದ ಪತ್ನಿ, ಇಂಟರ್ವಲ್‌ ವೇಳೆ ಎಸ್ಕೇಪ್‌!

ಮದುವೆಯಾಗಿ ಏಳು ದಿನಗಳಷ್ಟೇ ಆಗಿತ್ತು. ಪತ್ನಿಯನ್ನು ಖುಷಿ ಪಡಿಸಲು ಗಂಡ ಆಕೆಯನ್ನು ಆದಿಪುರುಷ್‌ ಸಿನಿಮಾಗೆ ಕರ್ಕೊಂಡು ಹೋಗಿದ್ದ. ಆದರೆ, ಇಂಟರ್ವಲ್‌ ವೇಳೆ ಪಾಪ್‌ಕಾರ್ನ್‌ ತರೋಕೆ ಹೊರಗೆ ಹೋಗಿದ್ದ ಗಂಡ ವಾಪಾಸ್‌ ಬರುವಾಗ ಸೀಟ್‌ನಲ್ಲಿ ಪತ್ನಿ ಇದ್ದಿರಲಿಲ್ಲ.

Rajasthan Jaipur bride ran away adipurush Movie Intervel pink square mall san
Author
First Published Jul 4, 2023, 9:34 PM IST

ಜೈಪುರ (ಜು.4): ಮದುವೆಯಾಗಿ ಬರೀ ಏಳು ದಿನಗಳಾಗಿತ್ತಷ್ಟೇ. ಮದುವೆಯಾದ ದಿನದಿಂದಲೂ ಬೇಸರದಲ್ಲಿಯೇ ಇದ್ದ ಪತ್ನಿಯನ್ನು ಕಂಡು ಗಂಡನಿಗೂ ಬೇಜಾರಾಗಿತ್ತು. ಕೊನೆಗೆ ನಿರ್ಧಾರ ಮಾಡಿ ಒಂದು ದಿನ ಪತ್ನಿಯನ್ನು ಔಟಿಂಗ್‌ಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದ. ಆದರೆ, ಆತನ ಈ ತೀರ್ಮಾನವೇ ಮುಳುವಾಗಿದೆ. ಹೆಂಡತಿಯನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಿದ್ದ ಗಂಡ ಬಳಿಕ ಆಕೆಯ ಜೊತೆ ಆದಿಪುರುಷ್‌ ಸಿನಿಮಾ ವೀಕ್ಷಣೆಗೂ ಹೋಗಿದ್ದ. ಸಿನಿಮಾದಲ್ಲಿ ಇಂಟವರ್ಲ್‌ ಬಂದಾಗ, ಪಾಪ್‌ಕಾರ್ನ್‌ ಬೇಕು ಎಂದು ಪತ್ನಿ ಹೇಳಿದ್ದಳು. ಆತ ಪಾಪ್‌ಕಾರ್ನ್‌ ತೆಗೆದುಕೊಂಡು ಹೋದಾಗ, ಆಕೆ ನಾಪತ್ತೆ. ಆತನ ಸಿನಿಮಾವೂ ಬೇಡ, ಆತನೂ ಬೇಡ ಎಂದು ಪತ್ನಿ ಎಸ್ಕೇಪ್‌ ಆಗಿರುವ ಘಟನೆ ನಡೆದಿದೆ. ಈ ಕುರಿತಂತೆ ಜೈಪುರದ ಆದರ್ಶನ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿರುವ ವ್ಯಕ್ತಿಯನ್ನು ಸಿಕಾರ್‌ ಜಿಲ್ಲೆಯ ರಿಂಗಾಸ್‌ ಪ್ರದೇಶ ಕನಾರಾಮ್‌ ಎಂದು ಗುರುತಿಸಲಾಗಿದೆ. ನನ್ನ ಜೊತೆ ಸಿನಿಮಾ ನೋಡೋಕೆ ಬಂದಿದ್ದ ಪತ್ನಿ ರೇಖಾ ನಾಪತ್ತೆಯಾಗಿದ್ದಾಳೆ ಎಂದು ಆತ ದೂರು ದಾಖಲು ಮಾಡಿದ್ದಾನೆ. ಜೈಪುರ ಬಸ್‌ಸ್ಟ್ಯಾಂಡ್‌ನಲ್ಲಿ ದೆಹಲಿ ಬಸ್‌ ಹತ್ತುವಾಗ ಕೊನೆಯ ಬಾರಿಗೆ ಪತ್ನಿಯನ್ನು ನೋಡಿದ್ದಾಗಿ ಆತ ಹೇಳಿದ್ದಾನೆ.

ಕನರಾಮ್ ರಿಂಗಾಸ್ ಪ್ರದೇಶದ ನಿವಾಸಿ ಎಂದು ಆದರ್ಶ್ ನಗರ ಪೊಲೀಸರು ತಿಳಿಸಿದ್ದಾರೆ. ರಿಂಗಾಸ್ ಪ್ರದೇಶವು ಜೈಪುರದ ಆದರ್ಶ ನಗರ ಪ್ರದೇಶದಿಂದ ಸುಮಾರು 100 ಕಿಮೀ ದೂರದಲ್ಲಿದೆ. ಕೆಲ ದಿನಗಳಿಂದ ಕನರಾಮ್‌ ಮತ್ತು ಅವರ ಪತ್ನಿ ನಡುವೆ ವೈಮನಸ್ಯ ನಡೆಯುತ್ತಿತ್ತು. ತನ್ನ ಹೆಂಡತಿಯನ್ನು ಸಂತೋಷಪಡಿಸುವ ಮತ್ತು ಅವಳನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗುವ ನೆಪದಲ್ಲಿ ಜೈಪುರಕ್ಕೆ ಕರೆತಂದಿದ್ದ. ಜೈಪುರದಲ್ಲಿ ಶಾಪಿಂಗ್ ಮಾಡಿದ ಬಳಿಕ, ರೆಸ್ಟೋರೆಂಟ್‌ನಲ್ಲಿ ಊಟವನ್ನೂ ಮಾಡಿದ್ದರು. ಆ ಬಳಿಕ ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿಂಕ್ ಸ್ಕ್ವೇರ್ ಮಾಲ್‌ನಲ್ಲಿ ಆಕೆಯೊಂದಿಗೆ ಆದಿಪುರುಷ್‌ ಸಿನಿಮಾ ವೀಕ್ಷಣೆಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಮಾಲ್‌ನಲ್ಲಿ ಮಧ್ಯಾಹ್ನದ ಶೋ ನೋಡಲು ಪತಿ-ಪತ್ನಿ ಇಬ್ಬರೂ ಥಿಯೇಟರ್‌ಗೆ ಹೋಗಿದ್ದರು. ಇಂಟರ್ವಲ್‌ ವೇಳೆ, ನೀರು ಹಾಗೂ ಪಾಪ್‌ಕಾರ್ನ್‌ ಬೇಕು ಎಂದು ರೇಖಾ ತನ್ನ ಗಂಡನಿಗೆ ತಿಳಿಸಿದ್ದಳು. ಈ ವೇಳೆ ಕನರಾಮ್‌ ಆಕೆಯನ್ನು ಅಲ್ಲಿಯೇ ಬಿಟ್ಟು ನೀರು ಹಾಗೂ ಪಾಪ್‌ಕಾರ್ನ್‌ ತರಲು ಹೋಗಿದ್ದ. ವಾಪಾಸ್‌ ಬರುವಷ್ಟರಲ್ಲಿ ರೇಖಾ ನಾಪತ್ತೆಯಾಗಿದ್ದಳು. ಪತ್ನಿ ಇದ್ದ ಸೀಟು ಖಾಲಿ ಇದ್ದದ್ದನ್ನು ನೋಡಿದ ಆತ ಅಕ್ಕ-ಪಕ್ಕದವರಲ್ಲಿ ವಿಚಾರಿಸಿದ್ದಾನೆ. ಈ ವೇಳೆ ಕೆಲವರು ಆಕೆ ಹೊರಗೆ ಹೋಗಿದ್ದಾಳೆ ಎಂದಿದ್ದಾರೆ. ಬಳಿಕ ಸಿನಿಮಾ ಹಾಲ್‌ನಲ್ಲಿನ ಎಲ್ಲಾ ವಾಶ್‌ರೂಮ್‌ಗಳನ್ನು ತಡಕಾಡಿದ್ದಾನೆ. ಆ ಬಳಿಕ ಒಬ್ಬ ವ್ಯಕ್ತಿ, ಹೆಂಗಸೊಬ್ಬರು ಥಿಯೇಟರ್‌ನಿಂದ ಹೊರಹೋಗುತ್ತಿದ್ದದ್ದನ್ನು ನೋಡಿದ್ದಾಗಿ ಕನರಾಮ್‌ಗೆ ತಿಳಿಸಿದ್ದಾರೆ.

ತಕ್ಷಣವೇ ಮಾಲ್‌ನಿಂದ ಹೊರಗೆ ಓಡಿ ಬಂದಿದ್ದ ಕನರಾಮ್‌, ಟ್ರಾನ್ಸ್‌ಪೋರ್ಟ್‌ ನಗರ ಬಸ್‌ ನಿಲ್ದಾಣಕ್ಕೆ ಬಂದಿದ್ದ. ಅಲ್ಲಿಂದ ದೆಹಲಿ, ಹರಿಯಾಣ ಸೇರಿದಂತೆ ಇತರ ರಾಜ್ಯಗಳಿಗೆ ಬಸ್‌ಗಳು ಆಗಮಿಸುತ್ತವೆ. ಇದೇ ವೇಳೆ ತನ್ನ ಪತ್ನಿ ದೆಹಲಿಗೆ ಹೋಗುವ ಬಸ್‌ನಲ್ಲಿ ಹೋಗುತ್ತಿರುವುದನ್ನು ನೋಡಿದ್ದಾಗಿ ಕನರಾಮ್‌ ಪೊಲೀಸರಿಗೆ ತಿಳಿಸಿದ್ದಾರೆ. ಬಸ್‌ ಅನ್ನು ನಿಲ್ಲಿಸಲು ಶ್ರಮ ಪಟ್ಟೆಯಾದರೂ, ಬಸ್‌ ಅದಾಗಲೇ ವೇಗ ಪಡೆದುಕೊಂಡಿದ್ದರಿಂದ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾನೆ. 

ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ವಿಚ್ಛೇದನ

ಈ ಕುರಿತಾಗಿ ಆ ಆದರ್ಶನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿ ಪೋನ್‌ ಕೂಡ ಸ್ವಿಚ್‌ ಆಫ್‌ ಆಗಿರುವುದಾಗಿ ತಿಳಿಸಿದ್ದಾನೆ. ಪತ್ನಿಯ ಬಗ್ಗೆ ಪೊಲೀಸರು ಮಾಹಿತಿ ಕೇಳಿದಾಗ, ಆಕೆ ಜೈಪುರದ ಶಹಪುರ ಪ್ರದೇಶದವರು ಎಂದು ತಿಳಿದುಬಂದಿದೆ. ಜೂನ್‌ 25 ರಂದು ಇವರಿಬ್ಬರ ಮದುವೆ ಆಗಿತ್ತಾದರೂ, ಮದುವೆಯ ಬಗ್ಗೆ ರೇಖಾಗೆ ಸಮ್ಮತವಿರಲಿಲ್ಲ ಎನ್ನುವುದು ತಿಳಿದುಬಂದಿದೆ.

ಮಾನಸಿಕ ಅಸ್ವಸ್ಥನ ಮುಖದ ಮೇಲೆ ಮೂತ್ರ ಮಾಡಿದ ಬಿಜೆಪಿ ಕಾರ್ಯಕರ್ತ!

Follow Us:
Download App:
  • android
  • ios