ಮೇಘಾಲಯದಲ್ಲಿ ನಡೆದ ಮಧುಚಂದ್ರದ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಕೊಲೆಗೆ ಬಳಸಿದ ಮಚ್ಚು ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ. 

ಗುವಾಹಟಿ: ಮೇಘಾಲಯದಲ್ಲಿ ಮಧುಚಂದ್ರಕ್ಕೆ ಪತಿಯ ಕರೆದೊಯ್ದು, ಆತನನ್ನು ಪತ್ನಿಯೇ ಕೊಲೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯ ಲಭಿಸಿದ್ದು, ಕೊಲೆಗೆ ಬಳಸಿದ್ದ ಮಚ್ಚು ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ.

ಹತ್ಯೆಯ ರೂವಾರಿ ಸೋನಂಳ ಪ್ರಿಯಕರ ರಾಜ್‌, ಮೊದಲಿಗೆ ಈ ಮಚ್ಚು ಬಳಸಿ ಸೋನಂ ಪತಿ ರಾಜಾ ರಘುವಂಶಿ ಮೇಲೆ ಆಕ್ರಮಣ ಮಾಡಿದ್ದ. ಇದರಿಂದ ಪಾರಾಗಲು ರಘುವಂಶಿ ಯತ್ನಿಸಿದ್ದ. ಆದರೆ ಅದು ವಿಫಲವಾಗಿತ್ತು ಎಂದು ಮೂಲಗಳು ತಿಳಿಸಿವೆ. ಕೊಲೆಗೆ ಬಳಸಿದ ಮಚ್ಚನ್ನು ಅಸ್ಸಾಂನ ಗುವಾಹಟಿ ರೈಲು ನಿಲ್ದಾಣದ ಸಮೀಪ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮತ್ತೊಂದೆಡೆ ರಘುವಂಶಿ ಅವರ ಪೋಷಕರು ಸೋನಂಳ ಮನೆಯವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಕೊಲೆ ಹಿಂದೆ ಹಲವರ ಕೈವಾಡವಿರುವ ಶಂಕೆ ಇದೆ ಎಂದು ಹೇಳಿದ್ದಾರೆ.

ಮೊದಲ ಸಲ ಸೋನಂ ಮತ್ತು ಇತರ ನಾಲ್ವರು ಮದುವೆಗೂ 11 ದಿನಗಳ ಮುಂಚೆಯೇ ಇಂದೋರ್‌ನಲ್ಲಿ ಕೊಲ್ಲುವುದಕ್ಕೆ ಸಂಚು ರೂಪಿಸಿದ್ದರು. ಬಳಿಕ ಮದುವೆ ನಂತರ ಮೇ 19ರಂದು ಗುವಾಹಟಿಯಲ್ಲಿ ಮತ್ತೊಂದು ಸಂಚು ರೂಪುಗೊಂಡಿತ್ತು. ಆದರೆ ಅದು ಕೈಗೂಡಿರಲಿಲ್ಲ. ಅದಾದ ಬಳಿಕ ನೊಂಗ್ರಿಯಾಟ್‌ನಲ್ಲಿ ಸ್ಕೆಚ್‌ ಹಾಕಿದ್ದರು. ಅಲ್ಲಿಯೂ ರಘುವಂಶಿ ಬದುಕುಳಿದಿದ್ದ. ಅನಂತರ ಮಾವಲಕ್ಯಾತ್‌ ಮತ್ತು ವೈಸಾವ್ಡಾಂಗ್ ಬಳಿ ಎರಡು ವಿಫಲ ಪ್ರಯತ್ನಗಳು ನಡೆದಿದ್ದವು. ಆದರೆ ಕೊನೆಗೆ ವೈಸಾವ್ಡಾಂಗ್ ಜಲಪಾತದ ಬಳಿ ರಘುವಂಶಿಯನ್ನು ಮುಗಿಸುವಲ್ಲಿ ಸಫಲರಾಗಿದ್ದರು. ಎನ್ನುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

ಸೋನಂ ಸತ್ತಿದಾಳೆಂದು ಬಿಂಬಿಸಲು ಪ್ಲ್ಯಾನ್‌

ಪಕ್ಕಾ ಕ್ರಿಮಿನಲ್‌ಗಳಂತೆ ಕಥೆ ಸೃಷ್ಟಿಸಿದ್ದ ಈ ಗ್ಯಾಂಗ್ ಸೋನಂ ಕೂಡ ಸತ್ತು ಹೋಗಿದ್ದಾಳೆಂದು ಬಿಂಬಿಸಲು ಎರಡು ರೀತಿಯಲ್ಲಿ ಸಂಚು ರೂಪಿಸಿದ್ದರು. ಒಂದು ಆಕೆ ನದಿಗೆ ಬಿದ್ದು ಸತ್ತಿದ್ದಾಳೆಂದು ಎಂದು ಬಿಂಬಿಸುವ ಕಾರಣಕ್ಕೆ ನದಿ ಆಕೆಯ ಸ್ಕೂಟಿ ಬಿಡುವ ಪ್ರಯತ್ನ. ಮತ್ತೊಂದು ಸಂಚಿನಲ್ಲಿ ಯಾವುದೋ ಮಹಿಳೆಯನ್ಜು ಕೊಲೆ ಮಾಡಿ ಅಕೆಯ ದೇಹವನ್ನು ಸುಟ್ಟಿ ಅದು ಸೋಂನಂ ಎಂದು ಬಿಂಬಿಸುವ ತಂತ್ರ. ಅದರಿಂದ ಎಲ್ಲರೂ ಆಕೆಯ ಸತ್ತು ಹೋಗಿದ್ದಾರೆ ಎಂದು ಬಿಂಬಿಸಿ, ಸೋನಂ ತಲೆ ಮರೆಸಿಕೊಳ್ಳುವ ತಂತ್ರ ಅವರದ್ದಾಗಿತ್ತು. ಆದರೆ ಅಷ್ಟರೊಳಗೆ ಮೇಘಾಲಯ ಪೊಲೀಸರು ಪ್ರಕರಣ ಬೇಧಿಸಿದ್ದರು.