ಆಪರೇಷನ್ ಸಿಂದೂರದ ವೇಳೆ ಭಾರತ ಕಳೆದುಕೊಂಡ ವಿಮಾನಗಳ ಲೆಕ್ಕವನ್ನು ಕೇಂದ್ರ ಸರ್ಕಾರ ನೀಡಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ನವದೆಹಲಿ: ವೈಮಾನಿಕ ದಾಳಿಯ ಕುರಿತು ಪಾಕಿಸ್ತಾನಕ್ಕೆ ಮೊದಲೇ ಮಾಹಿತಿ ನೀಡಿದ ಕಾರಣ, ಆಪರೇಷನ್ ಸಿಂದೂರ ವೇಳೆ ಭಾರತದ ಕಳೆದುಕೊಂಡಿರುವ ವಿಮಾನಗಳ ಲೆಕ್ಕವನ್ನು ಕೇಂದ್ರ ಸರ್ಕಾರ ನೀಡಬೇಕು. ಸಂಖ್ಯೆಯ ವಿಚಾರದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೌನ ವಹಿಸಿರುವುದು ಶಾಪವಿದ್ದಂತೆ. ಕೂಡಲೇ ಅವರು ಧ್ವಂಸಗೊಂಡ ಭಾರತದ ವಿಮಾನಗಳ ಲೆಕ್ಕ ನೀಡಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಜೈಶಂಕರ್ ಅವರ ಮೌನ ಶಾಪವಿದ್ದಂತೆ. ನಾನು ಮತ್ತೊಮ್ಮೆ ಕೇಳುವುದಕ್ಕೆ ಬಯಸುತ್ತೇನೆ, ಆಪರೇಷನ್ ಸಿಂದೂರದ ವೇಳೆ ಭಾರತ ಎಷ್ಟು ವಿಮಾನಗಳನ್ನು ಕಳೆದುಕೊಂಡಿದೆ? ಇದು ಲೋಪವಲ್ಲ. ಅಪರಾಧ. ರಾಷ್ಟ್ರಕ್ಕೆ ಸತ್ಯ ತಿಳಿಯಬೇಕು ಎಂದಿದ್ದಾರೆ. ಇದಕ್ಕೂ ಮುನ್ನ ಜೈಶಂಕರ್ ನೀಡಿದ್ದರು ಎನ್ನಲಾದ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ್ದ ರಾಹುಲ್, ದಾಳಿಗೆ ಮುಂಚೆ ಭಾರತವು ಪಾಕ್ಗೆ ದಾಳಿ ನಡೆಸುವ ಮಾಹಿತಿ ನೀಡಿತ್ತು ಎಂದಿದ್ದರು. ಆದರೆ ವಿದೇಶಾಂಗ ಸಚಿವಾಲಯವು, ಅದು ಮಾಹಿತಿಯಲ್ಲ. ಎಚ್ಚರಿಕೆಯಾಗಿತ್ತು ಎಂದಿತ್ತು.
ಪಾಕ್ ಭಾಷೆಯಲ್ಲಿ ರಾಹುಲ್ ನುಡಿ:
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಕಿಡಿ ಕಾರಿದ್ದು, ಪಾಕಿಸ್ತಾನಿ ಭಾಷೆಯಲ್ಲಿ ರಾಹುಲ್ ಮಾತನಾಡುತ್ತಿದ್ದಾರೆ. ಜೈ ಶಂಕರ್ ವಿರುದ್ಧ ರಾಹುಲ್ ಗಾಂಧಿ ಸುಮ್ಮನೆ ಆರೋಪಿಸುತ್ತಿದ್ದಾರೆ, ಸಚಿವರು ಸದ್ಯ ವಿದೇಶದಲ್ಲಿದ್ದು, ಅವರು ಉತ್ತರ ನೀಡಲು ಹೇಗೆ ಸಾಧ್ಯ? ರಾಹುಲ್ ಕಾಟಾಚಾರಕ್ಕೆ ಈ ಹೇಳಿಕೆ ನೀಡುತ್ತಿದ್ದಾರೆ ಎಂದಿದೆ
ಬಾಲಿವುಡ್ ನಟಿ ಶಿಲ್ಪಾ ಶಿರೋಡ್ಕರ್ಗೆ ಕೋವಿಡ್
ನವದೆಹಲಿ: ಬಾಲಿವುಡ್ ನಟಿ ಶಿಲ್ಪಾ ಶಿರೋಡ್ಕರ್ ಅವರಿಗೆ ಸೋಮವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮಾಹಿತಿಯನ್ನು ಶಿಲ್ಪಾ ಖುದ್ದು ಬಹಿರಂಗಪಡಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಿರುವ ಶಿಲ್ಪಾ, ‘ನನಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ದಯವಿಟ್ಟು ಎಲ್ಲರೂ ಮಾಸ್ಕ್ ಧರಿಸಿ, ಸುರಕ್ಷಿತರಾಗಿರಿ’ ಎಂದು ಬರೆದುಕೊಂಡಿದ್ದಾರೆ. ಶೀಘ್ರ ಗುಣಮುಖರಾಗುವಂತೆ ನಟಿ ಸೋನಾಕ್ಷಿ ಸಿನ್ಹಾ ಸೇರಿದಂತೆ ಅನೇಕರು ಕಮೆಂಟ್ ಬರೆದಿದ್ದಾರೆ. ಶಿಲ್ಪಾ ಅವರು 1990ರಲ್ಲಿ ‘ಬೆವಫಾ ಸನಂ’, ‘ಖುದಾ ಗವಾಹ್’ ಮತ್ತು ‘ಗೋಪಿ ಕಿಶನ್’ ಚಿತ್ರಗಳ ಮೂಲಕ ಜನರಲ್ಲಿ ಮನೆಮಾತಾಗಿದ್ದು, ಹಿಂದಿಯ ಬಿಗ್ಬಾಸ್ ಶೋನ 18ನೇ ಆವೃತ್ತಿಯಲ್ಲಿಯೂ ಭಾಗವಹಿಸಿದ್ದರು.
ಭಾರತದಲ್ಲಿ ಕೊರೋನಾ ಆತಂಕವಿಲ್ಲ: ಕೇಂದ್ರ
ನವದೆಹಲಿ: ಹಾಂಕಾಂಗ್ ಹಾಗೂ ಸಿಂಗಾಪುರದಲ್ಲಿ ಕೊರೋನಾ ಪ್ರಕರಣ ಏರಿಕೆ ಕಂಡರೂ ಭಾರತದಲ್ಲಿ ಅಂಥ ಸ್ಥಿತಿ ಇಲ್ಲ. ಆತಂಕ ಬೇಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಡುವೆ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಸಂಭವಿಸಿದ 2 ಸಾವುಗಳಿಗೆ ಕೊರೋನಾ ಕಾರಣವಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದೇ ವೇಳೆ, ಮೇ 10 ಕ್ಕೆ ಕೊನೆಗೊಂಡ ವಾರದಲ್ಲಿ ಹಾಂಕಾಂಗ್ನಲ್ಲಿ 1,042 ಪ್ರಕರಣಗಳು ವರದಿಯಾಗಿವೆ. ಹಿಂದಿನ ವಾರದಲ್ಲಿ, ಪ್ರಕರಣಗಳ ಸಂಖ್ಯೆ 972 ಆಗಿತ್ತು. ಸಿಂಗಾಪುರದಲ್ಲೂ ಕೇಸುಗಳು ಕೊಂಚ ಏರಿಕೆ ಕಂಡಿವೆ.


