ಲಖೀಂಪುರ: ಮೃತ ರೈತನ ಕುಟುಂಬದವರ ಬಿಗಿದಪ್ಪಿ ಸಂತೈಸಿದ ರಾಹುಲ್, ಪ್ರಿಯಾಂಕಾ!
* ರೈತ ಸಂತ್ರಸ್ತರಿಗೆ ಪ್ರಿಯಾಂಕಾ, ರಾಹುಲ್ ಸಂತೈಕೆ
* ಲಖೀಂಪುರದ ಪಾಲಿಯಾ ಗ್ರಾಮದ ಮೃತ ರೈತನ ಮನೆಗೆ ಭೇಟಿ
* ರೈತನ ಕುಟುಂಬದವರ ಬಿಗಿದಪ್ಪಿ ಸಂತೈಕೆ
ಲಖೀಂಪುರ ಖೇರಿ(ಅ.07): ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ(Lakhimpur Kheri) ಇತ್ತೀಚೆಗೆ ರೈತರ ಮೇಲೆ ನಡೆದ ಹಿಂಸಾಚಾರ(Violence) ಪ್ರಕರಣದ ಸಂತ್ರಸ್ತ ಕುಟುಂಬಗಳನ್ನು ಬುಧವಾರ ರಾತ್ರಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ(Rahul gandhi) ಹಾಗೂ ಪ್ರಿಯಾಂಕಾ ಗಾಂಧಿ((Priyanka Gandhi) ಭೇಟಿಯಾಗಿ ಸಂತೈಸಿದರು.
ಪಾಲಿಯಾ ಗ್ರಾಮದ ಲವ್ಪ್ರೀತ್ ಸಿಂಗ್ ಎಂಬ ಮೃತ ರೈತನ ಮನೆಗೆ ಆಗಮಿಸಿದ ಉಭಯ ನಾಯಕರು ಸಂತಾಪ ಸೂಚಿಸಿದರು ಹಾಗೂ ಉಭಯ ನಾಯಕರು ಕುಟುಂಬಸ್ಥರನ್ನು ಬಿಗಿದಪ್ಪಿ ಸಾಂತ್ವನ ಹೇಳಿದರು ಹಾಗೂ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.
ಈ ವೇಳೆ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ, ಕಾಂಗ್ರೆಸ್ ನೇತಾರ ದೀಪೇಂದರ್ ಹೂಡಾ ಹಾಜರಿದ್ದರು.
ಭೇಟಿಗೂ ಮುನ್ನ ಹೈಡ್ರಾಮಾ:
ಬುಧವಾರ ಬೆಳಗ್ಗೆಯೇ ರಾಹುಲ್ ಗಾಂಧಿ ಅವರು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಹಾಗೂ ಉತ್ತರಾಖಂಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ಜತೆ ಲಖನೌಗೆ ಆಗಮಿಸಿದರು. ಮೊದಲು ಇವರ ಭೇಟಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿತ್ತಾದರೂ ನಂತರ ಒತ್ತಡಕ್ಕೆ ಮಣಿದು ಅನುಮತಿ ನೀಡಿತು. ಆದರೆ ಲಖನೌ ಏರ್ಪೋರ್ಟ್ನಲ್ಲಿ ಸರ್ಕಾರ ವಿಧಿಸಿದ ಷರತ್ತು ವಿವಾದಕ್ಕೆ ಕಾರಣವಾಯಿತು.
ವಿಮಾನ ನಿಲ್ದಾಣದಲ್ಲಿದ್ದ ಪೊಲೀಸರು ರಾಹುಲ್ ಅವರಿಗೆ ‘ಪೊಲೀಸ್ ವಾಹನದಲ್ಲಿ ಲಖೀಂಪುರಕ್ಕೆ ಭೇಟಿ ಕೊಡಬೇಕು. ಖಾಸಗಿ ವಾಹನ ಬಳಸಬೇಡಿ’ ಎಂದರು. ಇದರಿಂದ ಕೋಪಗೊಂಡ ರಾಹುಲ್, ‘ನನ್ನ ಪ್ರಯಾಣವನ್ನು ನಿರ್ಧರಿಸಲು ನೀವು ಯಾರು? ನಾನು ನನ್ನ ಕಾರಿನಲ್ಲಿಯೇ ಹೋಗಲು ಬಯಸುತ್ತೇನೆ’ ಎಂದು ಹೇಳಿ ಧರಣಿ ಕುಳಿತರು. ‘ಸ್ವಂತ ಕಾರಿನಲ್ಲಿ ಹೋಗಲು 20 ದಿನವಾದರೂ ಸರಿ, ಎಷ್ಟುದಿನವಾದರೂ ಸರಿ.. ವಿಮಾನ ನಿಲ್ದಾಣದಲ್ಲಿಯೇ ಕಾಯುವೆ’ ಎಂದು ಸವಾಲು ಹಾಕಿದರು. ಕೊನೆಗೆ ಸ್ವಂತ ವಾಹನದಲ್ಲಿ ಲಖೀಂಪುರಕ್ಕೆ ಭೇಟಿ ನೀಡಲು ರಾಹುಲ್ಗೆ ಪೊಲೀಸರು ಅನುಮತಿಸಿದರು.
ಬಂಧಮುಕ್ತ ಪ್ರಿಯಾಂಕಾ ಜತೆಗೆ ಲಖೀಂಪುರಕ್ಕೆ:
ಈ ನಡುವೆ, ಸೀತಾಪುರದಲ್ಲಿ ಬಂಧನದಲ್ಲಿದ್ದ ರಾಹುಲ್ ಗಾಂಧಿ ಸೋದರಿ ಪ್ರಿಯಾಂಕಾ ಅವರನ್ನು ಪೊಲೀಸರು ಬಂಧಮುಕ್ತಗೊಳಿಸಿದರು. ಮಾರ್ಗಮಧ್ಯೆ ರಾಹುಲ್ ಅವರು ಪ್ರಿಯಾಂಕಾ ಅವರನ್ನೂ ತಮ್ಮ ಜತೆಗೆ ಲಖೀಂಪುರಕ್ಕೆ ಕರೆದೊಯ್ದರು. ಬಳಿಕ ಪ್ರಿಯಾಂಕಾ ಹಾಗೂ ರಾಹುಲ್ ಅವರು ರಾತ್ರಿ ವೇಳೆ ಕೆಲವು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದರು. ಈ ವೇಳೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಹಾಗೂ ದೀಪೇಂದರ್ ಹೂಡಾ ಕೂಡ ಇದ್ದರು. ಇತ್ತೀಚೆಗೆ ನಡೆದ ಲಖೀಂಪುರ ಹಿಂಸೆಯಲ್ಲಿ ಒಬ್ಬ ಪತ್ರಕರ್ತ, 4 ರೈತರು ಸೇರಿ 8 ಮಂದಿ ಸಾವನ್ನಪ್ಪಿದ್ದರು.