ಬ್ರಿಟನ್ನ ತೀವ್ರವಾದಿ ಮುಸ್ಲಿಮರಿಂದ ಕಾಶ್ಮೀರ ಮೇಲೆ ದಾಳಿ: ಭಾರತಕ್ಕೆ ಬ್ರಿಟನ್ನಿಂದಲೇ ಎಚ್ಚರಿಕೆ..!
ಪಾಕಿಸ್ತಾನದ ಹೇಳಿಕೆಗಳು ಬ್ರಿಟನ್ ಮುಸ್ಲಿಂ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತಿದೆ. ಹೇಳಿಕೆಗಳು ಕಾಶ್ಮೀರಕ್ಕೆ ಸಂಬಂಧಿಸಿದ್ದವಾಗಿದ್ದು, ಭಾರತ ವಿರೋಧಿ ಭಾವನೆಯನ್ನು ಬೆಳೆಸಲು ಕಾರಣವಾಗುತ್ತಿದೆ’ ಎಂದು ತಿಳಿಸಲಾಗಿದೆ.
ಲಂಡನ್ (ಫೆಬ್ರವರಿ 11, 2023): ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬ್ರಿಟನ್ ಸರ್ಕಾರ ಎಚ್ಚರಿಕೆ ನೀಡಿದ್ದು, ‘ಬ್ರಿಟನ್ ಮುಸ್ಲಿಮರಲ್ಲಿ ಕಾಶ್ಮೀರ ಕುರಿತಂತೆ ಮೂಲಭೂತವಾದಿ ವಿಚಾರಗಳನ್ನು ತಲೆಗೆ ತುಂಬಲಾಗುತ್ತಿದೆ. ಇದಲ್ಲದೆ ಖಲಿಸ್ತಾನಿ ಪರ ಮೂಲಭೂತವಾದವೂ ದೇಶದಲ್ಲಿ ಬೆಳೆಯುತ್ತಿದೆ. ಈ ಬಗ್ಗೆ ಭಾರತ ಸರ್ಕಾರ ಹೆಚ್ಚು ಎಚ್ಚರಿಕೆ ವಹಿಸಬೇಕು ಹಾಗೂ ಉಗ್ರವಾದ ನಿಗ್ರಹ ನೀತಿಯಲ್ಲಿ ಸುಧಾರಣೆ ಮಾಡಿಕೊಳ್ಳಬೇಕು’ ಎಂದು ಹೇಳಿದೆ.
ಈ ವಾರ ಪ್ರಕಟವಾಗಿರುವ ಭಯೋತ್ಪಾದನೆ ಕುರಿತ ‘ಪ್ರಿವೆಂಟ್’ (ತಡೆ) ಎಂಬ ಕಾರ್ಯತಂತ್ರದ ವಿಮರ್ಶಾ ವರದಿಯಲ್ಲಿ, ‘ಪಾಕಿಸ್ತಾನದ ಹೇಳಿಕೆಗಳು ಬ್ರಿಟನ್ ಮುಸ್ಲಿಂ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತಿದೆ. ಹೇಳಿಕೆಗಳು ಕಾಶ್ಮೀರಕ್ಕೆ ಸಂಬಂಧಿಸಿದ್ದವಾಗಿದ್ದು, ಭಾರತ ವಿರೋಧಿ ಭಾವನೆಯನ್ನು ಬೆಳೆಸಲು ಕಾರಣವಾಗುತ್ತಿದೆ’ ಎಂದು ತಿಳಿಸಲಾಗಿದೆ.
‘ಬ್ರಿಟನ್ನಲ್ಲಿ ಅನುಯಾಯಿಗಳನ್ನು ಹೊಂದಿರುವ ಪಾಕಿಸ್ತಾನಿ ಧರ್ಮಗುರುಗಳು ಕಾಶ್ಮೀರದಲ್ಲಿ ಹಿಂಸಾಚಾರ ನಡೆಸಬೇಕು ಎಂದು ಕರೆ ನೀಡಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ.
ಅಲ್ಲದೆ, ಬ್ರಿಟನ್ನಲ್ಲಿ ಭಯೋತ್ಪಾದನೆ ಕೇಸಲ್ಲಿ ದೋಷಿಯಾದವರು ಕಾಶ್ಮೀರದಲ್ಲಿ ಚಟುವಟಿಕೆ ನಡೆಸಿದ್ದರು. ಅಲ್ ಖೈದಾಗೂ ಸೇರಿದ್ದರು ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
ಇದನ್ನು ಓದಿ: ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಪರ್ಫ್ಯೂಮ್ ಬಾಂಬ್ ಪತ್ತೆ: ಉಗ್ರನ ಬಳಿ ಇತ್ತು ಸುಗಂಧ ಬಾಟಲ್ ಬಾಂಬ್..!
ಖಲಿಸ್ತಾನಿ ಗುಂಪು ಸಕ್ರಿಯ:
‘ಬ್ರಿಟನ್ನಲ್ಲಿರುವ ಕೆಲವೇ ಕೆಲವು ಖಲಿಸ್ತಾನಿ ಪರ ಗುಂಪುಗಳು ಕೂಡ ಭಾರತದ ಬಗ್ಗೆ ಸುಳ್ಳು ನಿರೂಪಣೆಗಳನ್ನು ಮಾಡುತ್ತಿದ್ದು, ಅಂತೆ-ಕಂತೆಗಳನ್ನು ಹರಡುತ್ತಿವೆ. ಹಾಗಾಗಿ ಖಲಿಸ್ತಾನ್ ಪರ ಉಗ್ರವಾದದ ಬಗ್ಗೆಯೂ ಗಮನಹರಿಸಬೇಕು’ ಎಂದೂ ಎಚ್ಚರಿಸಲಾಗಿದೆ. ಖಲಿಸ್ತಾನಿಗಳು ಪಂಜಾಬನ್ನು ಪ್ರತ್ಯೇಕಿಸಿ ಖಲಿಸ್ತಾನ ರಾಷ್ಟ್ರ ಕಟ್ಟುವ ಚಿಂತನೆ ಹೊಂದಿದ್ದಾರೆ.
‘ನಾನು ಯುಕೆ ಉಗ್ರಗಾಮಿ ಗುಂಪುಗಳ ಪುರಾವೆಗಳನ್ನು ನೋಡಿದ್ದೇನೆ, ಹಾಗೆಯೇ ಬ್ರಿಟನ್ನಲ್ಲಿ ಅನುಯಾಯಿಗಳನ್ನು ಹೊಂದಿರುವ ಪಾಕಿಸ್ತಾನಿ ಧರ್ಮಗುರುಗಳು ಕಾಶ್ಮೀರದಲ್ಲಿ ಹಿಂಸಾಚಾರ ನಡೆಸಬೇಕು ಎಂದು ಕರೆ ನೀಡಿದ್ದಾರೆ’ ಎಂದ ವಿಮರ್ಶಾ ವರದಿಯಲ್ಲಿ ಲೇಖಕರೊಬ್ಬರು ಬರೆದಿದ್ದಾರೆ.
ಬ್ರಿಟನ್ ಸರ್ಕಾರದ ವರದಿಯಲ್ಲಿ ಏನಿದೆ..?
- ಬ್ರಿಟನ್ನಲ್ಲಿರುವ ಮುಸ್ಲಿಮರಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಭಾವನೆ
- ಪಾಕಿಸ್ತಾನದ ಹೇಳಿಕೆಗಳಿಂದ ಬ್ರಿಟನ್ನಿನ ಕಟ್ಟರ್ ಮುಸ್ಲಿಮರ ಮೇಲೆ ಪ್ರಭಾವ
- ಕಾಶ್ಮೀರದಲ್ಲಿ ಹಿಂಸಾಚಾರ ನಡೆಸಲು ಪಾಕ್ ಧರ್ಮಗುರುಗಳಿಂದ ಸೂಚನೆ
- ಹೀಗಾಗಿ ಕಾಶ್ಮೀರದ ಕುರಿತಂತೆ ಬ್ರಿಟಿಷ್ ಮುಸ್ಲಿಮರಲ್ಲಿ ತೀವ್ರವಾದಿ ಚಿಂತನೆ
- ಭಾರತ ತನ್ನ ಭಯೋತ್ಪಾದನೆ ನಿಗ್ರಹ ನೀತಿಯಲ್ಲಿ ಬದಲಾವಣೆ ತರಬೇಕು
- ಬ್ರಿಟನ್ ಕೂಡ ಉಗ್ರ ನಿಗ್ರಹ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು
- ಬ್ರಿಟನ್ ಸರ್ಕಾರದ ‘ಪ್ರಿವೆಂಟ್’ ವಿಭಾಗದ ವರದಿಯಲ್ಲಿ ಎಚ್ಚರಿಕೆ ಸಂದೇಶ
- ಬ್ರಿಟನ್ನಿನಲ್ಲಿ ಭಾರತದ ವಿರುದ್ಧ ಖಲಿಸ್ತಾನಿ ಮೂಲಭೂತವಾದ ಕೂಡ ಹೆಚ್ಚಳ
ಇದನ್ನೂ ಓದಿ: ಕಾಶ್ಮೀರಕ್ಕೆ ಕಾಲಿಟ್ಟರೆ ಗ್ರೆನೇಡ್ ದಾಳಿಯ ಎಚ್ಚರಿಕೆ ಇತ್ತು; ಆದರೂ ಹೆದರಲಿಲ್ಲ: ರಾಹುಲ್ ಗಾಂಧಿ