* ಕಳೆದ ತಿಂಗಳು ಹರ್ಯಾಣದಲ್ಲಿ ನಡೆದ ಪೊಲೀಸ್‌ ಮತ್ತು ರೈತರ ನಡುವೆ ನಡೆದ ಸಂಘರ್ಷ* ಕರ್ನಾಲ್‌ ಡೀಸಿಗೆ ಕಡ್ಡಾಯ ರಜೆ: ರೈತ ಪ್ರತಿಭಟನೆ ಅಂತ್ಯ

ಕರ್ನಾಲ್‌(ಸೆ.12): ಕಳೆದ ತಿಂಗಳು ಹರ್ಯಾಣದಲ್ಲಿ ನಡೆದ ಪೊಲೀಸ್‌ ಮತ್ತು ರೈತರ ನಡುವೆ ನಡೆದ ಸಂಘರ್ಷವನ್ನು ನ್ಯಾಯಾಂಗ ತನಿಖೆ ನಡೆಸಲು ಸರ್ಕಾ​ರ ಆದೇಶಿಸಿದೆ. ಜೊತೆಗೆ ರೈತರ ಮೇಲೆ ಲಾಠಿಚಾರ್ಜ್‌ಗೆ ಆದೇಶಿಸಿದ್ದ ಐಎಎಸ್‌ ಅಧಿಕಾರಿಯನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಹಾಗಾಗಿ ಕರ್ನಾಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.

ಜಿಲ್ಲಾ​ಧಿ​ಕಾ​ರಿ ಆಯುಷ್‌ ಸಿನ್ಹಾ ರೈತರ ಮೇಲೆ ಲಾಠಿ ಪ್ರಹಾರ ನಡೆಸುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ಅವರನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ರೈತರು ಕರ್ನಾಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಪ್ರತಿ​ಭ​ಟ​ನೆಗೆ ಸರ್ಕಾರ ಮಣಿ​ದಿದ್ದು, ‘ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈ ತನಿಖೆ ನಡೆಯಲಿದೆ. ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ ಅಲ್ಲಿ​ಯ​ವ​ರೆಗೆ ಸಿನ್ಹಾ ರಜೆಯಲ್ಲಿ ಇರಲಿದ್ದಾರೆ’ ಎಂದು ಹರ್ಯಾಣ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಂದ್ರ ಸಿಂಗ್‌ ಹೇಳಿದ್ದಾರೆ. ನಂತರ ರೈತ ನಾಯಕ ಗುರ್‌ನಾಮ್‌ ಸಿಂಗ್‌ ಚೌದಾನಿ ಪ್ರತಿಭಟನೆ ಅಂತ್ಯಗೊಳಿಸುತ್ತದ್ದೇವೆ ಎಂದು ಹೇಳಿದ್ದಾರೆ.