ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರ ನಗ್ನ ಪರೇಡ್‌ ವಿರೋಧಿಸಿ ಹಾಗೂ ಕುಕಿಗಳನ್ನು ಬೆಂಬಲಿಸಿ ಮಿಜೋರಂನಲ್ಲಿ ರಾಜ್ಯಾದ್ಯಂತ ಭಾರೀ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮೈತೇಯಿ ಸಮುದಾಯದ ಜನರು ಮಿಜೋರಾಂ ತೊರೆಯುತ್ತಿದ್ದಾರೆ.

ಐಜ್ವಾಲ್‌: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರ ನಗ್ನ ಪರೇಡ್‌ ವಿರೋಧಿಸಿ ಹಾಗೂ ಕುಕಿಗಳನ್ನು ಬೆಂಬಲಿಸಿ ಮಿಜೋರಂನಲ್ಲಿ ರಾಜ್ಯಾದ್ಯಂತ ಭಾರೀ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮೈತೇಯಿ ಸಮುದಾಯದ ಜನರು ಮಿಜೋರಾಂ ತೊರೆಯುತ್ತಿದ್ದಾರೆ. ಈಗಾಗಲೇ ಮಂಗಳವಾರ 600 ಮೈತೇಯಿ ಸಮುದಾಯದ ಜನರು ಮಿಜೋರಾಂ ಬಿಟ್ಟು ತಮ್ಮ ತವರು ರಾಜ್ಯಕ್ಕೆ ಅಥವಾ ಬೇರೆಡೆ ಹೋಗಿದ್ದಾರೆ. ಮಣಿಪುರದಂತೆ ಇಲ್ಲಿಯೂ ಜನಾಂಗೀಯ ಸಂಘರ್ಷ ಉಂಟಾಗಬಹುದು ಎಂದು ಹೆದರಿ ಅಸುರಕ್ಷಿತ ಭಾವನೆಯಿಂದ ಜನರು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

ಮಿಜೋರಂನಲ್ಲಿ 3,000ಕ್ಕೂ ಹೆಚ್ಚು ಮೈತೇಯಿಗಳು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಇತರ ಕೆಲಸಗಳಲ್ಲಿ ತೊಡಗಿ ವಾಸಿಸುತ್ತಿದ್ದಾರೆ. ಮಿಜೋರಂನಲ್ಲಿ ಕುಕಿಗಳ ಬೆಂಬಲಿಸಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಈ ಪ್ರತಿಭಟನಾಕಾರರು ನಮ್ಮ ಮೇಲೆ ದಾಳಿ ಮಾಡುತ್ತಾರೆ ಎಂದು ಮೈತೇಯಿಗಳು ಭಾವಿಸಿದ್ದಾರೆ ಎನ್ನಲಾಗಿದೆ. ಆದರೆ ಈವರೆಗೆ ರಾಜ್ಯದಲ್ಲಿ ಯಾವುದೇ ಹಿಂಸಾಚಾರದ ಬಗ್ಗೆ ವರದಿಯಾಗಿಲ್ಲ.

ವೈದ್ಯನ ಮೇಲೆ ಸಿಎಂ ಪುತ್ರಿಯಿಂದ ಹಲ್ಲೆ: ಕ್ಷಮೆಯಾಚಿಸಿದ ಸಿಎಂ: ವೈದ್ಯರಿಂದ ಪ್ರತಿಭಟನೆ

ಮತ್ತೆ ಗುಂಡಿನ ಕಾಳಗ, ಮನೆಗಳಿಗೆ ಬೆಂಕಿ

ಇಂಫಾಲ್‌: ಕಳೆದ ಮೂರು ತಿಂಗಳಿನಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿ ಹೊತ್ತಿ ಉರಿಯುತ್ತಿರುವ ಮಣಿಪುರದಲ್ಲಿ ಮತ್ತೆ ಕೆಲ ಮನೆಗಳಿಗೆ ಬೆಂಕಿ ಹಚ್ಚಿಲಾಗಿದ್ದು ಈ ವೇಳೆ ಗುಂಡಿನ ಕಾಳಗ ನಡೆದು ಸ್ಥಳೀಯ ಗ್ರಾಮಸ್ಥರು ಆತಂಕಕ್ಕೀಡಾದ ಘಟನೆ ನಡೆದಿದೆ. ಇಲ್ಲಿನ ಬಿಷ್ಣುಪುರ್‌ ಜಿಲ್ಲೆಯ ಮೊಯಿರಾಂಗ್‌ ಗ್ರಾಮದ ಬಳಿ ಬುಧವಾರ ರಾತ್ರಿಯಿಂದ 2 ಗುಂಪುಗಳ ನಡುವೆ ಆರಂಭವಾದ ಚಕಮಕಿ, ಗುರುವಾರ ಮುಂಜಾನೆವರೆಗೂ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ವೇಳೆ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು ಅನೇಕರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ‘ನಿನ್ನೆ ರಾತ್ರಿಯಿಂದ ಗುಂಡಿನ ಚಕಮಕಿ ನಡೆಯುತ್ತಿದ್ದು ರಾತ್ರಿಯಿಡೀ ನಾವು ಏನೂ ತಿನ್ನದೆ ಎಚ್ಚರವಾಗೇ ಇದ್ದೆವು’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬುಧವಾರ ಕೂಡ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಭದ್ರತಾ ಪಡೆಯ 2 ವಾಹನಗಳು ಮತ್ತು ಅನೇಕ ಮನೆಗಳಿಗೆ ಬೆಂಕಿ ಹಚ್ಚಿದ್ದ ಘಟನೆ ನಡೆದಿತ್ತು. ಮೈತೇಯಿ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವ ನಿರ್ಧಾರದ ವಿರುದ್ಧ ಕುಕಿ ಸಮುದಾಯದ ಜನರು ಭಾರೀ ಹಿಂಸಾಚಾರಕ್ಕೆ ತೊಡಗಿದ ಬೆನ್ನಲ್ಲೇ ಎರಡೂ ಸಮುದಾಯಗಳ ನಡುವಿನ ದ್ವೇಷ ತಾರಕಕ್ಕೇರಿದೆ. ಈಗಾಗಲೇ ಹಿಂಸಾಚಾರದಲ್ಲಿ 160ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಮಣಿಪುರ ಹಿಂಸೆಗೆ ಮತ್ತೆ ಕಲಾಪ ಭಂಗ: ಚರ್ಚೆಗೆ ಸಿದ್ಧ ಎಂಬ ಶಾ ಮನವಿಗೂ ಓಗೊಡದ ವಿಪಕ್ಷ