ನಾವು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಈ ಯುದ್ಧದಲ್ಲಿ ಹೋರಾಡುತ್ತೇವೆ. ನಾವು ಹೆದರುವುದಿಲ್ಲ. ಮೌನ ವಹಿಸುವುದಿಲ್ಲ. ಪ್ರಧಾನಿ ಮೋದಿ ಸಂಬಂಧ ಹೊಂದಿರುವ ಅದಾನಿ ಪ್ರಕರಣದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸುವ ಬದಲು, ರಾಹುಲ್‌ ಗಾಂಧಿಯನ್ನು ಅನರ್ಹಗೊಳಿಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವ ಓಂ ಶಾಂತಿ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ನವದೆಹಲಿ (ಮಾರ್ಚ್‌ 25, 2023): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಸಂಸತ್‌ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ದೇಶಾದ್ಯಂತ ‘ಜನಾಂದೋಲನ’ ನಡೆಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ರಾಹುಲ್‌ ಗಾಂಧಿಯ ಬಾಯಿ ಮುಚ್ಚಿಸಲು ಕೇಂದ್ರ ಸರ್ಕಾರ ಮಿಂಚಿನ ವೇಗದಲ್ಲಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ರಾಹುಲ್‌ ಗಾಂಧಿ ಅನರ್ಹತೆಯ ಬಳಿಕ ದೆಹಲಿಯಲ್ಲಿ ಸಭೆ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕ ಗಾಂಧಿ, ಕೆ.ಸಿ.ವೇಣುಗೋಪಾಲ್‌. ಜೈರಾಂ ರಮೇಶ್‌, ರಾಜೀವ್‌ ಶುಕ್ಲಾ ಹಾಗೂ ಮುಂತಾದವರು ದೇಶಾದ್ಯಂತ ಪ್ರತಿಭಟನೆ ನಡೆಸುವ ನಿರ್ಣಯ ಕೈಗೊಂಡಿದ್ದಾರೆ.

ರಾಹುಲ್‌ ಗಾಂಧಿ ಅವರನ್ನು ಉದ್ದೇಶಪೂರ್ವಕವಾಗಿಯೇ ಸಂಸದನ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಮೋದಿ ಹಾಗೂ ಅದಾನಿ ವಿಷಯವಾಗಿ ಮಾತನಾಡಿದ್ದಕ್ಕೆ ಈ ನಿರ್ಣಯ ಕೈಗೊಳ್ಳಲಾಗಿದೆ. ಹಾಗಾಗಿ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಅಲ್ಲದೇ ನಾವು ವ್ಯವಸ್ಥಿತವಾಗಿ ವಿಪಕ್ಷಗಳ ಮೈತ್ರಿಕೂಟವನ್ನು ರಚನೆ ಮಾಡುತ್ತೇವೆ. ದೇಶಾದ್ಯಂತ ಜನರನ್ನು ತಲುಪಿ ಉದ್ದೇಶಪೂರ್ವಕವಾಗಿ ರಾಹುಲ್‌ ಗಾಂಧಿಯನ್ನು ಅನರ್ಹ ಮಾಡಲಾಗಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ ಎಂದು ಜೈರಾಂ ರಮೇಶ್‌ ಸಭೆಯ ಬಳಿಕ ಹೇಳಿದ್ದಾರೆ.

ಇದನ್ನು ಓದಿ: ವಯನಾಡ್‌ ಲೋಕಸಭಾ ಕ್ಷೇತ್ರ ತೆರವು: ರಾಹುಲ್‌ ಗಾಂಧಿ ಮುಂದಿನ ಕಾನೂನು ಹಾದಿಗಳೇನು, ಅವರು ಕಳೆದುಕೊಳ್ಳುವುದೇನೇನು ನೋಡಿ..!

ಇದಕ್ಕೂ ಮೊದಲು ರಾಹುಲ್‌ರನ್ನು ಅನರ್ಹಗೊಳಿಸಿರುವುದನ್ನು ಖಂಡಿಸಿದ ಕಾಂಗ್ರೆಸ್‌ ನಾಯಕರು, ಇದು ‘ಭಾರತೀಯ ಪ್ರಜಾಪ್ರಭುತ್ವದಲ್ಲಿ ಕರಾಳ ದಿನ’, ಇದರ ವಿರುದ್ಧ ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಹೋರಾಡುತ್ತೇವೆ ಎಂದು ಹೇಳಿದರು. ‘ರಾಹುಲ್‌ ಗಾಂಧಿಯನ್ನು ಸತ್ಯ ಮಾತನಾಡಿದ ಕಾರಣಕ್ಕೆ, ಸಂವಿಧಾನ ಮತ್ತು ಜನರ ಹಕ್ಕಿಗಾಗಿ ಹೋರಾಟ ನಡೆಸಿದ ಕಾರಣಕ್ಕೆ ಸಂಸತ್ತಿನಿಂದ ಅನರ್ಹಗೊಳಿಸಲಾಗಿದೆ. ನಾವು ಜೈಲಿಗೆ ಹೋದರೂ ಸಹ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಹೋರಾಡುವುದನ್ನು ಮುಂದುವರೆಸುತ್ತೇವೆ. ನಮ್ಮ ಜನ ಹೋರಾಡಲು ಸಿದ್ಧವಾಗಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

‘ನಾವು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಈ ಯುದ್ಧದಲ್ಲಿ ಹೋರಾಡುತ್ತೇವೆ. ನಾವು ಹೆದರುವುದಿಲ್ಲ. ಮೌನ ವಹಿಸುವುದಿಲ್ಲ. ಪ್ರಧಾನಿ ಮೋದಿ ಸಂಬಂಧ ಹೊಂದಿರುವ ಅದಾನಿ ಪ್ರಕರಣದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸುವ ಬದಲು, ರಾಹುಲ್‌ ಗಾಂಧಿಯನ್ನು ಅನರ್ಹಗೊಳಿಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವ ಓಂ ಶಾಂತಿ’ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಭಾರತದ ಒಕ್ಕೊರಲ ಧ್ವನಿಗೆ ನನ್ನ ಹೋರಾಟ, ಯಾವುದೇ ತ್ಯಾಗಕ್ಕೂ ಸಿದ್ಧ; ರಾಹುಲ್ ಗಾಂಧಿ ಟ್ವೀಟ್!