ಮಣ್ಣೆಂದರೆ ರಾಸಾಯನಿಕಗಳ ಮುದ್ದೆಯಲ್ಲ ಮಣ್ಣಿಗೂ ಜೀವವಿದೆ ಮಣ್ಣಿನ ರಕ್ಷಣೆ ನಮ್ಮೆಲ್ಲರ ಹೊಣೆ ಸದ್ಗುರು ಜಗ್ಗಿ ವಾಸುದೇವ್ ಸಂದೇಶ
ಮಣ್ಣೆಂದರೆ ಬರೀ ರಾಸಾಯನಿಕಗಳ ಮುದ್ದೆಯಲ್ಲ, ಅದಕ್ಕೂ ಜೀವವಿದೆ. ಮಣ್ಣಿನ ಜೀವವನ್ನು ನಾವು ಅನುಭವಿಸುವ ಜೊತೆಗೆ ಮುಂದಿನ ಪೀಳಿಗೆಗೂ ಅದರ ಚೈತನ್ಯವನ್ನು ದಾಟಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯ ಎಂದು ಈಶ ಪ್ರತಿಷ್ಠಾನದ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಹೇಳಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ಸಂದೇಶ ನೀಡಿರುವ ಅವರು, ಮಣ್ಣಿನ ಮೇಲ್ಪದರದ 12ರಿಂದ 15 ಇಂಚಿನಲ್ಲಿ ನಡೆಯುವ ಚಟುವಟಿಕೆಗಳೇ ನಮ್ಮ ಅಸ್ತಿತ್ವಕ್ಕೆ ಕಾರಣ. ಈ ಚಟುವಟಿಕೆಯನ್ನು ಗಮನಿಸಿ ಅದನ್ನು ನಮ್ಮ ಅರಿವಿನೊಳಗೆ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಈ ಜಾಗ ಸೃಷ್ಟಿಯ ಮೂಲವಾಗಿ ಉಳಿಯಲಾರದು ಎಂದು ಹೇಳಿದ್ದಾರೆ.
kashi vishwanath dham ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ಕಾಶಿ ಮುಖ್ಯ, ಪುನರುತ್ಥಾನಗೊಳಿಸಿದ ಮೋದಿಗೆ ಸದ್ಗುರು ನಮನ!
ಮಣ್ಣಿನ ನಾಶದಿಂದ ನೀರು, ಆಹಾರ ಭದ್ರತೆಗೆ ಧಕ್ಕೆ ಆಗುತ್ತಿದೆ. ಜೀವ ವೈವಿಧ್ಯದ ನಾಶಕ್ಕೆ ಕಾರಣವಾಗುತ್ತಿದೆ. ಹವಾಮಾನ ಬದಲಾವಣೆಯ ಕಾರಣದಿಂದ ಸಂಭವಿಸುತ್ತಿರುವ ಸಾವು, ನೋವುಗಳಿಗೆ ಮಣ್ಣಿನ ನಾಶಕ್ಕೂ ಸಂಬಂಧವಿದೆ. ಆದ್ದರಿಂದ 'ಮಣ್ಣನ್ನು ಉಳಿಸಿ ಅಭಿಯಾನ'ವು ವಿಶ್ವವ್ಯಾಪಿ ಮಣ್ಣಿನ ಸವಕಳಿ ಮತ್ತು ಫಲವತ್ತತೆ ನಾಶಕ್ಕೆ ಕಾರಣವಾಗುತ್ತಿರುವ ವಿಷಯಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಇದೇ ರೀತಿ ಮಣ್ಣಿನ ಸವಕಳಿ ನಡೆದರೆ ಮುಂದಿನ 50 ವರ್ಷದೊಳಗೆ ಇಡೀ ಜಗತ್ತಿನಲ್ಲಿ ಆಹಾರದ ಸಮಸ್ಯೆ ತಂದೊಡ್ಡಲಿದೆ ಎಂದು ಎಚ್ಚರಿಸಿದೆ. ಲಕ್ಷಾಂತರ ಎಕರೆ ಕೃಷಿ ಭೂಮಿ ಕೃಷಿಗೆ ಯೋಗ್ಯವಾಗದೇ ಹೋಗಬಹುದು ಎಂದು ಹೇಳಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ರೈತರಿಗೆ ಸದ್ಗುರು ಜಗ್ಗಿ ವಾಸುದೇವ್ ಮಹತ್ವದ ಸಲಹೆ
ಪ್ರತಿಯೊಬ್ಬರು ಈ ಅಭಿಯಾನದಲ್ಲಿ ಭಾಗವಹಿಸಬೇಕು. ಇದನ್ನು ನಿಮ್ಮ ಅಭಿಯಾನವನ್ನಾಗಿ ಮಾಡಿ ದೇಶ ಮತ್ತು ಜಗತ್ತಿನಲ್ಲಿ ಅರಿವು ತರಬೇಕು. ಈ ಅಭಿಯಾನದ ಮೂಲಕ ಜಗತ್ತಿನಾದ್ಯಂತ 3.5 ಬಿಲಿಯನ್ ಜನರ ತಲುಪಿ ಆಯಾ ದೇಶದಲ್ಲಿ ಪರಿಸರ ರಕ್ಷಣೆಗೆ ಒತ್ತು ನೀಡುವ ಸರ್ಕಾರ ರೂಪಿಸುವಂತೆ ಮಾಡುವ ಆಶಯ ಹೊಂದಿದೆ ಎಂದು ಸದ್ಗುರು ತಿಳಿಸಿದ್ದಾರೆ.
ಮಾರ್ಚ್ನಲ್ಲಿ ಸದ್ಗುರು ಈ ಮಣ್ಣು ಉಳಿಸಿ ಎಂಬ ಅಭಿಯಾನವನ್ನು ಆರಂಭಿಸಲಿದ್ದಾರೆ. ಮಣ್ಣಿನ ಫಲವತ್ತೆ ನಾಶವಾಗುತ್ತಿರುವುದರ ಬಗ್ಗೆ ಹಾಗೂ ಈ ಬಗ್ಗೆ ಎಲ್ಲರೂ ಜಾಗೃತರಾಗುವಂತಾಗಲು ಜಗತ್ತಿನ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಅಭಿಯಾನಕ್ಕೆ ಸದ್ಗುರು ಕರೆ ನೀಡಲಿದ್ದಾರೆ.
ಈ ಹಿಂದೆ ಸದ್ಗುರು ನದಿಗಳನ್ನು ಉಳಿಸುವ ಸಲುವಾಗಿ ಕಾವೇರಿ ಕೂಗು ಎಂಬ ಅಭಿಯಾನವನ್ನು ಆರಂಭಿಸಿದ್ದರು. ಜೀವನದಿಗಳ ಉಳಿವಿಗಾಗಿ ಜನರು ಆಂದೋಲನದಲ್ಲಿ ಮನಃಪೂರ್ವಕವಾಗಿ ಭಾಗವಹಿಸುವಂತೆ ಜಾಗೃತಿ ಮೂಡಿಸಿದ್ದರು. ಈ ಆಶಯದೊಂದಿಗೆ ಕೈಜೋಡಿಸುವ ರೈತರಿಗೆ ಮೊದಲ 3-4 ವರ್ಷ ಅರಣ್ಯ ಕೃಷಿಗೆ ಬೇಕಾಗುವ ಮೂಲ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಸಬ್ಸಿಡಿ ಮುಖಾಂತರ ಕೊಡಿಸುವ ಭರವಸೆ ನೀಡಲಾಗಿತ್ತು.
ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ, ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದಾಗಿತ್ತುಎಲ್ಲ ಭಾರತೀಯ ನದಿಗಳಂತೆ ಕಾವೇರಿಯು ಕೂಡ ಅರಣ್ಯಪೋಷಿತ ನದಿ. ಐತಿಹಾಸಿಕವಾಗಿ ಈ ಪ್ರಾಂತ್ಯವೆಲ್ಲ ಅರಣ್ಯ ಹಾಗೂ ಗಿಡಮರಗಳಿಂದ ಆವೃತವಾಗಿತ್ತು. ಪ್ರಾಣಿಗಳ ಗೊಬ್ಬರ ಹಾಗೂ ಗಿಡಮರಗಳ ತ್ಯಾಜ್ಯಗಳಿಂದ ಆ ಪ್ರಾಂತ್ಯದ ಮಣ್ಣಿಗೆ ನಿರಂತರವಾಗಿ ಪೌಷ್ಟಿಕಾಂಶಗಳು ಮತ್ತು ಜೈವಿಕ ಪದಾರ್ಥ ಮರುಪೂರೈಕೆಯಾಗುತ್ತಿತ್ತು. ಆದರೆ ಜನಸಂಖ್ಯೆ ಹೆಚ್ಚಾಗುತ್ತಾ ಅರಣ್ಯ ನಾಶವೂ ಹೆಚ್ಚುತ್ತಿರುವ ಪರಿಣಾಮ ಭೂಮಿಗೆ ಜೈವಿಕಾಂಶದ ಮರುಪೂರೈಕೆ ಆಗುತ್ತಿಲ್ಲ.
ಭೂಮಿಯು ನೀರನ್ನು ಹಿಡಿದಿಟ್ಟುಕೊಳ್ಳುತ್ತಿಲ್ಲ. ಪರಿಣಾಮ ಈ ಭೂಮಿಯು ಕಾವೇರಿಯನ್ನು ಪೋಷಿಸುವಲ್ಲಿ ವಿಫಲವಾಗುತ್ತಿದೆ ಮತ್ತು ಕಾವೇರಿ ಬತ್ತಿ ಹೋಗುತ್ತಿದೆ. ಇಂಥ ಸಂದರ್ಭದಲ್ಲಿ ಕಾವೇರಿಗೆ ಮತ್ತೆ ಜೀವಂತಿಕೆ ತಂದುಕೊಡುವ ಆಂದೋಲನವೇ 'ಕಾವೇರಿ ಕೂಗು'
