kashi vishwanath dham ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ಕಾಶಿ ಮುಖ್ಯ, ಪುನರುತ್ಥಾನಗೊಳಿಸಿದ ಮೋದಿಗೆ ಸದ್ಗುರು ನಮನ!
- ವಾರಾಣಸಿ ಇತಿಹಾಸ, ಮಹತ್ವ ಹೇಳಿದ ಸದ್ಗುರು ಜಗ್ಗಿವಾಸುದೇವ್
- ಕಾಶಿ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ, ವಿಶ್ವನಾಥನ ಮಹಿಮೆ ತಿಳಿಸಿದ ಗುರು
- ದಾಳಿಗೊಳಗಾದ, ಕಳೆಗುಂದಿದ, ಕಾಲಗರ್ಭದಲ್ಲಿ ಅಡಗಿದ ಕಾಶಿ ಪನರ್ ನಿರ್ಮಾಣ
- ಪ್ರಧಾನಿ ಮೋದಿ ಕಾರ್ಯಕ್ಕೆ ಸದ್ಗುರು ನಮನ
ನವದೆಹಲಿ(ಡಿ.14): ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಹಳೇ ಗತವೈಭವ ಮರುಕಳಿಸಿದೆ. ಪ್ರಧಾನಿ ನರೇಂದ್ರ ಮೋದಿ(PM Narendra Modi) ಕನಸಿನ ಯೋಜನೆಯನ್ನು ಸಾಕಾರಗೊಳಿಸಿದ್ದಾರೆ. ಇದೀಗ ಕಾಶಿಯಲ್ಲಿ ವಿಶ್ವನಾಥನ(kashi vishwanath) ದರ್ಶನ ಭಕ್ತರ ಮನತಣಿಸಲಿದೆ. ಕಾಶಿ ವಿಶ್ವನಾಥ ಮಂದಿರ ಕೇವಲ ಹಿಂದೂಗಳಿಗೆ ಮಾತ್ರವಲ್ಲ ಜಗತ್ತಿಗೆ ಅತೀ ಮುಖ್ಯ ಎಂದು ಸದ್ಗುರು ಜಗ್ಗಿವಾಸುದೇವ್(Sadguru) ಹೇಳಿದ್ದಾರೆ. ಇದೇ ವೇಳೆ ವಾರಾಣಸಿ ಹಾಗೂ ವಿಶ್ವನಾಥ ದೇಗುಲದ ಇತಿಹಾಸ, ಮಹತ್ವ ತಿಳಿಸಿದ ಸದ್ಗರು, ಪ್ರಧಾನಿ ನರೇಂದ್ರ ಮೋದಿ ಕಾರ್ಯವನ್ನು ಶ್ಲಾಘಿಸಿದ್ದಾರೆ.
ವಾರಾಣಸಿ(Varanasi) ಅತ್ಯಂತ ಪುರಾತನ ನಗರ. ಭೂಮಿ ಮೇಲೆ ಸಜೀವವಾಗಿರುವ ಅತ್ಯಂತ ಪ್ರಾಚೀನ ನಗರ ವಾರಾಣಸಿ. ಮಾನವ ಕುಲದ ಬದಲಾವಣೆಗೆ ನಾಂದಿ ಹಾಡಿದ ನಗರವಿದು. ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಸಾವಿರಾರು ಅನ್ವೇಷಕರನ್ನು ಸಕ್ರಿಯಗೊಳಿಸಿದ ನಗರವಾಗಿದೆ ಎಂದು ಸದ್ಗುರು ಹೇಳಿದ್ದಾರೆ. ಎಥೆನ್ಸ್ ಕಲ್ಪನೆ ಮಾಡುವ ಮುನ್ನವೇ ಕಾಶಿ ಅಸ್ತಿತ್ವದಲ್ಲಿತ್ತು. ರೋಮ್ ನಗರ ಜನರ ಮನಸ್ಸು ಪ್ರವೇಶಿಸು ಮೊದಲೇ ಕಾಶಿ ಜನರಿಂದ ತುಂಬಿದ ಭಕ್ತಿ ನಗರವಾಗಿತ್ತು. ಈಜಿಪ್ಟ್ ಇನ್ನೂ ಹುಟ್ಟೇ ಇರಲಿಲಿಲ್ಲ. ಆದರೆ ಕಾಶಿ ಆಗಲೇ ನಳನಳಿಸುತ್ತಿತ್ತು. ಹೀಗಾಗಿಯೇ ಇದು ಅತ್ಯಂತ ಪುರಾತನ ನಗರವಾಗಿದೆ ಎಂದು ಸದ್ಗುರು ಹೇಳಿದ್ದಾರೆ.
ಸತತ ದಾಳಿ ಮೆಟ್ಟಿನಿಂತ ದೇವನಗರಿ, ಪ್ರಧಾನಿ ಮೋದಿ ಉದ್ಘಾಟಿಸಿದ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು
ವರುಣಾ ಹಾಗೂ ಹಸ್ಸಿ ನದಿಗಳ ತಟದಲ್ಲಿ ತಲೆ ಎತ್ತಿರುವ ನಗರವೇ ವಾರಾಣಸಿ. ಕಾಶಿ ವಿಶ್ವನಾಥ ಮಂದಿರ ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಾಗಿಲ್ಲ, ಕೇವಲ ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೆ ಕಾಶಿ ವಿಶ್ವನಾಥ ಮಂದಿರ ಪುನರುಜ್ಜೀವನ ಅತೀ ಅಗತ್ಯ ಹಾಗೂ ಮುಖ್ಯವಾಗಿದೆ. ಕಾಶಿ ವಿಶ್ವನಾಥ ಮಂದಿರ ಎಲ್ಲಾ ಧರ್ಮದವರಿಗೂ ಮುಕ್ತವಾಗಿದೆ. ಇಲ್ಲಿ ಜಾತಿ, ಪಂಗಡ ಯಾವುದು ಮುಖ್ಯವಲ್ಲ. ಅತ್ಯಂತ ಪುರಾತನ ನಗರ, ದೇಗುಲದ ಪುನರುಜ್ಜೀವನ ಮಾಡಿರುವುದು ಅತೀವ ಸಂತಸ ತಂದಿದೆ. ಇದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಜನತೆಗೆ ನಮನ ಸಲ್ಲಿಸುತ್ತೇನೆ ಎಂದು ಸದ್ಗುರು ಹೇಳಿದ್ದಾರೆ. ಶೀಘ್ರದಲ್ಲೇ ಕಾಶಿಗೆ ಭೇಟಿ ನೀಡುವುದಾಗಿ ಸದ್ಗುರು ಹೇಳಿದ್ದಾರೆ.
ಡಿಸೆಂಬರ್ 13 ರಂದು ಪುನರುತ್ಥಾನಗೊಂಡ ಕಾಶಿ ವಿಶ್ವನಾಥ ಧಾಮ ಕಾರಿಡಾರ್(kashi vishwanath dham Corridor) ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಮೋದಿ ಲೋಕಸಭಾ ಕ್ಷೇತ್ರವಾಗಿರುವ ವಾರಾಣಸಿಯಲ್ಲಿನ ಕಾಶಿ ವಿಶ್ವನಾಥ ದೇಗುಲದ ಗತವೈಭವ ಮರುಸ್ಥಾಪಿಸಲು ಮೋದಿ 2019ರಲ್ಲಿ ಪಣತೊಟ್ಟಿದ್ದರು. 2019ರಲ್ಲಿ ಮೋದಿ ಶಿಲಾನ್ಯಾಸ ಮಾಡಿದ್ದ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಯೋಜನೆ ಇದೀಗ ಪೂರ್ಣಗೊಂಡು ಲೋಕಾರ್ಪಣೆಯಾಗಿದೆ.
ಈ ಮುನ್ನ 3 ಸಾವಿರ ಚದರಡಿ ಪ್ರದೇಶದಲ್ಲಿದ್ದ ವಿಶ್ವನಾಥ ದೇವಾಲಯದ ಪ್ರದೇಶವನ್ನು 5 ಲಕ್ಷ ಚದರಡಿ ವ್ಯಾಪ್ತಿಗೆ ವಿಸ್ತರಿಸಲಾಗಿದೆ. ಇದರಿಂದ ವಿಶ್ವನಾಥ ದೇಗುಲದಿಂದ ಗಂಗಾನದಿಯ ನೇರ ದರ್ಶನ ಪ್ರಾಪ್ತಿಯಾಗಲಿದೆ. ಇದೇ ವೇಳೆ, ಭಕ್ತರಿಗೆ ಅನುಕೂಲವಾಗುವ ಹಲವಾರು ವ್ಯವಸ್ಥೆಗಳು, ಮ್ಯೂಸಿಯಂ, ಸಭಾಂಗಣ- ಇತ್ಯಾದಿಗಳನ್ನು ಕಾರಿಡಾರ್ ಯೋಜನೆಯಡಿ ಮಂದಿರದ ಸುತ್ತಮುತ್ತ ನಿರ್ಮಿಸಲಾಗಿದೆ. ಈ ರೀತಿ ಸುಂದರ ಕಾಶಿ ನಿರ್ಮಾಣ ಮೋದಿ ಅವರ ಕನಸಾಗಿತ್ತು.
ಡಿಸೆಂಬರ್ 13 ರಂದು ವಾರಾಣಸಿಗೆ ಆಗಮಿಸಿದ ಪ್ರಧಾನಿ ಮೋದಿ, ಮೊದಲು ಗಂಗಾನದಿಯಲ್ಲಿ ಮಿಂದು ಕಾಲಭೈರವನ ದರ್ಶನ ಪಡೆದರು. ಅಲ್ಲಿಂದ ಕಾಶಿ ವಿಶ್ವನಾಥ ದೇಗುಲಕ್ಕೆ ನದಿ ಮಾರ್ಗದ ಮೂಲಕ ವಿಲಾಸಿ ಹಡಗಿನಲ್ಲಿ ಆಗಮಿಸಿದ ಅವರು ಮಧ್ಯಾಹ್ನದ ಭೋಗ ಆರತಿ ವೇಳೆ ಶಿವಲಿಂಗಕ್ಕೆ ಅಭಿಷೇಕ ಮಾಡಿದರು. ನಂತರ ತಮ್ಮ ಮೂಲ ಉದ್ದೇಶವಾಗಿದ್ದ ‘ಕಾಶಿ ವಿಶ್ವನಾಥ ಧಾಮ’ ಯೋಜನೆಯನ್ನು ದೇಶಕ್ಕೆ ಸಮರ್ಪಿಸಿದರು. ಬಳಿಕ ಸಭಿಕರು ಹಾಗೂ ಸಾಧು-ಸಂತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಎಂಥ ಶತ್ರುಗಳು ಬಂದರೂ ಕಾಶಿಯನ್ನು ಅಲುಗಾಡಿಸಲು ಆಗದು. ಭಾರತವನ್ನೂ ಅಲುಗಾಡಿಸಲಾಗದು’ ಎಂಬ ಮಹತ್ವದ ಸಂದೇಶ ರವಾನಿಸಿದರು.ಇದಾದ ನಂತರ ಕಾಶಿ ಧಾಮ ನಿರ್ಮಿಸಿದ ಕಾರ್ಮಿಕರಿಗೆ ಪುಷ್ಪವೃಷ್ಟಿಮಾಡಿ ಅವರ ಜತೆ ಭೋಜನ ಮಾಡಿದರು. ಸಂಜೆ ವಿಲಾಸಿ ಹಡಗಿನಲ್ಲಿ ಸಂಚರಿಸುತ್ತ ಗಂಗಾ ಆರತಿ ವೀಕ್ಷಿಸಿದರು.