ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಇನ್ನಿಲ್ಲ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ನಿಧನ
ನವದೆಹಲಿ(ಡಿ.30): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ (100) ಇಂದು(ಶುಕ್ರವಾರ) ಬೆಳಗಿನ ಜಾವ 3:30ಕ್ಕೆ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಹೀರಾಬೆನ್ ಅವರನ್ನ ಕೆಲವು ದಿನಗಳ ಹಿಂದೆ ಅಹಮದಾಬಾದ್ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿ, ತಮ್ಮ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ.. ತಾಯಿಯಲ್ಲಿ ನಾನು ಯಾವಾಗಲೂ ಆ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ, ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ ಅಂತ ಬರೆದುಕೊಂಡಿದ್ದಾರೆ.
ನನ್ನ ತಾಯಿಯ 100 ನೇ ವರ್ಷದ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದಾಗ, ಅವರು ಹೇಳಿದ್ದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ, ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಪರಿಶುದ್ಧತೆಯಿಂದ ಜೀವನ ಮಾಡಿ, ಅಂದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಮತ್ತು ಜೀವನವನ್ನು ಪರಿಶುದ್ಧತೆಯಿಂದ ಬದುಕಿರಿ, ಎಂದು ಅವರು ಹೇಳಿದ್ದರು ಅಂತ ಪ್ರಧಾನಿ ಮೋದಿ ಸ್ಮರಿಸಿಕೊಂಡಿದ್ದಾರೆ.
ಮೈಸೂರು ಸಮೀಪ ಪ್ರಧಾನಿ ನರೇಂದ್ರ ಮೋದಿ ಸಹೋದರನ ಕಾರು ಅಪಘಾತ!
ಹೀರಾಬೆನ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ, ಅವರನ್ನು ಡಿ.28 ರಂದು ಗುಜರಾತ್ನ ಅಹಮದಾಬಾದ್ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶತಾಯುಷಿಯಾಗಿರುವ ಹೀರಾಬೆನ್ ಅವರನ್ನು ಈ ಹಿಂದೆಯೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಾಯಿ ನಿಧನವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ಗೆ ಹೊರಟಿದ್ದಾರೆ. ಕೋಲ್ಕತ್ತಾದ ಆಯೋಜನೆಗೊಂಡಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯುವ ಸಾಧ್ಯತೆ ಇದೆ ಅಂತ ತಿಳಿದು ಬಂದಿದೆ. ಆಸ್ಪತ್ರೆಯಿಂದ ಪ್ರಹ್ಲಾದ ಮೆಹ್ತಾ ನಿವಾಸಕ್ಕೆ ಹೀರಾಬೆನ್ ಪಾರ್ಥೀವ ಶರೀರವನ್ನ ರವಾನೆ ಮಾಡಲಾಗಿದೆ. ಗಾಂಧಿ ನಗರದ ರಾಯಸನ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ದರ್ಶನವನ್ನ ಪಡೆಯಲಿದ್ದಾರೆ.
ಅಮಿತ್ ಶಾ ಕಾರ್ಯಕ್ರಮಗಳ ಕುರಿತು ಅನಿಶ್ಚಿತತೆ
ಪ್ರಧಾನಿ ನರೇಂದ್ರ ಮೋದಿ ತಾಯಿ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮಗಳ ಕುರಿತು ಅನಿಶ್ಚಿತತೆ ಮೂಡಿದೆ. ಅಹಮದಾಬಾದ್ಗೆ ವಾಪಸ್ ಹೋಗುವ ಕುರಿತು ಅಮಿತ್ ಶಾ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಕೆಲ ಹೊತ್ತಿನಲ್ಲಿ ಸಿಗಲಿದೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಇಂದಿನ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದೆ ಅಂತ ಅಂತಿದೆ ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಆದ್ರೆ, ನಾಳಿನ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿದ ಅನಿಶ್ಚಿತತೆ ಮೂಡಿದ್ದು ಸ್ಪಷ್ಟ ಸಂದೇಶಕ್ಕಾಗಿ ಬಿಜೆಪಿ ನಾಯಕರು ಕಾಯುತ್ತಿದ್ದಾರೆ.
ಗಣ್ಯರ ಸಂತಾಪ
ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಅಂತ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ದೇಶಕ್ಕೆ ಜನನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಂತ ಮಗನನ್ನು ನೀಡಿ, ಶತಾಯುಷಿಯಾಗಿ ಬದುಕಿ ಬಾಳಿ ಶ್ರೀ ದೇವರ ಚರಣ ಸೇರಿದ ಹೀರಾಬೆನ್ ಅವರಿಗೆ ಗೌರವಪೂರ್ವಕ ವಿದಾಯಗಳು. ಶ್ರೀ ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಪ್ರಧಾನಿಯವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.
ರುದ್ರಭೂಮಿಯತ್ತ ಮೋದಿ ತಾಯಿ ಪಾರ್ಥೀವ ಶರೀರ
ಮೋದಿ ತಾಯಿ ಪಾರ್ಥೀವ ಶರೀರವನ್ನ ರುದ್ರಭೂಮಿಯತ್ತ ಕೊಂಡೊಯ್ಯಲಾಗಿದೆ. ಅಂತಿಮ ಯಾತ್ರೆಯಲ್ಲಿ ತಾಯಿ ಪಾರ್ಥೀವ ಶರೀರಕ್ಕೆ ಪ್ರಧಾನಿ ಮೋದಿ ಹೆಗಲು ಕೊಟ್ಟಿದ್ದಾರೆ. ತಾಯಿಯ ಪಾರ್ಥೀವ ಶರೀರದ ಜೊತೆ ಮೋದಿ ಅಂಬ್ಯೂಲೆನ್ಸ್ನಲ್ಲಿ ಹೊರಟಿದ್ದಾರೆ. ಮೋದಿ ತಾಯಿ ನಿಧನವಾದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಭಜನೆ, ದೇವರ ನಾಮ ಪಠಿಸಿದ್ದಾರೆ. ಅಕ್ಕಪಕ್ಕದ ನಿವಾಸಿಗಳಲ್ಲೂ ದುಃಖ ಮಡುಗಟ್ಟಿದೆ.
ನಿಗದಿಯಂತೆ ಮೋದಿ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿ
ತಾಯಿ ನಿಧನದ ದುಃಖದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿಯಂತೆ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಆಯೋಜನೆಯಾದ ಕಾರ್ಯಕ್ರಮಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ.