Breaking: ಎಲ್ಕೆ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಭಾರತದ ಮಾಜಿ ಉಪಪ್ರಧಾನಿ ಎಲ್ಕೆ ಆಡ್ವಾಣಿ ಅವರ ನಿವಾಸಕ್ಕೆ ಆಗಮಿಸಿ, ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
ನವದೆಹಲಿ (ಮಾ.31): ಬಿಜೆಪಿಯ ಹಿರಿಯ ಹಾಗೂ ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಆಡ್ವಾಣಿ ಅವರಿಗೆ ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಸ್ವತಃ ಅವರ ನಿವಾಸಕ್ಕೆ ಆಗಮಿಸಿದ ರಾಷ್ಟ್ರಪತಿಗಳು ಎಲ್ಕೆ ಆಡ್ವಾಣಿ ಅವರ ಕೊರಳಿಗೆ ಭಾರತರತ್ನ ಪುರಸ್ಕಾರ ತೊಡಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಹಾಜರಿದ್ದರು. ಈ ವರ್ಷ ಒಟ್ಟು ಐವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪುರಸ್ಕಾರವನ್ನು ಘೋಷಣೆ ಮಾಡಲಾಗಿತ್ತು. ಚೌಧರಿ ಚರಣ್ ಸಿಂಗ್, ಮಾಜಿ ಪ್ರಧಾನಿ ಪಿವಿ ನರಸಿಂಹರಾವ್, ಬಿಹಾರ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂಎಸ್ ಸ್ವಾಮಿನಾಥನ್ ಅವರಿಗೆ ಈ ಪುರಸ್ಕಾರಣ ಘೋಷಿಸಲಾಗಿತ್ತು. ಶನಿವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮರಣೋತ್ತರವಾಗಿ ಪ್ರಶಸ್ತಿಗೆ ಭಾಜನರಾದ ಇವರ ಪರವಾಗಿ ಕುಟುಂಬ ಸದಸ್ಯರು ಗೌರವ ಸ್ವೀಕರಿಸಿದ್ದರು.
ಆದರೆ, ಅನಾರೋಗ್ಯದ ಕಾರಣದಿಂದಾಗಿ ಎಲ್ಕೆ ಆಡ್ವಾಣಿ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಿರಿಯ ಬಿಜೆಪಿ ನಾಯಕನ ನಿವಾಸಕ್ಕೆ ಆಗಮಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಧಾನಿ ಹೊರತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಈ ವೇಳೆ ಉಪಸ್ಥಿತರಿದ್ದರು. ಫೆಬ್ರವರಿಯಲ್ಲಿ, ಹಿರಿಯ ಬಿಜೆಪಿ ನಾಯಕನಿಗೆ ಭಾರತ ರತ್ನ ನೀಡಲಾಗುವುದು ಎಂದು ಪಿಎಂ ಮೋದಿ ಘೋಷಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದಿದ್ದ ಮೋದಿ, ಭಾರತದ ಅಭಿವೃದ್ಧಿಗೆ ಮಾಜಿ ಕೇಂದ್ರ ಸಚಿವರ ಕೊಡುಗೆ ಸ್ಮರಣೀಯವಾದದ್ದು ಎಂದು ಹೇಳಿದ್ದರು.
ಚೌಧರಿ ಚರಣ್ ಸಿಂಗ್, ಕರ್ಪೂರಿ ಠಾಕೂರ್ ಸೇರಿದಂತೆ ನಾಲ್ವರಿಗೆ ಭಾರತ ರತ್ನ ಪ್ರದಾನ ಮಾಡಿದ ರಾಷ್ಟ್ರಪತಿ
"ಎಲ್ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವ ಸುದ್ದಿಯನ್ನು ತಿಳಿಸುವುದಕ್ಕೆ ಸಂತೋಷವಾಗುತ್ತಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ನೀಡಿದ್ದಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರು, ಭಾರತದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಸ್ಮರಣೀಯವಾದದ್ದು. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ನಮ್ಮ ಉಪಪ್ರಧಾನಿಯಾಗಿ ದೇಶಸೇವೆ ಮಾಡಿದ ಜೀವ ಅವರದು. ಕೇಂದ್ರದಲ್ಲಿ ಗೃಹ ಸಚಿವರಾಗಿ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವರಾಗಿ ಗುರುತಿಸಿಕೊಂಡಿದ್ದರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ ಆದರ್ಶಪ್ರಾಯವಾಗಿವೆ' ಎಂದು ಮೋದಿ ಟ್ವೀಟ್ ಮಾಡಿದ್ದರು.
LK Advani: ಬಿಜೆಪಿ ಭೀಷ್ಮ..ಅಡ್ವಾಣಿಗೆ ಭಾರತ ರತ್ನ: ರಾಜಕೀಯ ಗುರುವಿಗೆ ಶಿಷ್ಯ ಕೊಟ್ಟ ಅದ್ಭುತ ಕಾಣಿಕೆ..!