ವಿದ್ಯುತ್‌ ಇನ್ಮುಂದೆ ಗ್ರಾಹಕರ ಹಕ್ಕು|  ಎಲ್‌ಪಿಜಿ ರೀತಿ ಗ್ರಾಹಕರಿಗೆ ನೇರ ವಿದ್ಯುತ್‌ ಸಬ್ಸಿಡಿ| ಅರ್ಜಿ ಸಲ್ಲಿಸಿದ 7 ದಿನದಲ್ಲಿ ಸಂಪರ್ಕ ನೀಡಬೇಕು| ಆನ್‌ಲೈನಲ್ಲೇ ಎಲ್ಲ ಸಮಸ್ಯೆ ಬಗೆಹರಿಸಬೇಕು| ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ ಸಿದ್ಧತೆ

ನವದೆಹಲಿ(ಸೆ.17): ಪದೇಪದೇ ಕರೆಂಟ್‌ ಹೋಗುತ್ತದೆ, ಎಸ್ಕಾಂನವರಿಗೆ ಎಷ್ಟುಫೋನ್‌ ಮಾಡಿದರೂ ಪ್ರಯೋಜನವಿಲ್ಲ, ಅರ್ಜಿ ಸಲ್ಲಿಸಿ ಎಷ್ಟುದಿನವಾದರೂ ವಿದ್ಯುತ್‌ ಸಂಪರ್ಕ ನೀಡುತ್ತಿಲ್ಲ, ಹಳ್ಳಿಯಲ್ಲಿ ವಿದ್ಯುತ್ತೇ ಇರುವುದಿಲ್ಲ ಆದರೆ ಬಿಲ್‌ ಮಾತ್ರ ಬರುತ್ತದೆ... ಇಂತಹ ಸಮಸ್ಯೆಗಳಿಗೆಲ್ಲ ಕೇಂದ್ರ ಸರ್ಕಾರ ಶೀಘ್ರದಲ್ಲೇ ಇತಿಶ್ರೀ ಹಾಡಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ತನ್ನು ಗ್ರಾಹಕರ ಹಕ್ಕು ಎಂದು ಪರಿಗಣಿಸಲು ಕೇಂದ್ರ ಸರ್ಕಾರ ನಿಯಮಾವಳಿ ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ಇದು ಜಾರಿಗೆ ಬಂದರೆ ವಿದ್ಯುತ್‌ ಪಡೆಯುವುದು ಈ ದೇಶದಲ್ಲಿರುವ ಎಲ್ಲರ ಹಕ್ಕಾಗಲಿದೆ. ಆಗ, ಅರ್ಜಿ ಸಲ್ಲಿಸಿದ ನಿರ್ದಿಷ್ಟಸಮಯದೊಳಗೆ ಇಂಧನ ಇಲಾಖೆ ವಿದ್ಯುತ್‌ ಸಂಪರ್ಕ ನೀಡಬೇಕಾಗುತ್ತದೆ. ಅಲ್ಲದೆ, ವಿದ್ಯುತ್‌ ಗ್ರಾಹಕರ ಎಲ್ಲಾ ಸಮಸ್ಯೆಗಳನ್ನೂ ನಿರ್ದಿಷ್ಟಸಮಯದೊಳಗೆ ಆನ್‌ಲೈನ್‌ನಲ್ಲೇ ಬಗೆಹರಿಸಬೇಕಾಗುತ್ತದೆ.

ಈ ಸಂಬಂಧ ಕೇಂದ್ರ ಇಂಧನ ಇಲಾಖೆಯು ಕರಡು ನಿಯಮಾವಳಿ ರೂಪಿಸಿದ್ದು, ಅದಕ್ಕೆ ಈ ವರ್ಷದ ಸೆ.30ರೊಳಗೆ ಜನರಿಂದ ಆಕ್ಷೇಪಣೆ ಆಹ್ವಾನಿಸಿದೆ. ನಂತರ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮವಾಗಿ ‘ವಿದ್ಯುತ್‌ (ಗ್ರಾಹಕರ ಹಕ್ಕು) ನಿಯಮಾವಳಿ-2020’ನ್ನು ಪ್ರಕಟಿಸಲಿದೆ.

ನಿಯಮಗಳಲ್ಲಿ ಏನಿದೆ?

- ಎಲ್‌ಪಿಜಿ ರೀತಿಯಲ್ಲೇ ಗ್ರಾಹಕರ ಬ್ಯಾಂಕ್‌ ಖಾತೆಗೆ ನೇರ ಸಬ್ಸಿಡಿ ಹಣ ಜಮೆ.

- ಜನರು ಕೇವಲ 2 ದಾಖಲೆ ಸಲ್ಲಿಸಿ ವಿದ್ಯುತ್‌ ಸಂಪರ್ಕ ಪಡೆಯಲು ಸರಳ ವ್ಯವಸ್ಥೆ ಇರಬೇಕು.

- ಮೆಟ್ರೋ ನಗರಗಳಲ್ಲಿ ಜನರು ಅರ್ಜಿ ಸಲ್ಲಿಸಿದ 7 ದಿನ, ಮುನ್ಸಿಪಲ್‌ ಪಟ್ಟಣಗಳಲ್ಲಿ 15 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 30 ದಿನದೊಳಗೆ ವಿದ್ಯುತ್‌ ಸಂಪರ್ಕ ನೀಡಬೇಕು ಅಥವಾ ಈಗಾಗಲೇ ನೀಡಿರುವ ಸಂಪರ್ಕವನ್ನು ಬದಲಿಸಿಕೊಡಬೇಕು.

- ಒಂದು ವರ್ಷಕ್ಕೆ ಒಬ್ಬ ಗ್ರಾಹಕನಿಗೆ ಗರಿಷ್ಠ ಇಷ್ಟೇ ಸಲ ಹಾಗೂ ಇಷ್ಟುತಾಸು ಮಾತ್ರ ವಿದ್ಯುತ್‌ ಕಡಿತಗೊಳಿಸಬಹುದು ಎಂಬ ಮಿತಿ ಇರಬೇಕು.

- ಹೊಸ ಸಂಪರ್ಕ, ವರ್ಗಾವಣೆ, ರಿಪೇರಿ, ವಿದ್ಯುತ್‌ ಕಡಿತ ಇತ್ಯಾದಿ ಸಮಸ್ಯೆಗಳನ್ನು ಗ್ರಾಹಕರು ಬಗೆಹರಿಸಿಕೊಳ್ಳಲು ಆ್ಯಪ್‌ ಆಧಾರಿತ ವ್ಯವಸ್ಥೆ ತರಬೇಕು.