ಪೋಕ್ಸೋ ಕೇಸ್ನಲ್ಲಿ 23 ವರ್ಷ ಜೈಲು ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆ ಕೋರ್ಟ್ನಿಂದ ಅಪರಾಧಿ ನಾಪತ್ತೆ, ಶಾಲಾ ಬಾಲಕಿ ಅಪಹರಿಸಿ ಅತ್ಯಾ**ರ ಎಸಗಿದ್ದ ಅಪರಾಧಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಆದರೆ ಆತ ಕೋರ್ಟ್ನಿಂದಲೇ ಪರಾರಿಯಾದ ಘಟನೆ ನಡೆದಿದೆ.
ಕೊಲ್ಲಂ (ಫೆ.18) ಆರೋಪ ಆಗಿರಲಿ, ಅಪರಾಧಿ ಆಗಿರಲಿ ಕೋರ್ಟ್ಗೆ ಹಾಜರುಪಡಿಸುವಾಗ ಬಳಿಕ ಜೈಲಿಗೆ ಕರೆದೊಯ್ಯುವಾಗ ಪೊಲೀಸರು ಭಾರಿ ಭದ್ರತೆ ಒದಗಿಸುತ್ತಾರೆ. ಸಿನಿಮಾಗಳಲ್ಲಿ ಆರೋಪಿಗಳು ಎಸ್ಕೇಪ್ ಆಗೋದೆ ಇದರ ನಡುವೆ. ಆದರೆ ರಿಯಲ್ನಲ್ಲಿ ಇದು ಸಾಧ್ಯವಿಲ್ಲ. ಈ ಎಲ್ಲಾ ಲೆಕ್ಕಾಚಾರಗಳನ್ನೇ ಉಲ್ಟಾ ಮಾಡಿಸಿದ ಘಟನೆಯೊಂದು ನಡೆದಿದೆ. ಶಾಲಾ ಬಾಲಕಿಯನ್ನು ಅಪಹರಿಸಿ ನಿರಂತರ ಅತ್ಯಾ**ರ ಎಸಗಿದ್ದ ಅಪರಾಧಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿತ್ತು. 23 ವರ್ಷ ಜೈಲು ಶಿಕ್ಷೆಯನ್ನು ಕೋರ್ಟ್ ಘೋಷಿಸಿತ್ತು. ಈ ಶಿಕ್ಷೆ ಪ್ರಮಾಣ ಕೇಳುತ್ತಿದ್ದಂತೆ ಜೈಲಿನ ಕಟಕಟೆಯಲ್ಲಿ ನಿಂತಿದ್ದ ಅಪರಾಧಿ ನಾಪತ್ತೆಯಾದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
ಅಚ್ಚರಿಯಾದರು ಸತ್ಯ
ಅಸ್ಸಾಂ ಬಾಲಕಿಯನ್ನು ಅಪಹರಿಸಿದ್ದ ಸಿರಾಜುಲ್ ಹಕ್ ನಿರಂತರವಾಗಿ ಅತ್ಯಾ**ರ ಎಸೆಗಿದ್ದ. ಈಕೆ ತನ್ನ ಪತ್ನಿ ಎಂದು ಹಲವರ ಬಳಿ ಹೇಳಿಕೊಂಡಿದ್ದ. ಬಾಲಕಿಯನ್ನು ಹತ್ಯೆ ಮಾಡುವುದಾಗಿ, ಪೋಷಕರನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದ. ಬಳಿಕ ಪ್ರಕರಣ ಬೆಳಕಿಗೆ ಬಂದು ಅರೆಸ್ಟ್ ಆಗಿದ್ದ ಕರುನಾಗಪಲ್ಲಿ ಪೋಕ್ಸೋ ತ್ವರಿತಗತಿ ನ್ಯಾಯಾಲಯ ಈ ಪ್ರಕರಣ ವಿಚಾರಣೆ ನಡೆಸಿತ್ತು. ಇದೀಗ ಕೋರ್ಟ್ ಶಿಕ್ಷೆಯನ್ನು ಪ್ರಕಟಿಸಿದೆ. ಆಧರೆ ಶಿಕ್ಷೆ ಪ್ರಕಟಿಸುವಾಗ ಎಲ್ಲರ ಕಣ್ಣುಗಳು ನ್ಯಾಯಾಧೀಶರ ಮೇಲಿತ್ತು. ಇತ್ತ ಅಪರಾಧಿ ಪರಾರಿಯಾಗಿರುವುದು ಯಾರಿಗೂ ಗೊತ್ತೆ ಆಗಲಿಲ್ಲ. ಪೊಲೀಸರು ನಮ್ಮ ಕೇಸ್, ಹಿಡಿದ ಅಪರಾಧಿಗೆ ಕಠಿಣ ಶಿಕ್ಷೆಯಾಗಿ ಎಂದು ಬೆನ್ನು ತಟ್ಟಿಕೊಳ್ಳುವಷ್ಟರಲ್ಲೇ ಸಂಕಷ್ಟ ಎದುರಾಗಿದೆ.
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಸಿರಾಜುಲ್ನನ್ನು ಪೊಲೀಸರು ವಿಚಾರಣೆಗಾಗಿ ಕೋರ್ಟ್ಗೆ ಕರೆತಂದಿದ್ದರು. ವಿಚಾರಣೆ ವೇಳೆ, ಸಿರಾಜುಲ್ ಹಕ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ, ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಘೋಷಿಸುತ್ತಿದ್ದಂತೆ ಆತ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ವಿವಿಧ ಸೆಕ್ಷನ್ಗಳ ಅಡಿಯಲ್ಲಿ ನ್ಯಾಯಾಲಯವು ಸಿರಾಜುಲ್ಗೆ 23 ವರ್ಷಗಳ ಜೈಲು ಶಿಕ್ಷೆ ಮತ್ತು 2,10,000 ರೂಪಾಯಿ ದಂಡ ವಿಧಿಸಿತ್ತು. ದಂಡ ಕಟ್ಟಲು ವಿಫಲವಾದರೆ, ಇನ್ನೂ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿತ್ತು.
ಪ್ರಕರಣದ ಹಿನ್ನೆಲೆ ಏನು?
ಮೈನಾಂಗಪಲ್ಲಿಯಲ್ಲಿರುವ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಸಿರಾಜುಲ್ ಹಕ್, ಅಸ್ಸಾಂ ಮೂಲದ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಅತ್ಯಾ**ರ ಎಸಗಿದ್ದ. ಆ ಹುಡುಗಿ ತನ್ನ ಹೆಂಡತಿ ಎಂದು ಆತ ಎಲ್ಲರ ಬಳಿ ಹೇಳಿಕೊಂಡಿದ್ದ. ಪೆರಿಂತಲ್ಮಣ್ಣದಲ್ಲಿದ್ದ ಬಾಲಕಿಯ ಚಿಕ್ಕಮ್ಮ ಈ ಬಗ್ಗೆ ಚೈಲ್ಡ್ಲೈನ್ ಮತ್ತು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಶಾಸ್ತಾಂಕೋಟ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಸದ್ಯ ಕೋರ್ಟ್ನಿಂದ ಪರಾರಿಯಾಗಿರುವ ಸಿರಾಜುಲ್ಗಾಗಿ ಪೊಲೀಸರು ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ.


