Asianet Suvarna News Asianet Suvarna News

Grand Kashi Project: ಪುಷ್ಪವೃಷ್ಠಿ ಮಾಡಿ ಕೆಲಸಗಾರರನ್ನು ಗೌರವಿಸಿದ ಪ್ರಧಾನಿ

  • ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆ
  • ಕಾರ್ಮಿಕರ ಮೇಲೆ ಪ್ರಧಾನಿ ಪುಷ್ಪವೃಷ್ಠಿ
  • ದೇಗುಲವನ್ನು ಗಂಗಾ ಘಾಟ್‌ ಜೊತೆಗೆ ಜೋಡಿಸುವ ಭವ್ಯ ಯೋಜನೆ
PM Showers Petals On Construction Workers Of Grand Kashi Project akb
Author
Bangalore, First Published Dec 13, 2021, 3:43 PM IST

ನವದೆಹಲಿ(ಡಿ.13): ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಗೆ ಜೀವ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೆಲಸಗಾರರ ಮೇಲೆ ಪುಷ್ಪವೃಷ್ಠಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ( Prime Minister Narendra Modi)ಕಾರ್ಮಿಕರಿಗೆ ಗೌರವ ಅರ್ಪಿಸಿದರು. ಕಾಶಿ ವಿಶ್ವನಾಥ ದೇವಸ್ಥಾನವನ್ನು ಗಂಗಾನದಿಯ ಘಾಟ್‌ಗಳೊಂದಿಗೆ ಜೋಡಿಸುವ ಭವ್ಯ ಯೋಜನೆ ಇದಾಗಿದ್ದು, ಇದರ 1 ನೇ ಹಂತವನ್ನು ಉದ್ಘಾಟಿಸುವ ಮೊದಲು ಪ್ರಧಾನಿಯವರು ಈ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರನ್ನು ಗೌರವಿಸಿದರು.

ತಮ್ಮ ಮಾಮೂಲಿ  ಫ್ಲೋರೊಸೆಂಟ್ ವರ್ಕ್ ಗೇರ್‌(fluorescent work gear) ಬಟ್ಟೆ ಧರಿಸಿ ಸಮಾರಂಭ ಸ್ಥಳದಲ್ಲಿ ಕೈ ಕಟ್ಟಿ ಕುಳಿತಿದ್ದ ಕಾರ್ಮಿಕರ ಮುಂದೆ ಬಂದ ಪ್ರಧಾನಿ ಅವರ ಮೇಲೆ ಹೂವಿನ ಎಸಳುಗಳ ಸುರಿಮಳೆಗೈದರು. ನಂತರ ಪ್ರಧಾನಿ ಯೋಜನೆಯಲ್ಲಿ ತೊಡಗಿರುವ ಎಲ್ಲಾ ಕಟ್ಟಡ ಕಾರ್ಮಿಕರೊಂದಿಗೆ ನಿಂತು ತೀವ್ರ ಕಾಳಜಿ ವಹಿಸಿ ಗ್ರೂಪ್‌ ಫೋಟೋವನ್ನು ತೆಗೆಸಿಕೊಂಡರು. ಬಳಿಕ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಈ ಭವ್ಯ ಸಂಕೀರ್ಣದ ನಿರ್ಮಾಣದಲ್ಲಿ ಬೆವರು ಸುರಿಸಿದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ನಾನು ಇಂದು ಧನ್ಯವಾದ ಹೇಳಲು ಬಯಸುತ್ತೇನೆ. ಕೋರೊನಾ ಸಾಂಕ್ರಾಮಿಕ ರೋಗ ಆವರಿಸಿರುವ ಈ ಕಷ್ಟದ ಸಮಯದಲ್ಲಿಯೂ ಅವರು ಕೆಲಸವನ್ನು ಇಲ್ಲಿಗೆ ನಿಲ್ಲಿಸಲಿಲ್ಲ. ಈಗ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ ಎಂದರು. 

Modi In Varanasi: ಕಾಶಿ ಹಾದಿಯಲ್ಲಿ ಕಾರು ನಿಲ್ಲಿಸಿ ಸ್ಥಳೀಯರು ಕೊಟ್ಟ ಪಗಡಿ, ಶಾಲು ಧರಿಸಿದ ಮೋದಿ!

ಕಾಶಿ ವಿಶ್ವನಾಥ ದೇಗುಲ(Kashi Vishwanath temple) ಕಾರಿಡಾರ್ ಯೋಜನೆಯೂ ಘಾಟ್‌ಗಳು ಮತ್ತು ದೇವಾಲಯದ ನಡುವೆ ಯಾತ್ರಾರ್ಥಿಗಳು ಮತ್ತು ಭಕ್ತರಿಗೆ ಸುಲಭವಾಗಿ ಸಂಚಾರ ಮಾಡಲು ಆಗುವ ಗುರಿಯನ್ನು ಹೊಂದಿದೆ.  ಇದಕ್ಕೂ ಮೊದಲು, ಭಕ್ತರು ಘಾಟ್‌ನಿಂದ ದೇವಾಲಯವನ್ನು ತಲುಪಲು ದಟ್ಟಣೆ ತುಂಬಿದ ದುರ್ಗಮ ಬೀದಿಗಳಲ್ಲಿ ಹಾದು ಹೋಗಬೇಕಾಗಿತ್ತು. ಇದರ ಮೊದಲ ಹಂತದ ಯೋಜನೆಯನ್ನು 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸುಮಾರು 5 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ 23 ಕಟ್ಟಡಗಳಿದೆ. 

 

ವಿಶೇಷ ಅಂದರೆ ದೇವಾಲಯದ ಪರಂಪರೆ ಹಾಗೂ ಸಂಸ್ಕೃತಿಗೆ (Art and Culture) ಯಾವುದೇ ಧಕ್ಕೆ ಬರದ ರೀತಿಯಲ್ಲಿ ಕಾಶಿ ವಿಶ್ವನಾಥ ದೇಗುಲದ ಗತವೈಭವವನ್ನು ಪುನರ್ ನಿರ್ಮಿಸಲಾಗಿದೆ. 5,000 ಹೆಕ್ಟೇರ್ ಪ್ರದೇಶದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ತಲೆ ಎತ್ತಿದೆ. 2019 ರಲ್ಲಿ ಈ ಯೋಜನೆಗೆ ಶಂಕುಸ್ಥಾಪನೆಯಾಗಿತ್ತು. ಒಟ್ಟಾರೆ ಈ ಯೋಜನೆಗೆ 800 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಮಹಾ ಯೋಜನೆಯನ್ನು ಕಾರ್ಯಗತಗೊಳಿಸಲು 300 ಕ್ಕೂ ಹೆಚ್ಚು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸುಮಾರು 1,400 ಅಂಗಡಿಯವರು, ಬಾಡಿಗೆದಾರರು ಮತ್ತು ಮನೆ ಮಾಲೀಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಪ್ರಧಾನಮಂತ್ರಿ ಕಚೇರಿಯ ಮೂಲಗಳು ತಿಳಿಸಿದೆ. ಯೋಜನೆಯ ಕೆಲಸದ ಸಮಯದಲ್ಲಿ 40 ಕ್ಕೂ ಹೆಚ್ಚು ಪ್ರಾಚೀನ ದೇವಾಲಯ(ancient temples)ಗಳನ್ನು ಮರುಶೋಧಿಸಲಾಗಿದೆ. ಇವುಗಳನ್ನುಮೂಲ ರಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಪುನಃಸ್ಥಾಪಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ(PMO)ಯ ಹೇಳಿಕೆ ತಿಳಿಸಿದೆ. 

Kashi Vishwanath Corridor: ಮರುಕಳಿಸಲಿದೆ 'ಕಾಶಿ ವಿಶ್ವನಾಥ'ನ ಗತವೈಭವ: ವಾರಣಾಸಿಯಲ್ಲಿ ಹಬ್ಬದ ವಾತಾವರಣ!

ಇದಕ್ಕೂ ಮೊದಲು ಪ್ರಧಾನಿ ಗಂಗಾ ದರ್ಶನ ಮತ್ತು ಪೂಜೆಗಾಗಿ ತಮ್ಮ ಬೆಂಗಾವಲು ಪಡೆಯೊಂದಿಗೆ ಮುಂದೆ ಸಾಗಲು ಆರಂಭಿಸಿದ ಕೂಡಲೇ ದಾರಿಯಲ್ಲಿದ್ದ ಜನರು ಅವರ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿದರು. ಅವರ ಸ್ವಾಗತಕ್ಕೆ ತಲೆಬಾಗಿದ ಪ್ರಧಾನಿ ವಾರಣಾಸಿಯ ತಂಜ್ ಗಲಿಯಲ್ಲಿ ತಮ್ಮ ಕಾರನ್ನು ನಿಲ್ಲಿಸಿ ಭದ್ರತಾ ಸಿಬ್ಬಂದಿಯನ್ನು ದೂರ ಹೋಗುವಂತೆ ಹೇಳಿದರು. ಅಷ್ಟೇ ಅಲ್ಲದೇ, ಕಾರನ್ನು ನಿಲ್ಲಿಸಿ ಅಲ್ಲಿ ನೆರೆದಿದ್ದ ಸ್ಥಳೀಯರನ್ನು ಬರಮಾಡಿಕೊಂಡರು, ಅವರು ಕೊಟ್ಟ ಪೇಟ ಧರಿಸಿದ್ದಲ್ಲದೆ ಪ್ರೀತಿಯಿಂದ ಕೊಟ್ಟ ಕೇಸರಿ ಶಾಲನ್ನೂ ಧರಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಕೈಮುಗಿದುಕೊಂಡಿದ್ದರು. ಜನರೂ ಅವರ ಮೇಲೆ ಪುಷ್ಪವೃಷ್ಟಿ ಮಾಡಿದ್ದರು.

"

Follow Us:
Download App:
  • android
  • ios