PM Narendra Modi: ಕೋವಿಡ್ ಅನಾಥ ಮಕ್ಕಳಿಗೆ ಪ್ರಧಾನಿ ಆಸರೆ!
ಕೋವಿಡ್ನಿಂದ ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾದ ಸುಮಾರು 4000 ಮಕ್ಕಳಿಗೆ ಆರ್ಥಿಕ, ಶೈಕ್ಷಣಿಕ ಮತ್ತಿತರೆ ಆಸರೆ ನೀಡುವ ಮಹತ್ವದ ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ’ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು.
ನವದೆಹಲಿ (ಮೇ.31): ಕೋವಿಡ್ನಿಂದ ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾದ ಸುಮಾರು 4000 ಮಕ್ಕಳಿಗೆ ಆರ್ಥಿಕ, ಶೈಕ್ಷಣಿಕ ಮತ್ತಿತರೆ ಆಸರೆ ನೀಡುವ ಮಹತ್ವದ ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ’ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 8 ವರ್ಷ ಪೂರೈಸಿದ ದಿನವೇ ವಚ್ರ್ಯುವಲ್ ಆಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ಕೊರೋನಾದಿಂದ ತಂದೆ-ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ನಿಧಿಯಿಂದ ಶಿಕ್ಷಣ ಹಾಗೂ ಆರೋಗ್ಯಕ್ಕೆ ನೆರವು ನೀಡುವ ಯೋಜನೆಯೇ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್.
ಓದುವ ಮಕ್ಕಳಿಗೆ ಇದರಡಿ ಪ್ರತಿ ವರ್ಷ 20000 ರು. ವಿದ್ಯಾರ್ಥಿವೇತನ ನೀಡಲಾಗುತ್ತದೆ. ನಂತರ ಅವರಿಗೆ 23 ವರ್ಷ ತುಂಬಿದಾಗ 10 ಲಕ್ಷ ರು. ಸಿಗುವಂತೆ ಹಣ ಠೇವಣಿ ಮಾಡಲಾಗುತ್ತದೆ. ಇವುಗಳಿಗೆ ಸಂಬಂಧಿಸಿದ ಪಾಸ್ಬುಕ್ ಅನ್ನು ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಜೊತೆಗೆ, ಉನ್ನತ ವಿದ್ಯಾಭ್ಯಾಸಕ್ಕೆ ಸಾಲದ ಅಗತ್ಯವಿದ್ದರೆ ಶೈಕ್ಷಣಿಕ ಸಾಲ ಕೊಡಿಸಲಾಗುತ್ತದೆ. ಆಯುಷ್ಮಾನ್ ಆರೋಗ್ಯ ಕಾರ್ಡ್, ಸಂವಾದ ಹೆಲ್ಪ್ಲೈನ್ ಮೂಲಕ ಕೌನ್ಸೆಲಿಂಗ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಲಾಭವನ್ನು ನೀಡಲಾಗುತ್ತದೆ.
Mann Ki Baat: ಮೈಸೂರಿನ ಅಂಧ ವಿದ್ಯಾರ್ಥಿನಿಗೆ ಪ್ರಧಾನಿ ಮೋದಿ ಶಹಬ್ಬಾಸ್ಗಿರಿ!
ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ‘2014ರವರೆಗೆ ಭಾರತವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿತ್ತು. ಭಾರತದಲ್ಲಿ ಭ್ರಷ್ಟಾಚಾರ, ಹಗರಣ, ಸ್ವಜನ ಪಕ್ಷಪಾತ, ಭಯೋತ್ಪಾದನೆ, ಪ್ರಾದೇಶಿಕ ಅಸಮಾನತೆಯಂತಹ ಸಮಸ್ಯೆಗಳು ತುಂಬಿ ತುಳುಕುತ್ತಿದ್ದವು. ಕಳೆದ ಎಂಟು ವರ್ಷಗಳಲ್ಲಿ ಅವುಗಳನ್ನು ಗೆದ್ದು ನಾವೀಗ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವ ಮಟ್ಟಕ್ಕೆ ಬೆಳೆದಿದ್ದೇವೆ. ದೇಶದ ಜನರು ಹಿಂದೆ ಊಹೆ ಕೂಡ ಮಾಡಿರದ ಎತ್ತರವನ್ನು ಈ ಎಂಟು ವರ್ಷಗಳಲ್ಲಿ ಏರಿದ್ದೇವೆ. ಜಾಗತಿಕ ವೇದಿಕೆಯಲ್ಲಿ ಭಾರತದ ಹೆಮ್ಮೆ ಹಾಗೂ ಶಕ್ತಿ ಅಗಾಧವಾಗಿ ಬೆಳೆದಿದೆ. ಕೊರೋನಾದ ಋುಣಾತ್ಮಕ ಸಮಯದಲ್ಲೇ ಭಾರತ ತನ್ನ ಸಾಮರ್ಥ್ಯವನ್ನು ಕಂಡುಕೊಂಡಿತು’ ಎಂದು ಹೇಳಿದರು.
ಕೊರೋನಾ ಸಮಯದಲ್ಲಿ ನಾವು ನಮ್ಮ ವಿಜ್ಞಾನಿಗಳು, ವೈದ್ಯರು ಮತ್ತು ಯುವಕರನ್ನು ನಂಬಿದೆವು. ಹೀಗಾಗಿ ನಾವು ಯಾರಿಗೂ ಸಮಸ್ಯೆಯಾಗಲಿಲ್ಲ, ಬದಲಿಗೆ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ನೀಡುವವರಾದೆವು. ತನ್ಮೂಲಕ ಭಾರತವು ಕೋವಿಡ್ನ ದುಷ್ಪರಿಣಾಮಗಳಿಂದ ಪಾರಾಗಿ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದೂ ಅವರು ಶ್ಲಾಘಿಸಿದರು.
‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯಡಿ ಕೋವಿಡ್ನಿಂದ ಅನಾಥರಾದ ಮಕ್ಕಳ ಭವಿಷ್ಯವನ್ನು ಸರ್ಕಾರ ನೋಡಿಕೊಳ್ಳಲಿದೆ. ಅವರ ಜೀವನ ಹಾಗೂ ಶಿಕ್ಷಣಕ್ಕೆ ನೆರವಾಗುವುದಲ್ಲದೆ, ಅವರಿಗೆ 23 ವರ್ಷವಾದಾಗ 10 ಲಕ್ಷ ರು. ಹಣ ಕೈಗೆ ಸಿಗುವಂತೆ ಮಾಡಿದ್ದೇವೆ. ಅವರಿಗೆ ಎಲ್ಲ ರೀತಿಯ ಆರೋಗ್ಯ ಸೌಕರ್ಯಗಳನ್ನೂ ನೀಡುತ್ತೇವೆ ಎಂದು ಮೋದಿ ತಿಳಿಸಿದರು.
ಇಂದು ಸಿಎಂಗಳ ಜತೆ ಮೋದಿ ಸಂವಾದ: ಪ್ರಧಾನಿಯಾಗಿ 8 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಮಂಗಳವಾರ ಸಂವಾದ ನಡೆಸಲಿದ್ದಾರೆ. ಶಿಮ್ಲಾದಲ್ಲಿ ನಡೆಯಲಿರುವ ಗರೀಬ್ ಕಲ್ಯಾಣ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ನೀವು ನಾಚಿಕೆಯಿಂದ ತಲೆತಗ್ಗಿಸುವಂಥ ಒಂದೇ ಒಂದು ಕಾರಣವನ್ನೂ ಈ 8 ವರ್ಷದಲ್ಲಿ ನೀಡಿಲ್ಲ!
ಕೊರೋನಾದಿಂದಾಗಿ ರಾಜ್ಯದಲ್ಲಿ 216 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿವೆ. ಜಿಲ್ಲಾಧಿಕಾರಿ, ಸಂತ್ರಸ್ತ ಮಗುವಿನ ಹೆಸರಿನಲ್ಲಿ ಜಂಟಿಯಾಗಿ ಹಣ ಠೇವಣಿ ಇಡಲಾಗುತ್ತದೆ. ಮಗುವಿಗೆ 23 ವರ್ಷ ತುಂಬಿದಾಗ 10 ಲಕ್ಷ ರು. ಲಭಿಸುತ್ತದೆ. ಇದರ ಜತೆಗೆ 5 ಲಕ್ಷ ರು. ಉಚಿತ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗಿದೆ.
-ಬಿ.ವೈ. ರಾಘವೇಂದ್ರ ಬಿಜೆಪಿ ಸಂಸದ