ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಸಂಸದರೊಂದಿಗೆ ವಿಶೇಷ ಸಭೆ ನಡೆಸಿ, ಅವರ ಕಾರ್ಯವೈಖರಿಯ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆ, ಸರ್ಕಾರದ ಯೋಜನೆಗಳ ಪ್ರಚಾರ ಮತ್ತು ಜನರೊಂದಿಗೆ ಸಂಪರ್ಕ ಸಾಧಿಸುವ ಕುರಿತು ಸಂಸದರಿಗೆ ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ.

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಸಂಸತ್ ಭವನದ ಸಭಾಂಗಣದಲ್ಲಿ ಕರ್ನಾಟಕದ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರಿಗೆ ಸುಮಾರು 45 ನಿಮಿಷಗಳ ಕಾಲ ವಿಶೇಷ ಸಭೆ ನಡೆಸಿ, ಪಕ್ಷದ ಸಂಘಟನೆ, ಸಾರ್ವಜನಿಕ ಸಂಪರ್ಕ, ಸಾಮಾಜಿಕ ಮಾಧ್ಯಮದ ಬಳಕೆ ಮತ್ತು ಕ್ಷೇತ್ರದ ಕಾರ್ಯಶೀಲತೆ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ. ಈ ಮೂಲಕ ಕರ್ನಾಟಕ ಬಿಜೆಪಿ ನಾಯಕರ ಬಗ್ಗೆ ಮೋದಿ ಪರೋಕ್ಷ ಬೇಸರಗೊಂಡಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ ಸಂಸದರ ಸಭೆಯಲ್ಲಿ ಪರೋಕ್ಷವಾಗಿ ರಾಜ್ಯದ ಸಂಸದರನ್ನೇ ಪ್ರಧಾನಿ ಮೋಡಿ ಟಾರ್ಗೆಟ್ ಮಾಡಿ ಪ್ರಶ್ನೆ ಮಾಡಿದ್ದಾರೆ. ರಾಜಕೀಯವಾಗಿ ಎನ್‌ಕ್ಯಾಶ್ ಮಾಡದಿರುವ ಬಗ್ಗೆ ಪರೋಕ್ಷ ಬೇಸರ ವ್ಯಕ್ತಪಡಿಸಿದರು. ಕರ್ನಾಟಕದ ಸದ್ಯದ ರಾಜಕೀಯ ಪರಿಸ್ಥಿತಿ, ಸರ್ಕಾರದ ವೈಫಲ್ಯಗಳು ಮತ್ತು ವಿರೋಧ ಪಕ್ಷದ ಪಾತ್ರಗಳ ಕುರಿತು ಮೋದಿ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದಂತಾಯಿತು.

ಸಭೆಯ ಆರಂಭದಲ್ಲೇ ಮೋದಿ, “ಪ್ರಧಾನಮಂತ್ರಿ ಮ್ಯೂಸಿಯಂ ನೋಡಿದ್ದೀರಾ? ನಿಮ್ಮ ಕುಟುಂಬಕ್ಕೂ ತೋರಿಸಿದ್ದೀರಾ?” ಎಂದು ಕೇಳಿ, ಸಂಸದರು ರಾಷ್ಟ್ರದ ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಸಂದೇಶ ನೀಡಿದರು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯತೆಯ ಕೊರತೆಯ ಕಡೆಗೆ ಮೋದಿ ಪ್ರಶ್ನೆ ಮಾಡಿದರು. ಮೋದಿಯವರು ಸಂಸದರ ಡಿಜಿಟಲ್ ಹಾಜರಾತಿಯ ಕೊರತೆಯನ್ನು ಉಲ್ಲೇಖಿಸಿದರು.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದೀರಾ? ಯಾರು ಏನು ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ? ಸಂಸದರ ಫಾಲೋವರ್ಸ್ ಎಷ್ಟು? ನೀವು ಯಾವ ವಿಷಯಗಳನ್ನು ಪೋಸ್ಟ್ ಮಾಡಿದ್ದೀರಿ? ಮೋದಿಯವರು ನೇರವಾಗಿ ಫಾಲೋವರ್ಸ್ ಮತ್ತು ಪೋಸ್ಟಿಂಗ್ ಕುರಿತು ತಿಳಿದಿರುವುದಾಗಿ ಹೇಳಿದುದು ಸಂಸದರ ನಡುವೆ ಗಂಭೀರ ಚರ್ಚೆಗೆ ಕಾರಣವಾಯಿತು.

ಕೇಂದ್ರದ ಯೋಜನೆಗಳನ್ನು ನಿಮ್ಮ ನಿಮ್ಮ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗಿ? ನಿಮ್ಮ ಕುಟುಂಬಕ್ಕೆ ಸಮಯ ಕೊಡ್ತಾ ಇದ್ದೀರಾ? ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ಸಂಸದರಿಗೆ ಕೇಳಿದ ಪ್ರಶ್ನೆಗಳು ಇವು, ಕರ್ನಾಟಕ ಸಂಸದರ ಜೊತೆ ಅರ್ಧಗಂಟೆಗೂ ಹೆಚ್ಚು ಕಾಲ ಮೋದಿ ಚರ್ಚಿಸಿದರು. ಸಂಸತ್ ಭವನದ ಹಾಲ್ ನಲ್ಲಿ ಕರ್ನಾಟಕ ಸಂಸದರಿಗೆ ಕ್ಲಾಸ್ ತೆಗೆದುಕೊಂಡು ಲೋಕಸಭಾ ಮತ್ತು ರಾಜ್ಯಸಭಾ ಸಂಸದರಿಗೆ ನಾಯಕತ್ವದ ಪಾಠ ಮಾಡಿದರು. ಈ ಮೂಲಕ ಕಾರ್ಯಕರ್ತರ ಜೊತೆ ಸಂಪರ್ಕ ಕುರಿತು ಪದೇ ಪದೇ ಒತ್ತಿ ಹೇಳಿದರು.

ಸಂಸದರ ಕ್ಷೇತ್ರ ಕಾರ್ಯದಲ್ಲಿ ಖುದ್ದಾಗಿ ಇದ್ದು ಕೆಲಸ ಮಾಡಬೇಕೆಂದು ಒತ್ತಿ ಹೇಳಿದರು. ಜನರಿಗೆ ನೀವು ನಾಟಕ ಮಾಡುತ್ತಿದ್ದೀರಿ ಎನಿಸಿಬಾರದು. ನಿಮ್ಮ ಕ್ಷೇತ್ರದಲ್ಲಿ ಒಬ್ಬ 70 ವರ್ಷದ ವೃದ್ದನಿಗೆ ಆಗಬೇಕಾದ ಕೆಲಸ ನೀವೆ ಹೋಗಿ ಮಾಡಿಕೊಡಿ. ಚುನಾವಣೆಯಲ್ಲಿ ಅದೇ ವ್ಯಕ್ತಿ ನಿಮ್ಮ ಪರ ಪ್ರಚಾರ ಮಾಡುತ್ತಾನೆ.

ರಾಹುಲ್ ಗಾಂಧಿ ಕುರಿತು ಟೀಕೆ: ‘ಡ್ರಾಮಾ ಅಂತೆ ಜನ ಹೇಳ್ತಾರೆ’

ರಾಹುಲ್ ಗಾಂಧಿಯನ್ನು ನಾವು ಯುವರಾಜ ಎನ್ನುತ್ತೇವೆ. ಅದರಿಂದ ಹೊರಬರಲು ರಾಹುಲ್ ಮೋಟರ್ ಬೈಕ್ ರಿಪೇರಿ ಅದು ಇದು ಮಾಡ್ತಾ ಇರ್ತಾರೆ. ಆದರೆ ಜನರು ಈಗ ಅದನ್ನೂ ಡ್ರಾಮ ಎನ್ನುತ್ತಾರೆ. ಯುವರಾಜ ಪಟ್ಟದಿಂದ ಕೆಳಗೆ ಬರಲು ಅವರು ಶ್ರಮಿಸುತ್ತಿದ್ದಾರೆ. ಹೀಗಾಗಿ ತಾವೆಲ್ಲರೂ ಜನರ ಜೊತೆ ಅವರ ಕಷ್ಟದ ಜೊತೆ ಸದಾ ಇರಬೇಕು. ಮದುವೆಗೆ ಸಾವಿಗೆ ಎಲ್ಲಾದಕ್ಕೂ ನೀವು ಹೋಗುತ್ತೀರಿ. ಸರಿ, ಅದನ್ನು ಹೊರತುಪಡಿಸಿ ಜನರ ಜೊತೆ ಹೇಗೆ ಕನೆಕ್ಟ್ ಆಗಬಹುದು ಎಂದು ಯೋಚಿಸಿ ನೋಡಿ. ಸೋಶಿಯಲ್ ಮೀಡಿಯಾ ವ್ಯಾಪಕವಾಗಿ ಬಳಸಿ, ಇಂದು ಜನರು ಉಳಿದ ಮಾಧ್ಯಮಕ್ಕಿಂತ ಸೋಶಿಯಲ್ ಮೀಡಿಯಾ ಹೆಚ್ಚು ಬಳಸುತ್ತಾರೆ. ಸಂಸದರ ಫಾಲೊವರ್ಸ್ ಎಷ್ಟು, ನೀವು ಏನನ್ನೂ ಸೋಶಿಯಲ್ ಮೀಡಿಯಾಗೆ ಹಾಕಿದ್ದೀರಿ. ಯಾವುದು ಹಾಕಿಲ್ಲ ಎಂದು ಮೋದಿ ಗುರುತಿಸಿ ಹೇಳಿದರು.

ಒಂದು ಸರ್ಕಾರ ತಪ್ಪು ಮಾಡಿದಾಗ ಅದನ್ನು ವಿರೋಧ ಪಕ್ಷ ಎನ್‌ಕ್ಯಾಶ್ ಮಾಡಿಕೊಳ್ಳದಿದ್ದರೆ ಹೇಗೆ? ಕೇವಲ ಪಾಸಿಂಗ್ ರಿಮಾರ್ಕ್ ಮಾಡಿದರೂ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡುವುದು ಬಹಳ ಮುಖ್ಯ ಎಂದರು. ಇಷ್ಟೆಲ್ಲ ಪ್ರಶ್ನೆಗಳು ಕರ್ನಾಟಕ ಬಿಜೆಪಿ ನಾಯಕತ್ವದ ಮೇಲಿನ ಮೋದಿ ಅಸಮಾಧಾನವೆಂಬ ರಾಜಕೀಯ ವಲಯದ ಚರ್ಚೆಗೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾ ಬಳಕೆ, ಕಾಲದ ಅಗತ್ಯ

ಮೋದಿಯವರು ಮತ್ತೊಮ್ಮೆ ಒತ್ತಿಹೇಳಿ, ಇಂದು ಭಾರತದಲ್ಲಿ ಜನರು ಟಿವಿಗಿಂತ, ಪತ್ರಿಕೆಗೆ ಹೋಲಿಸಿದರೆ ಸೋಶಿಯಲ್ ಮೀಡಿಯಾವನ್ನು ಹೆಚ್ಚು ಬಳಸುತ್ತಾರೆ. ನೀವು ಯಾವುದನ್ನೂ ಪೋಸ್ಟ್ ಮಾಡದೇ ಇದ್ದರೆ ಜನರಿಗೆ ಅದು ಗೊತ್ತಾಗುತ್ತದೆ. ರಿಯಾಕ್ಟ್ ಆಗಬೇಕಾದ ಸಮಯಕ್ಕೆ ತಕ್ಷಣ ಪ್ರತಿಕ್ರಿಯಿಸಬೇಕು ಎಂದರು.

ಸಭೆಯ ಅಂತ್ಯದಲ್ಲಿ ಪ್ರಧಾನಿ ಮೋದಿ ನೇರವಾಗಿ ತೀವ್ರವಾದ ಪ್ರಶ್ನೆಗಳನ್ನು ಕೇಳಿದರು. ಸಂಸದರ ವರದಿ ಕಾರ್ಡ್ ಪ್ರಶ್ನಿಸಿದರು. ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ಪಕ್ಷಕ್ಕೆ ನಿಮ್ಮ ಕೊಡುಗೆ ಏನು? ಕಾರ್ಯಕರ್ತರಿಗೆ ನಿಮ್ಮ ಕೊಡುಗೆ ಏನು? ಅಂತಿಮವಾಗಿ ನಿಮ್ಮ ಕುಟುಂಬಕ್ಕೆ ನಿಮ್ಮ ಕೊಡುಗೆ ಏನು? ಈ ಪ್ರಶ್ನೆಗಳು ಸಂಸದರ ಹೊಣೆಗಾರಿಕೆ, ಕೆಲಸದ ಪ್ರಮಾಣಿಕತೆ ಮತ್ತು ಸಾರ್ವಜನಿಕ ಸಂಪರ್ಕದ ಕುರಿತು ಗಂಭೀರ ಚಿಂತನೆ ಹುಟ್ಟಿಸಿದವು.

45 ನಿಮಿಷಗಳ ‘ಪ್ರಧಾನಮಂತ್ರಿ ಕ್ಲಾಸ್’ನಲ್ಲಿ ಮೋದಿ ನೀಡಿದ ಮುಖ್ಯ ಸಂದೇಶಗಳು:

  • ಜನರೊಂದಿಗೆ ನಿರಂತರ ಸಂಪರ್ಕ
  • ಕಾರ್ಯಕರ್ತರ ಗೌರವ
  • ಸೋಶಿಯಲ್ ಮೀಡಿಯಾದ ಪರಿಣಾಮಕಾರಿ ಬಳಕೆ
  • ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರ
  • ವಿರೋಧ ಪಕ್ಷದ ಶಕ್ತಿಯುತ ಪಾತ್ರ
  • ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣದ ಪ್ರತಿಕ್ರಿಯೆ
  • ಕುಟುಂಬ, ಕ್ಷೇತ್ರ ಮತ್ತು ಪಕ್ಷ ಎಲ್ಲರ ನಡುವಿನ ಸಮತೋಲನ
  • ಈ ಸಭೆ ಕರ್ನಾಟಕ ಸಂಸದರ ಕೆಲಸದ ಶೈಲಿ ಹಾಗೂ ಪಕ್ಷದ ಸಂಘಟನೆಗೆ ಹೊಸ ಚೈತನ್ಯ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.