*ಹಿಂದಿನ ಸರ್ಕಾರಗಳ ವೈದ್ಯಕೀಯ ಶಿಕ್ಷಣ ನೀತಿಗೆ ಮೋದಿ ಕಿಡಿ*ನೀತಿ ಸರಿ ಇದ್ದಿದ್ದರೆ ವಿದೇಶಕ್ಕೆ ಹೋಗುವ ಸ್ಥಿತಿ ಬರುತ್ತಿರಲಿಲ್ಲ*ಉಕ್ರೇನ್‌ನಿಂದ ಮರಳಿದವರ ಜತೆ ಸಂವಾದದಲ್ಲಿ ಮೋದಿ*ಮೋದಿ ಭಾರತದ ಭರವಸೆಯ ಸೇತು: ಸಚಿವ ಗೋಯಲ್‌ ಪೋಸ್ಟ್‌ 

ನವದೆಹಲಿ (ಮಾ. 04): ಯುದ್ಧಪೀಡಿತ ಉಕ್ರೇನಿನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸುತ್ತಿರುವ ಭಾರತದ ಪ್ರಯತ್ನಗಳ ಕುರಿತು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಸ್ವದೇಶಿ ಮೈಕ್ರೋಬ್ಲಾಗಿಂಗ್‌ ಆ್ಯಪ್‌ ‘ಕೂ’ ನಲ್ಲಿ ಚಿತ್ರವೊಂದನ್ನು ಪೋಸ್ಟ್‌ ಮಾಡಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಭಾರತದ ಭರವಸೆಯ ಸೇತು’ ಎಂದು ಪಿಯೂಷ್‌ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ನಲ್ಲಿರುವ ಚಿತ್ರದಲ್ಲಿ ಮೋದಿ ನದಿಯಲ್ಲಿ ಅರ್ಧ ಮುಳುಗಿದ್ದು ಅವರ ಕೈಗಳು ಎರಡೂ ದಂಡೆಗಳನ್ನು ಸ್ಪರ್ಶಿಸುತ್ತಿವೆ. ಒಂದು ದಂಡೆಯನ್ನು ಉಕ್ರೇನ್‌ ಇನ್ನೊಂದನ್ನು ಭಾರತ ಎಂದು ಸೂಚಿಸಲಾಗಿದೆ. ಭಾರತದ ವಿದ್ಯಾರ್ಥಿಗಳು ಪ್ರಧಾನಿಯನ್ನು ಸೇತುವೆಯಂತೆ ಬಳಸಿ ಅವರ ಸಹಾಯದಿಂದ ಉಕ್ರೇನಿನಿಂದ ಸುರಕ್ಷಿತವಾಗಿ ಪಾರಾಗುತ್ತಿದ್ದಾರೆ.

ಅದೇ ಉಕ್ರೇನಿನಲ್ಲಿ ಸಿಲುಕಿದ ಪಾಕಿಸ್ತಾನ, ಚೀನಾ ಹಾಗೂ ಅಮೆರಿಕ ದೇಶಗಳ ವಿದ್ಯಾರ್ಥಿಗಳು ಸಹಾಯಕ್ಕಾಗಿ ಮೊರೆಯಿಡುತ್ತಿದ್ದರೂ ಆ ದೇಶದ ನಾಯಕರಾದ ಇಮ್ರಾನ್‌ ಖಾನ್‌, ಕ್ಸಿ ಜಿನ್‌ಪಿಂಗ್‌ ಹಾಗೂ ಜೋ ಬೈಡನ್‌ ಸುಮ್ಮನೆ ನೋಡುತ್ತಿದ್ದಾರೆ ಎಂಬಂತೇ ಚಿತ್ರಿಸಲಾಗಿದೆ.

ಇದನ್ನೂ ಓದಿ:1957 ರಿಂದ 1971: 6 ಬಾರಿ ಭಾರತ ಪರ ವಿಟೋ ಅಧಿಕಾರ ಬಳಸಿದ ರಷ್ಯಾ, ಪ್ರತಿ ಬಾರಿ ಅಮೆರಿಕದ ವಿರೋಧ!

ಹಿಂದಿನ ಸರ್ಕಾರಗಳ ವೈದ್ಯಕೀಯ ಶಿಕ್ಷಣ ನೀತಿಗೆ ಮೋದಿ ಕಿಡಿ: ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ‘ಈ ಹಿಂದಿನ ಸರ್ಕಾರಗಳು (ಕಾಂಗ್ರೆಸ್‌), ನಮ್ಮ ವೈದ್ಯಕೀಯ ಶಿಕ್ಷಣ ನೀತಿಯನ್ನು ಸರಿ ಇರಿಸಿದ್ದರೆ, ಇಂದು ನೀವು ವಿದೇಶಕ್ಕೆ ಶಿಕ್ಷಣಕ್ಕಾಗಿ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ನಮ್ಮ ಸರ್ಕಾರ ಸಾಕಷ್ಟುಮೆಡಿಕಲ್‌ ಕಾಲೇಜು ಆರಂಭಿಸಿ ಇದನ್ನು ಸರಿಪಡಿಸಲು ಕ್ರಮ ಕೈಗೊಂಡಿದೆ’ ಎಂದರು ಈ ನಡುವೆ, ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿನ ತಮ್ಮ ಅನುಭವವನ್ನು ಪ್ರಧಾನಿ ಅವರೊಂದಿಗೆ ಹಂಚಿಕೊಂಡರು ಎಂದು ಮೂಲಗಳು ತಿಳಿಸಿವೆ.

Scroll to load tweet…

ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಆಪರೇಶನ್‌ ಗಂಗಾ ಎಂಬ ಯೋಜನೆಯನ್ನು ಭಾರಯ ಆರಂಭಿಸಿದೆ. ಉಕ್ರೇನ್‌ ನೆರೆಯ ರಾಷ್ಟ್ರಗಳಿಂದ ಬರುವ ವಿಮಾನಗಳ ಮೇಲ್ವಿಚಾರಣೆ ನೋಡಿಕೊಳ್ಳಲು ನಾಲ್ವರು ಕೇಂದ್ರ ಸಚಿವರನ್ನು ಸಹ ನೇಮಕ ಮಾಡಲಾಗಿದೆ.

ಶಾಂತಿ ಮಾತುಕತೆ: ರಷ್ಯಾ-ಉಕ್ರೇನ್‌ಗೆ ಮೋದಿ ಕರೆ: ರಷ್ಯಾ ಉಕ್ರೇನ್‌ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಉಕ್ರೇನ್‌ ಬಿಕ್ಕಟ್ಟಿನ ಸಂಬಂಧ ನಡೆಸಲಾದ ಕ್ವಾಡ್‌ ರಾಷ್ಟ್ರಗಳ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿRussia Ukraine Crisis ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿಗಳೊಂದಿಗೆ ಮೋದಿ ಮಾತು!

ಯುದ್ಧದ ಬದಲು ಶಾಂತಿ ಮಾತುಕತೆಗೆ ಹೆಚ್ಚಿನ ಒತ್ತು ನೀಡಬೇಕು. ಉಭಯ ದೇಶಗಳು ಪರಸ್ಪರ ಸಾರ್ವಭೌಮತೆಯನ್ನು ಗೌರವಿಸಬೇಕು. ಕ್ವಾಡ್‌ ರಾಷ್ಟ್ರಗಳು ಯಾವಾಗಲೂ ತಮ್ಮ ಮೂಲ ಉದ್ದೇಶಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು. ಇಂಡೋ ಪೆಸಿಫಿಕ್‌ ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕ್ವಾಡ್‌ ದೇಶಗಳು ಸಹಕಾರ ನೀಡಬೇಕು. ಉಕೇನ್‌ನಲ್ಲಿ ನಡೆದಿರುವಂತಹ ಘಟನೆ ಇಂಡೋ ಪೆಸಿಫಿಕ್‌ ವಲಯದಲ್ಲಿ ನಡೆಯದಂತೆ ಎಚ್ಚರವಹಿಸಬೇಕು ಎಂದು ಅವರು ಹೇಳಿದರು.

ಕ್ವಾಡ್‌ ಶೃಂಗದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪಾಲ್ಗೊಂಡಿದ್ದರು.

ಭಾರತೀಯರ ಸುರಕ್ಷತೆ ನಮ್ಮ ಆದ್ಯತೆ: ರಾಜೀವ್‌:  ಯುದ್ಧ ಪೀಡಿತ ಉಕ್ರೇನ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ತಲುಪಿದ ಭಾರತೀಯ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಗುರುವಾರ ಸ್ವಾಗತಿಸಿದರು. ಬಳಿಕ ಮಾತನಾಡಿದ ಅವರು, ‘ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರ ಉಕ್ರೇನ್‌ನಲ್ಲಿ ಅತಂತ್ರರಾಗಿರುವ ಪ್ರತಿಯೊಬ್ಬ ಭಾರತೀಯನನ್ನು ಸುರಕ್ಷಿತವಾಗಿ ಮರಳಿ ಕರೆತರುವವರೆಗೂ ಆಪರೇಷನ್‌ ಗಂಗಾ ಕಾರಾರ‍ಯಚರಣೆಯನ್ನು ಮುಂದುವರೆಸಲಿದೆ. 

ಸಂಘರ್ಷ ಅಥವಾ ಇನ್ಯಾವುದೇ ಸಂಕಷ್ಟದಲ್ಲಿ ಸಿಲುಕುವ ಪ್ರತಿಯೊಬ್ಬ ಭಾರತೀಯರನ್ನೂ ಅವರ ಕುಟುಂಬದೊಂದಿಗೆ ಸುರಕ್ಷಿತವಾಗಿ ಸೇರಿಸುವುದು ನರೇಂದ್ರ ಮೋದಿ ನಾಯಕತ್ವದ ಸರ್ಕಾರದ ಆದ್ಯತೆ. ಶ್ರೇಷ್ಠ ಭಾರತದ ಹೆಮ್ಮೆಯ ಪ್ರಜೆಗಳಾಗಿರುವುದಕ್ಕೆ ನಿಮಗೆಲ್ಲ ದನ್ಯವಾದ, ಜೈಹಿಂದ್‌’ ಎಂದು ಹೇಳಿದರು.