ದೇಶಬಾಂಧವರ ಎದುರು ನನ್ನ ನೋವು ತೋಡಿಕೊಳ್ಳದೆ, ಇನ್ಯಾರ ಮುಂದೆ ಹೇಳಿಕೊಳ್ಳಲಿ!
ಇತ್ತೀಚೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದು ವಿವಾದವಾಗಿತ್ತು. ಇದರ ಕುರಿತಾಗಿ ಕೆಂಪುಕೋಟೆಯಲ್ಲಿ ಸೂಚ್ಯವಾಗಿ ತಿಳಿಸಿದ ಪ್ರಧಾನಿ ಮೋದಿ, ಮಹಿಳೆಯರಿಗೆ ಅಗೌರವ ತೋರದೇ ಇರುವ ಪ್ರತಿಜ್ಞೆಯನ್ನು ಮಾಡಬೇಕಿದೆ ಎಂದು ಹೇಳಿದರು.
ನವದೆಹಲಿ (ಆ.15): ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿನ ತಮ್ಮ ಭಾಷಣದ ವೇಳೆ, ತಮ್ಮಲ್ಲಿರುವ ನೋವುಗಳ ಬಗ್ಗೆಯೂ ಹೇಳಿದರು. ನನ್ನಲ್ಲಿ ಒಂದು ನೋವಿದೆ. ಈ ನೋವನ್ನು ದೇಶದ ಜನರಾದ ನಿಮ್ಮ ಮುಂದೆ ಹೇಳಿಕೊಳ್ಳದೆ, ಮತ್ತೆ ಯಾರ ಮುಂದೆ ನಾನು ಹೇಳಿಕೊಳ್ಳಲಿ ಎಂದು ಪ್ರಧಾನಿ ಮೋದಿ ಹೇಳಿದರು. ಇಂದು ಒಂದಲ್ಲಾ ಒಂದು ಕಾರಣಕ್ಕೆ ನಮ್ಮ ನಡುವೆಯೇ ಒಂದು ವಿಕೃತಿ ಹುಟ್ಟಿಕೊಂಡಿದೆ. ನಮ್ಮ ಮಾತುಗಳಲ್ಲಿ ಮಹಿಳೆಯನ್ನು ಅಗೌರವದಿಂದ ನೋಡುವ ಕೀಳು ಮಟ್ಟಕ್ಕೆ ಇಳಿದಿದ್ದೇವೆ ಎಂದರು. ಪ್ರತಿದಿನ ಸಜಹಜವಾಗಿ ಆಡುವ ನಮ್ಮ ಮಾತುಗಳಲ್ಲೂ ಮಹಿಳೆಯರನ್ನು ಅಗೌರವಿಸುತ್ತಿದ್ದೇವೆ. ದೈನಂದಿನ ಜೀವನದಲ್ಲಿ ಮಹಿಳೆಯರನ್ನು ಅವಮಾನಿಸುವ ಎಲ್ಲಾ ಸಣ್ಣ ಪುಟ್ಟ ಮಾತುಗಳನ್ನು ತೊಡೆದುಹಾಕಲು ನಾವು ಪ್ರತಿಜ್ಞೆ ತೆಗೆದುಕೊಳ್ಳಬಹುದೇ? ರಾಷ್ಟ್ರದ ಕನಸುಗಳನ್ನು ನನಸಾಗಿಸುವಲ್ಲಿ ಮಹಿಳೆಯರ ಹೆಮ್ಮೆ ದೊಡ್ಡ ಬಂಡವಾಳವಾಗಲಿದೆ, ನಾನು ಇದನ್ನು ಬಲವಾಗಿ ನೋಡುತ್ತಿದ್ದೇನೆ ಎಂದು ಹೇಳಿದರು. ಇದರೊಂದಿಗೆ ಇತ್ತೀಚಿನ ದಿನದಲ್ಲಿ ಲೋಕಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ನ ಅಧೀರ್ ರಂಜನ್ ಚೌಧರಿ ಮಾತನ್ನು ಟೀಕೆ ಮಾಡಿದರು.
ಕೆಂಪುಕೋಟೆಯಿಂದ ಕಾಂಗ್ರೆಸ್ಗೆ ಟಾಂಗ್: ಮೋದಿ ಹೇಳಿದ ಮಾತನ್ನು ನೇರವಾಗಿ ಕಾಂಗ್ರೆಸ್ಗೆ ನೀಡಿದ ಟಾಂಗ್ ಎಂದೇ ಬಿಂಬಿಸಲಾಗುತ್ತಿದೆ. ಅದರೊಂದಿಗೆ ಮುಂದಿನ ಲೋಕಸಭೆ ಚುನಾವಣೆಯ ವೇಳೆ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವ ನಿಟ್ಟಿನಲ್ಲಿ ಅವರ ಅಭಿಪ್ರಾಯ ಎಂದೂ ಹೇಳಲಾಗಿದೆ. ಭಾರತದ ಅಭಿವೃದ್ಧಿಗೆ ಮಹಿಳೆಯರನ್ನು ಗೌರವ ನೀಡುವುದೇ ಪ್ರಮುಖವಾದ ಆಧಾರಸ್ತಂಭ. ನೀವು ನಮ್ ನಾರಿ ಶಕ್ತಿಗೆ ಬೆಂಬಲ ನೀಡಬೇಕು ಎಂದು ಮೋದಿ ಹೇಳಿದರು.
ಮಾತನಾಡುವಾಗಲೆ ಭಾವುಕರಾಗಿದ್ದ ಪ್ರಧಾನಿ ಮೋದಿ, ಇಡೀ ದೇಶ ಇಂದು ಮಹಿಳೆಯರಿಗೆ ಅಗೌರವ ತೋರದೇ ಇರುವ ನಿಟ್ಟಿನಲ್ಲಿ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು. ಭಾರತದಲ್ಲಿ ಮಹಿಳೆಯರು ಹಲವಾರು ಅಡೆತಡೆಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಮಹಿಳೆಯರನ್ನು ಅಗೌರವಿಸುವ ಯಾವುದೇ ವರ್ತನೆ ಅಥವಾ ನಡವಳಿಕೆಯನ್ನು ತೊಡೆದುಹಾಕಲು ಭಾರತೀಯರು ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ಮೋದಿ ಟೀಕಿಸಿದರು. "ಮಾತು ಮತ್ತು ನಡವಳಿಕೆಯಲ್ಲಿ ನಾವು ಮಹಿಳೆಯರ ಘನತೆಯನ್ನು ಕಡಿಮೆ ಮಾಡುವ ಯಾವುದನ್ನೂ ಮಾಡುವುದಿಲ್ಲ ಎನ್ನುವ ಪ್ರತಿಜ್ಞೆ ಮಾಡಬೇಕು" ಎಂದು ಪ್ರಧಾನಿ ಮೋದಿ ಹೇಳಿದರು.
ಕಾಶ್ಮೀರದಲ್ಲಿ ಸ್ವಾತಂತ್ರ ಸಂಭ್ರಮ: ವಿಶ್ವದ ಅತೀ ಎತ್ತರದ ಸೇತುವೆ ಮೇಲೆ ಹಾರಿದ ರಾಷ್ಟ್ರಧ್ವಜ
ಭಾರತದ ಏಕತೆ ವಿವಿಧತೆಯಲ್ಲಿ ನೆಲೆಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. "ಈ ಏಕತೆಯನ್ನು ಖಚಿತಪಡಿಸಿಕೊಳ್ಳಲು ನಾವು ಲಿಂಗ ಸಮಾನತೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಮಗ ಹಾಗೂ ಮಗಳನ್ನು ಸಮಾನವಾಗಿ ಪರಿಗಣಿಸದೇ ಇದ್ದಲ್ಲಿ ಏಕತೆ ಸಾಧ್ಯವಿಲ್ಲ' ಎಂದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಶಕ್ತಿಯನ್ನು ಎತ್ತಿ ಹಿಡಿದ ಪ್ರಧಾನಿ ಮೋದಿ, "ಅದು ರಾಣಿ ಲಕ್ಷ್ಮಿಬಾಯಿ, ಝಲ್ಕರಿ ಬಾಯಿ, ಚೆನ್ನಮ್ಮ, ಬೇಗನ್ ಹಜರತ್ ಮಹಲ್, ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಾಗುತ್ತದೆ' ಎಂದು ಹೇಳಿದರು.
ಜೈ ಜವಾನ್, ಜೈ ಕಿಸಾನ್ ಘೋಷಣೆಗೆ ಹೊಸ ಸ್ಲೋಗನ್ ಸೇರಿಸಿದ ಪ್ರಧಾನಿ ಮೋದಿ!
ರಾಷ್ಟ್ರಪತ್ನಿ ವಿವಾದದ ಬಗ್ಗೆ ಮಾತು: ರಾಜಕೀಯ ಸನ್ನಿವೇಶಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು "ರಾಷ್ಟ್ರಪತ್ನಿ" ಎಂದು ಕರೆದಿದ್ದು, ಇದು ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿತ್ತು ಇದೇ ವಿಚಾರದೊಂದಿಗೆ ಪ್ರಧಾನ ಮಂತ್ರಿಯವರು ಮಹಿಳಾ ಶಕ್ತಿಯ ಉಲ್ಲೇಖವನ್ನು ಮಾಡಿದ್ದಾರೆ. ಅಧೀರ್ ರಂಜನ್ ಚೌಧರಿ ನೀಡಿದ ಹೇಳಿಕೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ದೊಡ್ಡವಿವಾದಕ್ಕೆ ಕಾರಣವಾಗಿತ್ತು. ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಹಾಗೀ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಕುರಿತಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿಯ ನೇತೃತ್ವ ವಹಿಸಿದ್ದರು. ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಡುವೆ ಈ ಕುರಿತಾಗಿ ದೊಡ್ಡ ವಾಕ್ಸಮರವೇ ನಡೆದಿತ್ತು. ಸ್ವತಃ ಇದೂ ಕೂಡ ವಿವಾದವಾಗಿತ್ತು. ಆತ್ಮನಿರ್ಭರ ಭಾರತ್ ಕುರಿತು ಮಾತನಾಡಿದ ಪ್ರಧಾನಿ ಮೋದಿ, "ಆಮದು ಮಾಡಿಕೊಂಡ ಆಟಿಕೆಗಳನ್ನು ಬೇಡ ಎಂದು ಹೇಳುವ ಮಕ್ಕಳಿಗೆ ನಾನು ನಮಸ್ಕರಿಸುತ್ತೇನೆ; 5 ವರ್ಷದ ಮಗು 'ವಿದೇಶಿ ಬೇಡ' ಎಂದು ಹೇಳಿದಾಗ, 'ಆತ್ಮನಿರ್ಭರ್ ಭಾರತ್' ಅವನ ರಕ್ತನಾಳಗಳಲ್ಲಿ ಹರಿಯುತ್ತದೆ." ಎಂದರು.