Saryu Nahar Project 4 ದಶಕಗಳಿಂದ ಬಾಕಿ ಇದ್ದ ಯೋಜನೆ 4 ವರ್ಷಗಳಲ್ಲಿ ಪೂರ್ಣಗೊಳಿಸಿದ ಮೋದಿ, ಡಿ.11ಕ್ಕೆ ಉದ್ಘಾಟನೆ!
- ಸುಮಾರು 4 ದಶಕಗಳಿಂದ ಬಾಕಿಯಿದ್ದ ಯೋಜನೆ ಕೇವಲ 4 ವರ್ಷಗಳಲ್ಲಿ ಪೂರ್ಣ
- ನೆನೆಗುದಿಗೆ ಬಿದ್ದಿದ್ದ ಐದು ನದಿಗಳ ಜೋಡಣೆ ಯೋಜನೆ
- ಡಿ.11ಕ್ಕೆ ಸರಯು ನಹರ್ ರಾಷ್ಟ್ರೀಯ ಯೋಜನೆ ಉದ್ಘಾಟನೆ
- ನಾಳೆ ಪ್ರಧಾನಿ ಮೋದಿ ಉತ್ತರಪ್ರದೇಶದ ಬಲರಾಂಪುರದಲ್ಲಿ ಯೋಜನೆ ಉದ್ಘಾಟನೆ
ನವದೆಹಲಿ(ಡಿ.11): ಒಂದಲ್ಲ, ಎರಡಲ್ಲ ಬರೋಬ್ಬರಿ 4 ದಶಕಗಳಿಂದ ರೈತರು ಕಾದು ಕಾದು ಸುಸ್ತಾಗಿದ್ದರು. ರೈತರ (Farmers) ಕಲ್ಯಾಣ ಹಾಗೂ ಸಬಲೀಕರಣಕ್ಕೆ 1978ರ ಕೈಗೆತ್ತಿಕೊಂಡ ಉತ್ತರ ಪ್ರದೇಶ ನದಿ ಜೋಡಣೆ (Interlinking Rivers) ಯೋಜನೆ ಹಲವು ಕಾರಣಗಳಿಂದ ಮುಂದೆ ಸಾಗಿರಲಿಲ್ಲ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಯೋಜನೆ ಕೈಗೆತ್ತಿಕೊಂಡ ಪ್ರಧಾನಿ ನರೇಂದ್ರ ಮೋದಿ(PM Narendra Modi) ಸರ್ಕಾರ ಯೋಜನೆ ಪೂರ್ಣಗೊಳಿಸಿದೆ. ಘಘರಾ, ಸರಯು, ರಪ್ತಿ, ಬಾನ್ ಗಂಗಾ ಮತ್ತು ರೋಹಿಣಿ ನದಿಗಳ ಅಂತರ ಜೋಡಣೆಯನ್ನು ಯಶಸ್ವಿಯಾಗಿ ಮಾಡಿಮುಗಿಸಿದೆ. ಇದೀಗ ಇದೇ ನಹರ್ ರಾಷ್ಟ್ರೀಯ ಯೋಜನೆಯನ್ನು(Saryu Nahar National Project) ನಾಳೆ(ಡಿ.11) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಮೋದಿ ಅವರು ಉತ್ತರ ಪ್ರದೇಶದ ಬಲರಾಂಪುರಕ್ಕೆ(Balrampur, UP) ಡಿಸೆಂಬರ್ 11ರಂದು ಮಧ್ಯಾಹ್ನ 1 ಗಂಟೆಗೆ ಭೇಟಿ ನೀಡಲಿದ್ದಾರೆ . ಈ ಭೇಟಿಯಲ್ಲಿ ಮೋದಿ ಸರಯು ನಹರ್ ರಾಷ್ಟ್ರೀಯ ಯೋಜನೆ ಉದ್ಘಾಟಿಸಲಿದ್ದಾರೆ. ಈ ಯೋಜನೆಯ ಕೆಲಸವು 1978ರಲ್ಲಿ ಪ್ರಾರಂಭವಾಯಿತು, ಆದರೆ ನಂತರ ನಿರಂತರ ಬಜೆಟ್ ಬೆಂಬಲವಿಲ್ಲದೆ, ಅಂತರ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಮತ್ತು ಸೂಕ್ತ ಮೇಲ್ವಿಚಾರಣೆ ಇಲ್ಲದೆ ಅದು ವಿಳಂಬವಾಯಿತು ಮತ್ತು ಸುಮಾರು 4 ದಶಕ ಕಳೆದರೂ ಅದು ಪೂರ್ಣಗೊಂಡಿರಲಿಲ್ಲ. ಆದರೆ ಪ್ರಧಾನಿ ಮೋದಿ ಈ ಯೋಜನೆ ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಕುರಿತು ಸ್ವತಃ ಮೋದಿ ಟ್ವೀಟ್ ಮಾಡಿದ್ದಾರೆ.
Modi In UP: ಕೆಂಪು ಟೋಪಿಯವರು ಯುಪಿಗೆ ರೆಡ್ ಅಲರ್ಟ್: ಸಮಾಜವಾದಿ ಪಾರ್ಟಿ ವಿರುದ್ಧ ಮೋದಿ ಕಿಡಿ!
ರೈತರ ಕಲ್ಯಾಣ ಮತ್ತು ಸಬಲೀಕರಣದ ದೂರದೃಷ್ಟಿ(farmer welfare and empowerment) ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಗೆ ಒತ್ತು ನೀಡಿದ ಮೋದಿ, ದೀರ್ಘಾವಧಿ ಬಾಕಿ ಇರುವ ಯೋಜನೆಗಳನ್ನು ಪೂರ್ಣಗೊಳಿಸಲು ಎಲ್ಲಾ ಸಚಿವಾಲಯಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಮೋದಿ ಬದ್ಧತೆಯಿಂದಾಗಿ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ. 2016ರಲ್ಲಿ, ಯೋಜನೆಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ವ್ಯಾಪ್ತಿಗೆ ತರಲಾಯಿತು. ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಯಿತು. ಈ ಪ್ರಯತ್ನದಲ್ಲಿ ಹೊಸ ಕಾಲುವೆಗಳನ್ನು ನಿರ್ಮಿಸಲು ಹೊಸದಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಮತ್ತು ಯೋಜನೆಯಲ್ಲಿನ ನಿರ್ಣಾಯಕ ಅಂತರಗಳನ್ನು ತುಂಬಲು ಹಾಗೂ ಹಿಂದಿನ ಭೂ ಸ್ವಾಧೀನ ಕುರಿತು ಬಾಕಿ ಇದ್ದ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ನವೀನ ಪರಿಹಾರಗಳನ್ನು ಕಂಡುಕೊಳ್ಳಲಾಯಿತು. ಯೋಜನೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ ಪರಿಣಾಮ ಯೋಜನೆಯು ನಾಲ್ಕು ವರ್ಷಗಳಲ್ಲಿ ಪೂರ್ಣಗೊಂಡಿದೆ.
Winter Session: ನೀವಾಗೇ ಬದಲಾಗಿ, ಇಲ್ಲದಿದ್ದರೆ ದೊಡ್ಡ ಬದಲಾವಣೆಯಾಗುತ್ತದೆ: ಸಂಸದರಿಗೆ ಮೋದಿ ವಾರ್ನಿಂಗ್!
ಸರಯು ನಹರ್ ರಾಷ್ಟ್ರೀಯ ಯೋಜನೆಗೆ ಒಟ್ಟು 9800 ಕೋಟಿ ರೂ,ಗೂ ಅಧಿಕ ಹಣ ವ್ಯಯಿಸಲಾಗಿದೆ ಮತ್ತು ಅದರಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿಯೇ 4600 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಯೋಜನೆಯಡಿ ಐದು ಅಂತರ ನದಿಗಳ ಜೋಡಣೆ ಮಾಡಲಾಗುವುದು, ಅವುಗಳೆಂದರೆ- ಘಘರ, ಸರಯು, ರಪ್ತಿ, ಬಾನ್ ಗಂಗಾ ಮತ್ತು ರೋಹಿಣಿ, ಇವುಗಳ ಮೂಲಕ ಆ ಪ್ರದೇಶದಲ್ಲಿ ಜಲಸಂಪನ್ಮೂಲದ ಗರಿಷ್ಠ ಬಳಕೆ ಖಾತ್ರಿಪಡಿಸಲಾಗುವುದು.
ಈ ಯೋಜನೆಯಡಿ 14 ಲಕ್ಷ ಹೆಕ್ಟರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಖಾತ್ರಿಪಡಿಸಿದಂತಾಗುತ್ತದೆ ಮತ್ತು 6200 ಗ್ರಾಮಗಳ ಸುಮಾರು 29 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಈ ಯೋಜನೆ ಪೂರ್ವ ಉತ್ತರ ಪ್ರದೇಶದ 9 ಜಿಲ್ಲೆಗಳಿಗೆ ಅನುಕೂಲವಾಗಲಿದೆ, ಅವುಗಳೆಂದರೆ ಬಹರೈಚ್, ಶ್ರಾವಸ್ತಿ, ಬಲರಾಂ ಪುರ್, ಗೊಂಡಾ, ಸಿದ್ದಾರ್ಥನಗರ, ಬಸ್ತಿ, ಸಂತ ಕಬೀರ್ ನಗರ, ಗೋರಖ್ ಪುರ್ ಮತ್ತು ಮಹಾರಾಜ್ ಗಂಜ್. ಯೋಜನೆ ದೀರ್ಘಾವಧಿ ವಿಳಂಬದಿಂದ ಹೆಚ್ಚು ಬಳಲಿದ ಆ ಭಾಗದ ರೈತರು ಇದೀಗ ಮೇಲ್ದರ್ಜೆಗೇರಿಸಿದ ನೀರಾವರಿ ಸಾಮರ್ಥ್ಯದಿಂದಾಗಿ ಅಪಾರ ಪ್ರಯೋಜನ ಪಡೆಯಲಿದ್ದಾರೆ. ಈಗ ದೊಡ್ಡ ಪ್ರಮಾಣದಲ್ಲಿ ಬೆಳೆಗಳನ್ನು ಬೆಳೆಯಲು ಮತ್ತು ಕೃಷಿ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗಲಿದೆ.