Ukraine Crisis: ರಷ್ಯಾ ಅಧ್ಯಕ್ಷ ಪುಟಿನ್ ಜೊತೆ 50 ನಿಮಿಷ ಮೋದಿ ಮಾತು!
* ಉಕ್ರೇನ್ ಮೇಲೆ ರಷ್ಯಾ ದಾಳಿ, ಭಾರತೀಯ ವಿದ್ಯಾರ್ಥಿಗಳಿಗೆ ಆತಂಕ
* ಭಾರತೀಯರ ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ
* ಭಾರತೀಯರ ಸ್ಥಳಾಂತರ ವಿಚಾರವಾಗಿ ಪುಟಿನ್ ಜೊತೆ ಮಾತುಕತೆ
ಮಾಸ್ಕೋ(ಮಾ.07): ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ 12 ನೇ ದಿನ ತಲುಪಿದ್ದು, ಇಡೀ ವಿಶ್ವವನ್ನೇ ಕಂಗಾಲುಗೊಳಿಸಿದೆ. ಯುದ್ಧ ಶೀಘ್ರವಾಗಿ ಕೊನೆಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು, ಇಲ್ಲಿ ಸಂಭವಿಸುತ್ತಿರುವ ಸಾವು ನೋವು ದಿನೇ ದಿನೇ ಹೆಚ್ಚುತ್ತಿದೆ. ಇನ್ನು ಈ ನಡುವೆ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ಭಾರತ ಸರ್ಕಾರ ಆಪರೇಷನ್ ಗಂಗಾ ನಡೆಸುತ್ತಿದೆ. ಉಕ್ರೇನ್ನ ಯುದ್ಧ ಪೀಡಿತ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಇನ್ನೂ ಸಿಕ್ಕಿಬಿದ್ದಿದ್ದಾರೆ. ಅವರನ್ನು ಸುರಕ್ಷಿತವಾಗಿ ಹೊರತರಲು ರಷ್ಯಾ ಮತ್ತು ಉಕ್ರೇನ್ನೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಸದ್ಯ ಈ ನಿಟ್ಟಿನಲ್ಲಿ ಈಗಾಗಲೇ ಉಕಗ್ರೇನ್ ಅಧ್ಯಕ್ಷರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್ ಜೊತೆಯೂ ಮಾತುಕತೆ ನಡೆಸಿದ್ದಾರೆ.
ಸುಮಾರು 50 ನಿಮಿಷಗಳ ಕಾಲ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಉಕ್ರೇನ್ನಲ್ಲಿನ ಪರಿಸ್ಥಿತಿಯನ್ನು ಉಭಯ ನಾಯಕರು ಚರ್ಚಿಸಿದ್ದಾರೆ. ಅಧ್ಯಕ್ಷ ಪುಟಿನ್ ಅವರು ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿಗೆ ನೀಡಿದರು. ಇದೇ ವೇಳೆ ಪುಟಿನ್ ತಮ್ಮ ಹಾಗೂ ಉಕ್ರೇನ್ ನಡುವಿನ ಮಾತುಕತೆ ಹಾಗೂ ಸ್ಥಿತಿಗತಿಗಳ ಬಗ್ಗೆಯೂ ಮೋದಿಗೆ ಮಾಹಿತಿ ನೀಡಿದ್ದಾರೆ.
ಹೀಗಿರುವಾಗ ಪಿಎಂ ಮೋದಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ನೇರ ಮಾತುಕತೆ ನಡೆಸುವಂತೆ ಅಧ್ಯಕ್ಷ ಪುಟಿನ್ ಅವರಿಗೆ ಒತ್ತಾಯಿಸಿದ್ದಾರೆನ್ನಲಾಗಿದೆ. ಅಲ್ಲದೇ ಸುಮಿ ಸೇರಿದಂತೆ ಉಕ್ರೇನ್ನ ಕೆಲವು ಭಾಗಗಳಲ್ಲಿ ಕದನ ವಿರಾಮ ಮತ್ತು ಮಾನವೀಯ ಕಾರಿಡಾರ್ಗಳ ನಿರ್ಮಿಸಿದ ರಷ್ಯಾ ನಡೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂದು ಪುಟಿನ್ ಹಿಂದೆ ಕೈಕಟ್ಟಿ ನಿಂತಿದ್ದ ಮೋದಿ, ಮತ್ತೆ ವೈರಲ್ ಆಯ್ತು ಫೋಟೋ
ಸುಮಿಯಿಂದ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ಅವರ ಸುರಕ್ಷಿತ ಸ್ಥಳಾಂತರಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿಗೆ ಭರವಸೆ ನೀಡಿದರು.
ಪುಟಿನ್ ಜೊತೆ ಮೋದಿ ನಿರಂತರ ಮಾತುಕತೆ
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದ ನಂತರ, ಮಾರ್ಚ್ 2 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಎರಡನೇ ಬಾರಿ ಮಾತನಾಡಿರುವುದು ಗಮನಾರ್ಹವಾಗಿದೆ. ಈ ಸಂದರ್ಭದಲ್ಲಿ, ಉಕ್ರೇನ್ನಲ್ಲಿನ ಪರಿಸ್ಥಿತಿಯನ್ನು ಇಬ್ಬರೂ ನಾಯಕರು ಪರಿಶೀಲಿಸಿದರು. ಖಾರ್ಕಿವ್ನಲ್ಲಿ ಅನೇಕ ಭಾರತೀಯ ವಿದ್ಯಾರ್ಥಿಗಳು ಸಿಲುಕಿರುವ ಪರಿಸ್ಥಿತಿಯ ಬಗ್ಗೆ ಅವರು ನಿರ್ದಿಷ್ಟವಾಗಿ ಮಾತನಾಡಿದರು ಮತ್ತು ಸಂಘರ್ಷ ವಲಯಗಳಿಂದ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಬಗ್ಗೆ ಚರ್ಚಿಸಿದರು.
Ukraine Crisis: ರಷ್ಯಾ ಸೋಲುತ್ತಿದೆ, ನಾವೀಗ ದುಸ್ವಪ್ನವಾಗಿದ್ದೇವೆ: ಜೆಲೆನ್ಸ್ಕಿ
ಈ ಸಂಭಾಷಣೆಯ ಪರಿಣಾಮವು ಕೆಲವು ಗಂಟೆಗಳ ನಂತರ ಬೆಳಕಿಗೆ ಬಂದಿತ್ತು. ಬುಧವಾರ ರಾತ್ರಿ, ಖಾರ್ಕಿವ್ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ರಷ್ಯಾ ಸುಮಾರು ಆರು ಗಂಟೆಗಳ ಕಾಲ ದಾಳಿಯನ್ನು ನಿಲ್ಲಿಸಿತು. ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾರತೀಯರಿಗೆ ತಕ್ಷಣವೇ ಖಾರ್ಕಿವ್ ತೊರೆಯುವಂತೆ ಸೂಚಿಸಿತ್ತು. ಇದಾದ ನಂತರ ರಷ್ಯಾ ಜೊತೆಗಿನ ರಾಜತಾಂತ್ರಿಕ ಮಾತುಕತೆಯ ಮೂಲಕ ದಾಳಿಯನ್ನು ನಿಲ್ಲಿಸಲು ಭಾರತಕ್ಕೆ ಸಹಾಯ ಸಿಕ್ಕಿತು.
"
ಉಕ್ರೇನ್ ಅಧ್ಯಕ್ಷರೊಂದಿಗೂ ಮೋದಿ ಮಾತು
ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸೋಮವಾರ ಮಾತನಾಡಿದರು. ಉಭಯ ನಾಯಕರ ನಡುವಿನ ಮಾತುಕತೆ ಸುಮಾರು 35 ನಿಮಿಷಗಳ ಕಾಲ ನಡೆಯಿತು. ಉಕ್ರೇನ್ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವಲ್ಲಿ ಉಕ್ರೇನ್ ಸರ್ಕಾರ ನೀಡಿದ ನೆರವಿಗಾಗಿ ಪ್ರಧಾನಮಂತ್ರಿ ಮೋದಿ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ಧನ್ಯವಾದ ಅರ್ಪಿಸಿದರು. ಇದೇ ವೇಳೆ ಸುಮಿಯಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಉಕ್ರೇನ್ ಸರ್ಕಾರದ ನಿರಂತರ ಸಹಕಾರವನ್ನು ಮೋದಿ ಕೋರಿದ್ದಾರೆ.