ಪ್ರಧಾನಿ ನರೇಂದ್ರ ಮೋದಿಯವರು ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮಶತಮಾನೋತ್ಸವದಲ್ಲಿ ಭಾಗವಹಿಸಿ, ಬಾಬಾರ ಸೇವಾ ಮನೋಭಾವವನ್ನು ಶ್ಲಾಘಿಸಿದರು. ಈ ಸ್ಮರಣಾರ್ಥವಾಗಿ 100 ರೂ. ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ನಟಿ ಐಶ್ವರ್ಯ ರೈ ಭಾಗಿಯಾಗಿದ್ದರು.
ಪುಟ್ಟಪರ್ತಿ (ಆಂಧ್ರಪ್ರದೇಶ) (ನ.20): ಶ್ರೀ ಸತ್ಯಸಾಯಿ ಬಾಬಾ ಅವರ ಶತಮಾನೋತ್ಸವದ ಆಚರಣೆ ಕೇವಲ ಹಬ್ಬವಲ್ಲ, ಇದೊಂದು ದೈವಿಕ ವರದಾನ. ಸಾಯಿಬಾಬಾ ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ, ಅವರ ಪ್ರೀತಿ ಮತ್ತು ಸೇವಾ ಮನೋಭಾವ ಕೋಟ್ಯಂತರ ಜನರಿಗೆ ಮಾರ್ಗದರ್ಶಕ ಶಕ್ತಿಗಳಾಗಿವೆ. ಜಗತ್ತಿನ 140 ದೇಶಗಳಲ್ಲಿ, ಲಕ್ಷಾಂತರ ಭಕ್ತರು ಅವರಿಂದ ಹೊಸ ಬೆಳಕು ಮತ್ತು ನಿರ್ದೇಶನವನ್ನು ಪಡೆದು ಮುಂದುವರಿಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶ್ರೀ ಸತ್ಯಸಾಯಿ ಬಾಬಾ ಜನ್ಮಶತಮಾನೋತ್ಸವ:
ಬುಧವಾರ ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮಶತಮಾನೋತ್ಸವದಲ್ಲಿ ಅವರು ಮಾತನಾಡಿದರು.‘ಭಾರತೀಯ ನಾಗರಿಕತೆಯ ಬಹುಮುಖ್ಯವಾದ ಮೌಲ್ಯವೆಂದರೆ ಸೇವೆ. ವ್ಯಕ್ತಿಯೊಬ್ಬ ಭಕ್ತಿ, ಜ್ಞಾನ ಅಥವಾ ಕರ್ಮ- ಈ ಯಾವುದೇ ಹಾದಿಯಲ್ಲಿ ನಡೆದರು ಸಹ ನಮ್ಮ ಎಲ್ಲಾ ವೈವಿಧ್ಯಮಯ ಆಧ್ಯಾತ್ಮಿಕ ಮತ್ತು ತಾತ್ವಿಕ ಸಂಪ್ರದಾಯಗಳು ಅಂತಿಮವಾಗಿ ಈ ಕಲ್ಪನೆಗೆ ಕೊಂಡೊಯ್ಯುತ್ತವೆ. ಆಧ್ಯಾತ್ಮಿಕ ಗುರು ಶ್ರೀ ಸತ್ಯಸಾಯಿ ಬಾಬಾ ಅವರ ಬೋಧನೆ ಮತ್ತು ಸೇವೆ ಲಕ್ಷಾಂತರ ಭಕ್ತರಿಗೆ ಸದಾ ಮಾರ್ಗದರ್ಶನ ನೀಡುತ್ತವೆ’ ಎಂದರು. ಇದೇ ವೇಳೆ ಸತ್ಯಸಾಯಿ ಬಾಬಾ ಅವರ ಮಹಾಸಮಾಧಿಗೂ ತೆರಳಿ ಪ್ರಧಾನಿ ಮೋದಿ ಆಶೀರ್ವಾದ ಪಡೆದರು.
ಶ್ರೀ ಸತ್ಯಸಾಯಿ ಬಾಬಾ ಸ್ಮರಣಾರ್ಥ ನಾಣ್ಯ, ಅಂಚೆಚೀಟಿ ಬಿಡುಗಡೆ
ನಾಣ್ಯ, ಅಂಚೆಚೀಟಿ ಬಿಡುಗಡೆ: ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ 100 ರು. ನಾಣ್ಯ ಮತ್ತು ಅಂಚೆಚೀಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ನಟಿ ಐಶ್ವರ್ಯ ರೈ ಬಚ್ಚನ್, ಕೇಂದ್ರ ಸಚಿವರಾದ ಜಿ. ಕಿಶನ್ ರೆಡ್ಡಿ ಮತ್ತು ಕೆ ರಾಮ್ ಮೋಹನ್ ನಾಯ್ಡು ಮೊದಲಾದವರು ಉಪಸ್ಥಿತರಿದ್ದರು.


