ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ರಿಂಗ್ ಮೆಟ್ರೋ ಸೇರಿದಂತೆ ದೆಹಲಿ ಮೆಟ್ರೋದ ಎರಡು ಹೊಸ ಕಾರಿಡಾರ್‌ಗಳಿಗೆ ಚಾಲನೆ ನೀಡಿದರು. ಇದರೊಂದಿಗೆ, ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತವೂ ಆರಂಭವಾಗಲಿದ್ದು, ವಿಪಕ್ಷಗಳು ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಜ್ಜಾಗಿವೆ.

ನವದೆಹಲಿ: ದೇಶದ ಮೊದಲ ರಿಂಗ್‌ ಮೆಟ್ರೋ ಸೇರಿದಂತೆ ದೆಹಲಿ ಮೆಟ್ರೋದ 2 ಹೊಸ ಕಾರಿಡಾರ್‌ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಚಾಲನೆ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಲಾಬಿ ಮಾರ್ಗದ ಮಜ್ಲಿಸ್ ಪಾರ್ಕ್-ಮೌಜಪುರ್-ಬಾಬರ್‌ಪುರ ಕಾರಿಡಾರ್ ಅನ್ನು ಹೊಸತಾಗಿ 12.3 ಕಿ.ಮೀ.ಗಳಷ್ಟು ವಿಸ್ತರಣೆ ಮಾಡಲಾಗಿದೆ. ಇದು ಸುಮಾರು 71.56 ಕಿ.ಮೀ. ಉದ್ದದ ವೃತ್ತವಾಗಿ ಮಾರ್ಪಟ್ಟಿದ್ದು, ಭಾರತದ ಮೊದಲ ರಿಂಗ್ ಮೆಟ್ರೋ ಎಂಬ ಹೆಗ್ಗಳಿಕೆ ಪಡೆದಿದೆ. ಅಂದರೆ ಇಡೀ ನಗರವನ್ನು ಮೆಟ್ರೋ ಮಾರ್ಗದ ಮೂಲಕ ಒಂದು ಸುತ್ತು ಹಾಕಬಹುದು.

ಇದಲ್ಲದೆ, ದೀಪಾಲಿ ಚೌಕದಿಂದ ಮಜ್ಲಿಸ್ ಪಾರ್ಕ್ ಅನ್ನು ಸಂಪರ್ಕಿಸುವ ನೇರಳೆ ಮಾರ್ಗವನ್ನು ಸುಮಾರು 9.9 ಕಿ.ಮೀ. ವಿಸ್ತರಿಸಲಾಗಿದೆ. ಇದು ಈಗ 49 ಕಿ.ಮೀ. ಉದ್ದದ ಮಾರ್ಗವಾಗಿ ಬದಲಾಗಿದೆ.

ಇಂದಿನಿಂದ ಸಂಸತ್‌ ಅಧಿವೇಶನ 2ನೇ ಭಾಗ

ನವದೆಹಲಿಸಂಸತ್ತಿನ ಬಜೆಟ್‌ ಅಧಿವೇಶನದ 2ನೇ ಹಂತ ಸೋಮವಾರದಿಂದ ಆರಂಭವಾಗಲಿದ್ದು, ಏ.2ರಂದು ಮುಕ್ತಾಯವಾಗಲಿದೆ.

ಸದನದಲ್ಲಿ ಪಕ್ಷಪಾತಿ ಧೋರಣೆ ತಳೆದಿದ್ದಾರೆಂದು ಆರೋಪಿಸಿ ವಿಪಕ್ಷಗಳು ಸ್ಪೀಕರ್‌ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಜ್ಜಾಗಿವೆ. ಮಧ್ಯಪ್ರಾಚ್ಯ ಯುದ್ಧದಲ್ಲಿ ಭಾರತದ ನಿಲುವು, ರಷ್ಯಾ ತೈಲ ಖರೀದಿಯಲ್ಲಿ ಅಮೆರಿಕ ಹಸ್ತಕ್ಷೇಪ, ಮತಪಟ್ಟಿ ವಿಶೇಷ ಪರಿಷ್ಕರಣೆ ಸೇರಿ ಹಲವು ವಿಚಾರಗಳನ್ನು ಕೈಗೆತ್ತಿಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುವ ನಿರೀಕ್ಷೆಯಿದೆ. ಇತ್ತ ಸರ್ಕಾರ, ಟಿಎಂಸಿ ಆಡಳಿತದಿಂದ ರಾಷ್ಟ್ರಪತಿ ಮುರ್ಮು ಅವರಿಗೆ ಆದ ಅವಮಾನವನ್ನು ಪ್ರತ್ಯಸ್ತ್ರವಾಗಿ ಬಳಸುವ ಸಾಧ್ಯತೆಯಿದೆ. ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ಈ ಅಧಿವೇಶನದಲ್ಲಿ ಜಾರಿಗೆ ತರುವ ನಿರೀಕ್ಷೆಯಿದೆ.

ಅಧಿವೇಶನದ ಮೊದಲ ಹಂತ ಜ.28ರಿಂದ ಫೆ.13ರವರೆಗೆ ನಡೆದಿತ್ತು.