ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಹಗರಣ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಈ ಹಗರಣದಲ್ಲಿ ಚತ್ತೀಸಘಡ ಸಿಎಂ ಭೂಪೇಶ್ ಬಾಘೆಲ್ ಸುತ್ತ ಸುತ್ತಿಕೊಳ್ಳುತ್ತಿದೆ. ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಮಹಾದೇವ್ ಬೆಟ್ಟಿಂಗ್ ಆ್ಯಪ್ ಸೇರಿದಂತೆ 22 ಬೆಟ್ಟಿಂಗ್ ಆ್ಯಪ್ ಬ್ಲಾಕ್ ಮಾಡಿದೆ.

ನವದೆಹಲಿ(ನ.05) ಮಹಾದೇವ್ ಬೆಟ್ಟಿಂಗ್ ಹಗರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಸ್ಫೋಟಕ ಮಾಹಿತಿ ಹೊರಬರುತ್ತಿದೆ. ಚತ್ತೀಸಘಡ ಮುಖ್ಯಮಂತ್ರಿ ಭೂಪೇಶ್ ಭಾಘೆಲ್ ಸುತ್ತ ಇದೀಗ ಮಹಾದೇವ್ ಪ್ರಕರಣ ಸುತ್ತಿಕೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಹಾದೇವ್ ಬೆಟ್ಟಿಂಗ್ ಆ್ಯಪ್ ಸೇರಿದಂತೆ 22 ಆ್ಯಪ್ ಬ್ಲಾಕ್ ಮಾಡಿದೆ. ಮಹಾದೇವ್ ಬೆಟ್ಟಿಂಗ್ ಪ್ರಕರಣವನ್ನು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಜಾರಿ ನಿರ್ದೇಶನಾಲಯ ಮಹಾದೇವ್ ಸೇರಿದಂತೆ 22 ಆ್ಯಪ್ ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ 22 ಆ್ಯಪ್ ಬ್ಲಾಕ್ ಮಾಡಿದೆ.

ಎಲೆಕ್ಟ್ರಾನಿಕ್ಸ್ , ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಈ ಮಹತ್ವದ ಆದೇಶ ಹೊರಡಿಸಿದೆ. ಅಕ್ರಮ ಹಣ ವರ್ಗಾವಣೆ, ಕಾನೂನು ಬಾಹಿರ ಕಾರ್ಯಾಚರಣೆ ಆರೋಪ ಹೊತ್ತಿರುವ ಈ ಬೆಟ್ಟಿಂಗ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿ ಪಾಠ ಕಲಿಸಿದೆ. ಈ ಮೂಲಕ ಬೆಟ್ಟಿಂಗ್ ಆ್ಯಪ್‌ಗಳಿಗೆ ಖಡಕ್ ಸಂದೇಶ ರವಾನಿಸಿದೆ. ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಮೇಲೆ ಕೇಂದ್ರ ನಿಗಾ ಇರಿಸಿದ್ದು, ನಿಯಮ ಮೀರಿದರೆ ಬ್ಲಾಕ್ ಮಾಡುವ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್ ಲೂಟಿ ಮಾಡುವಾಗ ಮಹಾದೇವನನ್ನೂ ಬಿಡಲಿಲ್ಲ, ತಲ್ಲಣ ಸೃಷ್ಟಿಸಿದ ಮೋದಿ ಆರೋಪ!

ಮಹಾದೇವ್ ಬೆಟ್ಟಿಂಗ್ ಪ್ರಕರಣದಿಂದ ಭಾರತದಲ್ಲಿ ಅತೀ ದೊಡ್ಡ ಜಾಲವೊಂದು ಇದರ ಹಿಂದೆ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಮಹಾದೇವ್ ಬೆಟ್ಟಿಂಗ್ ಆ್ಯಪ್, ಆನ್ಲೈನ್‌ ಬೆಟ್ಟಿಂಗ್‌ ಆ್ಯಪ್‌ ಆಗಿದೆ. ವಿದೇಶಿ ಮೂಲಗಳಿಂದ ನಿರ್ವಹಿಸಲ್ಪಡುತ್ತಿತ್ತು. ಹಲವು ಆಟಗಳು ಮತ್ತು ಲಾಟರಿಯನ್ನು ಹೊಂದಿರುವ ಇದು ಪ್ರತಿನಿತ್ಯ ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಪಾದನೆ ಮಾಡುತ್ತಿತ್ತು. ಅಲ್ಲದೇ ಇದು 4 ದೇಶಗಳಲ್ಲಿ ಸಕ್ರಿಯ ಕಾಲ್‌ ಸೆಂಟರ್‌ಗಳನ್ನು ಹೊಂದಿತ್ತು ಎನ್ನಲಾಗಿದೆ.

ಈ ಪ್ರಕರಣ ತನಿಖೆ ನಡೆಸುತ್ತಿರುವ ಇಡಿ, ಏಜೆಂಟ್‌ ಅಸೀಂ ದಾಸ್‌ ಎಂಬಾತನ ಬಂಧಿಸಿದೆ. ಈತನ ವಿಚಾರಣೆ ವೇಳೆ, ಮಹದೇವ ಬೆಟ್ಟಿಂಗ್‌ ಆ್ಯಪ್‌ನ ಪ್ರವರ್ತಕರಿಂದ ಬಾಘೇಲ್‌ 508 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಸ್ಫೋಟಕ ಮಾಹಿತಿಯೊಂದು ಬಟಾ ಬಯಲಾಗಿದೆ.. ಅಸೀಂ ದಾಸ್‌‌ನನ್ನು ಈ ಮಹಾವೇವ್ ಬೆಟ್ಟಿಂಗ್ ಪ್ರವರ್ತಕರು ದುಬೈನಿಂದ ಕಳುಹಿಸಿದ್ದರು. ಈತ ಕಾಂಗ್ರೆಸ್‌ ಪಕ್ಷದ ಚುನಾವಣಾ ವೆಚ್ಚಕ್ಕಾಗಿ ದೊಡ್ಡ ಪ್ರಮಾಣದ ಹಣಕಾಸಿನ ಸಹಾಯ ಒದಗಿಸಿದ್ದ. ಅಲ್ಲದೇ ಈತನ ಬಳಿ ವಶಪಡಿಸಿಕೊಳ್ಳಲಾದ 5.39 ಕೋಟಿ ರು. ನಗದನ್ನು ಸಹ ಆ್ಯಪ್‌ನ ಪ್ರವರ್ತಕರು ನೀಡಿದ್ದರು. ಇದನ್ನು ಬಾಘೇಲ್‌ ಅವರಿಗೆ ನೀಡಲು ಸೂಚಿಸಲಾಗಿತ್ತು ಎಂದು ಸಹ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಾಘೇಲ್‌ಗೂ ಮಹದೇವ ‘ಪ್ರಸಾದ’ ವಿತರಣೆ: ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ 508 ಕೋಟಿ ಲಂಚ!