ಲೂಟಿ ಮಾಡುವಾಗ ಕಾಂಗ್ರೆಸ್ ಕನಿಷ್ಠ ಮಹಾದೇವ ಹೆಸರನ್ನೂ ಬಿಡಲಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಚತ್ತೀಸಘಡ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. 

ಚತ್ತೀಸಘಡ(ನ.04) ಕಾಂಗ್ರೆಸ್ ಸರ್ಕಾರ ಸಿಕ್ಕ ಎಲ್ಲಾ ಅವಕಾಶವನ್ನೂ ಕೊಳ್ಳೆ ಹೊಡೆಯಲು ಬಳಕೆ ಮಾಡುತ್ತದೆ. ಈ ವಿಚಾರದಲ್ಲಿ ಕಾಂಗ್ರೆಸ್ ಯಾವತ್ತೂ ಹಿಂದೆ ಬಿದ್ದಿಲ್ಲ. ಶಿವನ ಮತ್ತೊಂದು ಹೆಸರಾದ ಮಹಾದೇವನನ್ನೂ ಬಿಡದೇ ಕಾಂಗ್ರೆಸ್ ಲೂಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಮಹಾದೇವ್ ಬೆಟ್ಟಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಹಲವು ಪ್ರಮುಖರನ್ನು ವಿಚಾರಣೆ ನಡೆಸಿದೆ. ಈ ವೇಳೆ ಚತ್ತೀಸಘಡ ಮುಖ್ಯಮಂತ್ರಿ ಭೂಪೇಶ್ ಭಾಘೆಲ್ ಹೆಸರೂ ಈ ಪ್ರಕರಣದಲ್ಲಿ ಕೇಳಿಬಂದಿದೆ. ಈ ವಿಚಾರ ಪ್ರಸ್ತಾಪಿಸಿದ ಮೋದಿ, ಮಹಾದೇವ ಹೆಸರನ್ನೂ ಬಿಡದೆ ಕಾಂಗ್ರೆಸ್ ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಸಾವಿರಾರೂ ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎನ್ನಲಾದ ಮಹಾದೇವ್‌ ಆನ್‌ಲೈನ್‌ ಬೆಟ್ಟಿಂಗ್‌ ದಂಧೆ ಪ್ರಕರಣದ ತನಿಖೆಯಲ್ಲಿ ಸಿಎಂ ಭೂಪೇಶ್ ಬಾಘೆಲ್ ಹೆಸರನ್ನು ಆರೋಪಿಗಳು ಉಲ್ಲೇಖಿಸಿದ್ದಾರೆ. ಮಹದೇವ್ ಬೆಟ್ಟಿಂಗ್ ಮೂಲಕ ಪಡೆದಿರುವ ಅಕ್ರಮ ಹಣವನ್ನು ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ.

ಚುನಾವಣಾ ಸಮಾವೇಶದಲ್ಲಿ ಚಿತ್ರ ಗಿಫ್ಟ್‌ ನೀಡಿದ್ದ ಬಾಲಕಿಗೆ ಪತ್ರ ಬರೆದು 'ಭಾರತದ ಮಗಳು' ಎಂದ ಪ್ರಧಾನಿ!

ಬಂಧಿತ ಆರೋಪಿಯಿಂದ 5 ಕೋಟಿ ರೂಪಾಯಿಯನ್ನು ಇಡಿ ವಶಪಡಿಸಿಕೊಂಡಿತ್ತು. ವಿಚಾರಣೆ ವೇಳೆ ಈ 5 ಕೋಟಿ ರೂಪಾಯಿ ಬಾಘೆಲ್‌ ಎಂಬ ರಾಜಕಾರಣಿಗೆ ನೀ ನೀಡಲು ಸೂಚಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದಾನೆ. ಇದೇ ವೇಳೆ ಮಹಾದೇವ ಬೆಟ್ಟಿಂಗ್ ಆ್ಯಪ್ ಕಂಪನಿ ಈಗಾಗಲೇ ಬಾಘೆಲ್‌ಗೆ 508 ಕೋಟಿ ರೂಪಾಯಿ ಪಾವತಿಸಿದೆ ಎಂದು ಹೇಳಿಕೆ ನೀಡಿದ್ದ. ಈ ಕುರಿತು ಇದೀಗ ತನಿಖಾ ಸಂಸ್ಥೆಗಳು ವಿಚಾರಣೆ ತೀವ್ರಗೊಳಿಸಿದೆ. 

ಚತ್ತೀಸಘಡದಲ್ಲಿ ಬಿಜೆಪಿಗೆ ಅಧಿಕಾರ ನೀಡಿದರೆ ಜನಸಾಮಾನ್ಯರ ಹಣವನ್ನು ಲೂಟಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇಷ್ಟೇ ಅಲ್ಲ ಹಗರಣಗಳಿಗೆ ಬೀಗ ಹಾಕಲಾಗುತ್ತದೆ. ಬಿಜೆಪಿ ಅಭಿವೃದ್ಧಿ ವಿಚಾರದಲ್ಲಿ ಮತ ಕೇಳಲಿದೆ. ದೇಶದಲ್ಲಿ ಆಗುತ್ತಿರುವ ಮಹತ್ತರ ಅಭಿವೃದ್ಧಿಯನ್ನು ಚತ್ತೀಸಘಡದಲ್ಲಿ ಬಿಜೆಪಿ ಸರ್ಕಾರ ಮಾಡಲಿದೆ. ಈ ಬಾರಿ ಬಿಜೆಪಿಗೆ ಮತ ನೀಡಿ ಅಭೂತಪೂರ್ವ ಅಂತರದಿಂದ ಗೆಲ್ಲಿಸಬೇಕು ಎಂದು ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಛತ್ತೀಸ್‌ಗಢಕ್ಕೆ ಕಾಂಗ್ರೆಸ್‌ ಬಳಿಕ ‘ಮೋದಿ ಗ್ಯಾರಂಟಿ’: 500 ರೂ.ಗೆ ಸಿಲಿಂಡರ್; ಅಯೋಧ್ಯೆಗೆ ತೆರಳಲು ಭಕ್ತರಿಗೆ ನೆರವು!

ಸೌರಭ್‌ ಚಂದ್ರಶೇಖರ್‌ ಹಾಗೂ ರವಿ ಉಪ್ಪಳ್‌ ಎಂಬುವರು ಈ ಮಹಾದೇವ್ ಆ್ಯಪ್‌ನ ನಿರ್ವಾಹಕರು. ಇಬ್ಬರೂ ಛತ್ತೀಸ್‌ಗಢದ ಭಿಲಾಯಿನವರು.ಚತ್ತೀಸಘಡ ಸರ್ಕಾರಕ್ಕೆ ಹಣ ನೀಡಿ ತಮ್ಮ ಅಕ್ರಮ ನಡೆಸಿದ್ದಾರೆ ಅನ್ನೋ ಮಾಹಿತಿ ವಿಚಾರಣೆಯಲ್ಲಿ ಬಹಿರಂಗವಾಗಿದೆ. ಹೊಸ ಹೊಸ ವೆಬ್‌ಸೈಟ್‌ ಹಾಗೂ ಚಾಟ್‌ ಆ್ಯಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡುವ ಮೂಲಕ ಈ ಆ್ಯಪ್‌ ಕಂಪನಿ ಗ್ರಾಹಕರನ್ನು ಸೆಳೆಯುತ್ತಿತ್ತು. ಸಂಪರ್ಕಕ್ಕೆ ಬಂದ ಗ್ರಾಹಕರಿಗೆ ಎರಡು ಸಂಖ್ಯೆಗಳನ್ನು ಕಂಪನಿಯ ಗ್ರಾಹಕ ಸೇವಾ ಪ್ರತಿನಿಧಿಗಳು ನೀಡುತ್ತಿದ್ದರು. ಒಂದು ನಂಬರ್‌, ಬೆಟ್ಟಿಂಗ್ ಆ್ಯಪ್‌ನಲ್ಲಿ ಹಣ ವಿನಿಯೋಜನೆಗೆ. ಮತ್ತೊಂದು, ಗೆದ್ದಾಗ ಮರಳಿ ಹಣ ಪಡೆಯುವುದಕ್ಕೆ ಸಂಬಂಧಿಸಿದ ನಂಬರ್‌.ಕಂಪನಿಗೆ ನಯಾಪೈಸೆ ನಷ್ಟವಾಗದಂತೆ ಮಹದೇವ ಆ್ಯಪ್‌ನಲ್ಲಿ ಬೆಟ್ಟಿಂಗ್‌ ನಡೆಯುತ್ತಿತ್ತು. ಮೂಲಗಳ ಪ್ರಕಾರ ಪ್ರತಿ ದಿನ 200 ಕೋಟಿ ರೂಪಾಯಿ ಆದಾಯಗಳಿಸುತ್ತಿತ್ತು.