ರಾಯ್‌ಬರೇಲಿ ಮತ್ತು ಅಮೇಠಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಸಂವಿಧಾನದ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಪ್ರಧಾನಿ ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್‌ ದೇಶದ್ರೋಹಿಗಳು ಎಂದು ಆರೋಪ. ಕೆಲವೇ ಉದ್ಯಮಿಗಳಿಗೆ ದೇಶವನ್ನು ಮಾರುತ್ತಿದ್ದಾರೆ ಎಂದು ದೂರಿದ ಅವರು, ಈ ಹೇಳಿಕೆಗೆ ಕ್ಷಮೆ ಕೇಳಲ್ಲ ಎಂದಿದ್ದಾರೆ.

ರಾಯ್‌ಬರೇಲಿ/ ಅಮೇಠಿ: ‘ನಿತ್ಯವೂ ಸಂವಿಧಾನದ ಮೇಲೆ ದಾಳಿ ನಡೆಸುವ ಮತ್ತು ದೇಶದ ಹಿತಾಸಕ್ತಿಯನ್ನು ಆಯ್ದ ಉದ್ಯಮಿಗಳಿಗೆ ಮಾರಾಟ ಮಾಡುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಆರ್‌ಎಸ್‌ಎಸ್‌ ದೇಶದ್ರೋಹಿಗಳು’ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ತಮ್ಮ ಲೋಕಸಭಾ ಕ್ಷೇತ್ರ ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ಬುಧವಾರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ರಾಹುಲ್‌, ‘ನರೇಗಾ ಯೋಜನೆ ದುರ್ಬಲಗೊಳಿಸುವ ಮೂಲಕ, ಜಾತಿಗಣತಿ ನಡೆಸದೇ ಇರುವ ಮೂಲಕ ಮತ್ತು ಕೆಲವೇ ಕೆಲವು ಉದ್ಯಮಿಗಳಿಗೆ ನೆರುವ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ 24 ಗಂಟೆಯೂ ಸಂವಿಧಾನದ ಮೇಲೆ ದಾಳಿ ಮಾಡುವ ಕೆಲಸ ಮಾಡುತ್ತಲೇ ಇದ್ದಾರೆ. ಅಲ್ಲದೆ, ಮೋದಿ ಕೆಲವೇ ಕೆಲವು ಉದ್ಯಮಿಗಳಿಗೆ ದೇಶ ಮಾರಿದ್ದಾರೆ’ ಎಂದು ಆರೋಪಿಸಿದರು.’

ತಾವು 5 ದೇಶಗಳ ವಿದೇಶ ಪ್ರವಾಸಕ್ಕೆ ತೆರಳುತ್ತಾರೆ ಜೊತೆಗೆ, ಒಂದೆಡೆ ಜನರಿಗೆ ಇಂಧನ ಮಿತವ್ಯಯ ಮಾಡಿ ಎಂದು ಕರೆಕೊಡುವ ಪ್ರಧಾನಿ, ಮತ್ತೊಂದೆಡೆ ತಾವು 5 ದೇಶಗಳ ವಿದೇಶ ಪ್ರವಾಸಕ್ಕೆ ತೆರಳುತ್ತಾರೆ. ಹೀಗಾಗಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಪ್ರಧಾನಿ ಮೋದಿ, ಶಾ ಬಗ್ಗೆ ಮಾತನಾಡಲು ಬಂದಾಗ ನೀವು ಅವರಿಗೆ ‘ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಬಿಜೆಪಿಯವರು ದೇಶದ್ರೋಹಿಗಳು’ ಎಂದು ನೇರವಾಗಿ ಹೇಳಬೇಕು. ‘ನೀವು ಸಂವಿಧಾನದ ಮೇಲೆ ದಾಳಿ ಮಾಡಲು ಹೊರಟಿದ್ದೀರಿ, ದೇಶವನ್ನು ಮಾರುವ ಕೆಲಸ ಮಾಡಿದ್ದೀರಿ’ ಎಂದು ಮುಖಕ್ಕೆ ಹೊಡೆದಂತೆ ಹೇಳಬೇಕು’ ಎಂದು ಜನರಿಗೆ ಕರೆ ನೀಡಿದರು.

ಅಮೇಠಿಯಲ್ಲೂ ತಮ್ಮ ಹೇಳಿಕೆ ಪುನರುಚ್ಚರಿಸಿದ ರಾಹುಲ್

ಬಳಿಕ ಅಮೇಠಿಯಲ್ಲೂ ತಮ್ಮ ಹೇಳಿಕೆ ಪುನರುಚ್ಚರಿಸಿದ ರಾಹುಲ್ ಗಾಂಧಿ, ‘ಮೋದಿ ಮತ್ತು ಅಮಿತ್‌ ಶಾ ದೇಶದ್ರೋಹಿಗಳು ಎಂದು ನಾನು ರಾಯ್‌ಬರೇಲಿಯಲ್ಲಿ ಹೇಳಿದ್ದೆ. ಯಾರಾದರೂ ನಿತ್ಯವೂ ಸಂವಿಧಾನವನ್ನು ದುರ್ಬಲಗೊಳಿಸುತ್ತಲೇ ಇದ್ದರೆ ಮತ್ತು ಅದನ್ನು ನಾಶ ಮಾಡುತ್ತಲೇ ಇದ್ದರೆ ಅವರನ್ನು ದೇಶ ದ್ರೋಹಿಗಳು ಅನ್ನದೇ ಮತ್ತಿನ್ನೇನು ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು. ಜೊತೆಗೆ ಇಂಥ ಹೇಳಿಕೆ ಬಗ್ಗೆ ನಾನು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸುತ್ತಾರೆ. ಆದರೆ ನಾನು ಎಂದಿಗೂ ಈ ಬಗ್ಗೆ ಕ್ಷಮೆ ಯಾಚಿಸಲಾರೆ. ನನಗೆ ಅವರ ಬಗ್ಗೆ ಹೆದರಿಕೆ ಏನೂ ಇಲ್ಲ ಎಂದು ಹೇಳಿದರು.

ಇದು ಉಗ್ರರ ಪದ- ಬಿಜೆಪಿ ಕಿಡಿ: ರಾಹುಲ್‌ ಮಾತಿಗೆ ಬಿಜೆಪಿ ಕಿಡಿಕಾರಿದೆ. ‘ಇದು ಉಗ್ರರು ಬಳಸುವ ಪದ’ ಎಂದು ಪಕ್ಷದ ವಕ್ತಾರ ಪ್ರದೀಪ್‌ ಭಂಡಾರಿ ಕಿಡಿಕಾರಿದ್ದಾರೆ. ಇನ್ನು ರಾಹುಲ್‌ ದೇಶದ ಕ್ಷಮೆ ಕೇಳಲಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ, ‘ಪ್ರಧಾನಿಯವರ ಬಗ್ಗೆ ಲೋಕಸಭಾ ವಿಪಕ್ಷ ನಾಯಕ ಹೇಳಿರುವ ಮಾತುಗಳು ಅವರು ಪಾಲಿಸುವುದನ್ನು ಪ್ರತಿಬಿಂಬಿಸುತ್ತದೆ. ಕಾಂಗ್ರೆಸ್‌ ಯಾವಾಗಲೂ ಅವರ ಬಗ್ಗೆ ಕೆಟ್ಟ ಪದ ಬಳಸಿ, ಅವಮಾನಿಸುತ್ತದೆ. ಆ ರೀತಿ ಮಾತನಾಡುವ ಮುನ್ನ ರಾಹುಲ್ ಗಾಂಧಿ ಮೊದಲು ತಮ್ಮ ಕುಟುಂಬ ನೋಡಿಕೊಳ್ಳಬೇಕು’ ಎಂದು ತಿರುಗೇಟು ನೀಡಿದ್ದಾರೆ.