- Home
- Karnataka Districts
- ಬಿಡದಿ ಟೌನ್ಶಿಪ್ ಬಗ್ಗೆ ದೇವೇಗೌಡರು ರಾಹುಲ್ ಗಾಂಧಿಗೆ ಯಾಕೆ ಪತ್ರ ಬರೀತಾರೆ? ಅವರು ಮೋದಿಗೆ ಪತ್ರ ಬರೆಯಬೇಕು:ಡಿಕೆಶಿ
ಬಿಡದಿ ಟೌನ್ಶಿಪ್ ಬಗ್ಗೆ ದೇವೇಗೌಡರು ರಾಹುಲ್ ಗಾಂಧಿಗೆ ಯಾಕೆ ಪತ್ರ ಬರೀತಾರೆ? ಅವರು ಮೋದಿಗೆ ಪತ್ರ ಬರೆಯಬೇಕು:ಡಿಕೆಶಿ
ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆ ಕುಮಾರಸ್ವಾಮಿ ಕಾಲದ್ದೇ ಎಂದು ಸ್ಪಷ್ಟಪಡಿಸಿ, ರೈತರಿಗೆ ಶೀಘ್ರ ಪರಿಹಾರದ ಭರವಸೆ ನೀಡಿದ್ದಾರೆ.

ಸೋನಿಯಾ, ರಾಹುಲ್ಗೆ ದೇವೇಗೌಡರ ಪತ್ರ: ಡಿಕೆಶಿ ಪ್ರಶ್ನೆಗಳ ಸುರಿಮಳೆ
ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ತಮ್ಮ ಸರ್ಕಾರದ ಮೂರು ವರ್ಷಗಳ ಐತಿಹಾಸಿಕ ಸಾಧನೆಗಳನ್ನು ಹೆಮ್ಮೆಯಿಂದ ಜನರ ಮುಂದೆ ತೆರೆದಿಟ್ಟಿದ್ದಾರೆ.
ಬಿಡದಿ ಟೌನ್ಶಿಪ್ ಮತ್ತು ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಹೆಚ್.ಡಿ. ದೇವೇಗೌಡರು ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವುದನ್ನು ಡಿ.ಕೆ. ಶಿವಕುಮಾರ್ ತೀವ್ರವಾಗಿ ಪ್ರಶ್ನಿಸಿದ್ದಾರೆ. ಭೂಸ್ವಾಧೀನ ವಿರೋಧಿಸಿ ದೇವೇಗೌಡರು ರಾಹುಲ್ ಗಾಂಧಿಯವರಿಗೆ ಪತ್ರ ಬರೆಯುತ್ತಿರುವುದರ ಅರ್ಥವೇನು? ರಾಹುಲ್ ಗಾಂಧಿ ಅವರೇನಾದರೂ ಈಗ ಅಧಿಕಾರದಲ್ಲಿದ್ದಾರೆಯೇ? ಅವರು ಪತ್ರ ಬರೆಯಬೇಕಿರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಂದು ತಿರುಗೇಟು ನೀಡಿದರು.

ದೇವೇಗೌಡರ ಪಂಥಾಹ್ವಾನ
ಇದೇ ವೇಳೆ ದೇವೇಗೌಡರು ಚರ್ಚೆಗೆ ಬರುವಂತೆ ಹಾಕಿರುವ ಪಂಥಾಹ್ವಾನದ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಅವರ ಆರೋಗ್ಯದ ದೃಷ್ಟಿಯಿಂದ ನಾನು ಹೆಚ್ಚೇನೂ ಮಾತನಾಡಲ್ಲ, ಅವರನ್ನು ಚರ್ಚೆಗೆ ಕರೆಯುವುದೂ ಇಲ್ಲ. ಆದರೆ, ಇತ್ತೀಚೆಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅಪಾರ ಪ್ರೀತಿಯಿಂದ ಮಾತನಾಡುತ್ತಿದ್ದಾರೆ. ಆ ಪ್ರೀತಿಯ ಹಿಂದಿನ ಮರ್ಮವೇನೋ ನನಗೆ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಇದು ಕುಮಾರಸ್ವಾಮಿ ಕಾಲದ ಯೋಜನೆ, ರೈತರು ಭೂಮಿಗೆ ಒಪ್ಪಿದ್ದಾರೆ!
ಬಿಡದಿ ಟೌನ್ಶಿಪ್ ಕುರಿತು ಸ್ಪಷ್ಟನೆ ನೀಡಿದ ಡಿ.ಕೆ. ಶಿವಕುಮಾರ್, ಇದು ನನ್ನ ಅವಧಿಯಲ್ಲಿ ಜಾರಿಗೆ ಬಂದ ಯೋಜನೆಯಲ್ಲ. ಸ್ವತಃ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಂದ ಯೋಜನೆ. ಆಗ ಇದನ್ನು 'ರೆಡ್ ಝೋನ್' ಮಾಡಲಾಗಿತ್ತು ಮತ್ತು ಸಾಕಷ್ಟು ಜನ ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಈಗ ನಾವು ಗ್ರೇಟರ್ ಬೆಂಗಳೂರು ಅಥಾರಿಟಿ' (GBA) ಅಡಿಯಲ್ಲಿ ಸ್ಮಾರ್ಟ್ ಟೌನ್ಶಿಪ್ ಮಾಡಲು ಹೊರಟಿದ್ದೇವೆ. ಬಿಡದಿಯನ್ನು ಬೆಂಗಳೂರಿಗೆ ಸೇರಿಸಿದ್ದಕ್ಕಾಗಿ ಸಾವಿರಾರು ರೈತರು ನಮಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೆಐಎಡಿಬಿ (KIADB) ಮೂಲಕವೂ 1,000 ಎಕರೆ ಭೂಸ್ವಾಧೀನ ಮಾಡಲಾಗುತ್ತಿದೆ ಎಂದರು.
, ಜೂನ್ ಮೊದಲ ವಾರದಿಂದಲೇ ರೈತರ ಖಾತೆಗೆ ಮೂರು ಹಂತಗಳಲ್ಲಿ ಹಣ ಬಿಡುಗಡೆ
ರೈತರ ಹಿತರಕ್ಷಣೆಯ ಕುರಿತು ಮಾತನಾಡುತ್ತಾ, ರೈತರು ಸರ್ಕಾರ ಘೋಷಿಸಿರುವ ಪರಿಹಾರಕ್ಕೆ ಒಪ್ಪಿಗೆ ಸೂಚಿಸಿ, ಭೂಮಿ ನೀಡಲು ಮುಂದೆ ಬಂದಿದ್ದಾರೆ. ಅಲ್ಲದೆ ಪರಿಹಾರದ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನು ಕೇವಲ ಎರಡು ದಿನಗಳಲ್ಲಿ ಇದರ ಅಧಿಕೃತ ನೋಟಿಫಿಕೇಶನ್ ಹೊರಬೀಳಲಿದ್ದು, ಜೂನ್ ಮೊದಲ ವಾರದಿಂದಲೇ ರೈತರ ಖಾತೆಗೆ ಮೂರು ಹಂತಗಳಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಶೇ. 40 ರಷ್ಟು ಕಮರ್ಷಿಯಲ್ ಪಾಲು ಇರಲಿದೆ. ರೈತರು ಯಾರೂ ತಮ್ಮ ಜಮೀನನ್ನು ಅಗ್ಗದ ಬೆಲೆಗೆ ಮಧ್ಯವರ್ತಿಗಳಿಗೆ ಮಾರಿಕೊಳ್ಳಬಾರದು ಎಂದು ಮನವಿ ಮಾಡಿದರು.
ಕಬ್ಬಿಣದ ಬೆಲೆ ಕಡಿಮೆ ಮಾಡಿ ಅಣ್ಣಾವ್ರೇ , ಕುಮಾರಸ್ವಾಮಿಗೆ ಟಾಂಗ್
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಕಿರುವ ಬಹಿರಂಗ ಚರ್ಚೆಯ ಸವಾಲನ್ನು ಮುಕ್ತವಾಗಿ ಸ್ವೀಕರಿಸಿದ ಡಿಸಿಎಂ, ಕುಮಾರಣ್ಣ ಅವರೇ ಸಮಯ ಮತ್ತು ಸ್ಥಳವನ್ನು ನಿಗದಿಪಡಿಸಲಿ, ನಾನು ಚರ್ಚೆಗೆ ಸದಾ ಸಿದ್ಧ. ಹಿಂದೆ ಸಾತನೂರಿನಲ್ಲೂ ಅವರ ಸವಾಲನ್ನು ಸ್ವೀಕರಿಸಿದ್ದೆ, ಈಗಲೂ ರೆಡಿ ಇದ್ದೇನೆ. ನನ್ನ ಜೊತೆಗೆ ಶಾಸಕ ಬಾಲಕೃಷ್ಣ ಕೂಡ ಬರುವುದಾಗಿ ಹೇಳಿದ್ದಾರೆ ಎಂದರು.
ಮುಂದುವರಿದು ರೈತರ ಮನವಿಯೊಂದನ್ನು ಕುಮಾರಸ್ವಾಮಿ ಅವರ ಗಮನಕ್ಕೆ ತಂದ ಶಿವಕುಮಾರ್, ಇತ್ತೀಚೆಗೆ ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ಗಗನಕ್ಕೇರಿದೆ. ಕುಮಾರಸ್ವಾಮಿ ಅವರು ದೇಶದ ಉಕ್ಕು (ಸ್ಟೀಲ್) ಸಚಿವರಾಗಿದ್ದಾರೆ. 'ಸ್ವಲ್ಪ ಕಬ್ಬಿಣದ ಬೆಲೆ ಕಡಿಮೆ ಮಾಡಲು ಕುಮಾರಣ್ಣನಿಗೆ ಹೇಳಿ' ಎಂದು ರೈತರು ನನ್ನ ಬಳಿ ವಿನಂತಿಸಿದ್ದಾರೆ. ರೈತರ ಪರವಾಗಿ ನಾನು ಕೇಂದ್ರ ಸಚಿವ ಕುಮಾರಣ್ಣ ಅವರಲ್ಲಿ ಕಬ್ಬಿಣದ ಬೆಲೆ ಇಳಿಸುವಂತೆ ಕೋರುತ್ತೇನೆ ಎಂದು ಟಾಂಗ್ ನೀಡಿದರು.
ದೇಶಕ್ಕೇ ಮಾದರಿಯಾದ ಕರ್ನಾಟಕದ 3 ವರ್ಷಗಳ ಸಾಧನೆ!
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಯಶಸ್ವಿಯಾಗಿ 3 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳ ರಿಪೋರ್ಟ್ ಕಾರ್ಡ್ ಅನ್ನು ಡಿಸಿಎಂ ಬಿಡುಗಡೆ ಮಾಡಿದರು.
ನಮ್ಮ ಸರ್ಕಾರದ 3 ವರ್ಷಗಳ ಸಾಧನೆ ಇಡೀ ದೇಶಕ್ಕೆ ದಿಕ್ಸೂಚಿಯಾಗಿದೆ. ಮೊದಲು ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ್ದ ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ ಮತ್ತು ಬಿಹಾರ್ ರಾಜ್ಯಗಳು ಈಗ ನಮ್ಮದೇ ಮಾದರಿಯನ್ನು ತಮ್ಮ ರಾಜ್ಯಗಳಲ್ಲಿ ಘೋಷಣೆ ಮಾಡಿ ನಮ್ಮನ್ನು ಫಾಲೋ ಮಾಡುತ್ತಿವೆ. ರಾಜ್ಯದ 1 ಕೋಟಿ 34 ಲಕ್ಷ ಕುಟುಂಬಗಳು ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದು, ನೇರವಾಗಿ 1.30 ಲಕ್ಷ ಕೋಟಿ ರೂಪಾಯಿ ಜನರಿಗೆ ತಲುಪಿದೆ. ಗೃಹಲಕ್ಷ್ಮಿಯಲ್ಲಿ 1 ಕೋಟಿ 24 ಲಕ್ಷ ಮಹಿಳೆಯರ ಖಾತೆಗೆ ಒಟ್ಟು 69,000 ಕೋಟಿ ರೂ. ಜಮೆಯಾಗಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ 18,943 ಕೋಟಿ ರೂ. ಭರಿಸಲಾಗಿದೆ. ಗೃಹಜ್ಯೋತಿ ಉಚಿತ ವಿದ್ಯುತ್ಗಾಗಿ 12,000 ಕೋಟಿ ರೂ. ನೀಡಲಾಗಿದೆ. ಯುವನಿಧಿ ಮೂಲಕ ನಿರುದ್ಯೋಗಿ ಯುವಕರಿಗೆ 915 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಕೋವಿಡ್ನಿಂದ ತತ್ತರಿಸಿದ ಜನರಿಗೆ ಏನೂ ಮಾಡಲಾಗಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ಮೇಲೆ, ಕೋವಿಡ್ ಸಮಯದಲ್ಲಿ ಪ್ರಾಣ ಕಳೆದುಕೊಂಡ ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ನೆರವಾಗಿದ್ದೇವೆ ಎಂದರು.
ಇ-ಖಾತಾ ಕ್ರಾಂತಿ ಮತ್ತು ಜಿಬಿಎ ಚುನಾವಣೆ
ಮನೆ ಬಾಗಿಲಿಗೆ 'ಇ-ಖಾತಾ' ಹಂಚುವ ಸರ್ಕಾರದ ನಿರ್ಧಾರವನ್ನು ಕ್ರಾಂತಿಕಾರಿ ಹೆಜ್ಜೆ ಎಂದು ಬಣ್ಣಿಸಿದ ಅವರು, ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು 100 ದಿನಗಳ ಕಾಲಾವಕಾಶ ನೀಡಲಾಗಿದ್ದು, ಬಳಿಕ ನಿಯಮಾನುಸಾರ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ಇನ್ನು ಜಿಬಿಎ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಆಗಸ್ಟ್ 31ರ ಒಳಗಾಗಿ ಚುನಾವಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಚುನಾವಣಾ ಆಯೋಗ ತನ್ನ ಪಾಡಿಗೆ ತಾನು ಪ್ರಕ್ರಿಯೆ ನಡೆಸಲಿದೆ, ನಾವು ಎದುರಿಸಲು ಸಿದ್ಧರಿದ್ದೇವೆ ಎಂದರು.
ನಾವು ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ವಿರೋಧ ಪಕ್ಷಗಳು ಮಾಡುವ ಟೀಕೆಗಳನ್ನು ನಾವು ಸಂತೋಷದಿಂದ ಸ್ವೀಕರಿಸುತ್ತೇವೆ ಮತ್ತು ನಮ್ಮ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇವೆ. ಸರ್ಕಾರಕ್ಕೆ 3 ವರ್ಷ ತುಂಬಿದ ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿಗಳು, ಮಾಧ್ಯಮ ಮಿತ್ರರು ಮತ್ತು ವಿರೋಧ ಪಕ್ಷದ ನಾಯಕರಿಗೂ ಧನ್ಯವಾದಗಳು ಎಂದು ಡಿ.ಕೆ. ಶಿವಕುಮಾರ್ ಜವಾಬ್ದಾರಿಯುತವಾಗಿ ತಮ್ಮ ಮಾತು ಮುಗಿಸಿದರು.

